ಕುಷ್ಟಗಿ: ತಾಲೂಕಿನ ಹಿರೇಮನ್ನಾಪುರದಲ್ಲಿ ಕಾಶಿವಿಶ್ವನಾಥ ದೇವರ ಕಳಶಾರೋಹಣ, ಜಾತ್ರಾಮಹೋತ್ಸವ ಹಾಗೂ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಗುರುವಾರ ಜರುಗಿತು.
ಜಾತ್ರಾಮಹೋತ್ಸವದ ಅಂಗವಾಗಿ ಬೆಳಗಿನ ಜಾವ ದೇವರಿಗೆ ವಿಶೇಷ ಪೂಜೆ,ಅಭಿಷೇಕ,ಅಲಂಕಾರ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.ಸಾಮೂಹಿಕ ವಿವಾಹ: ಕಾಶಿ ವಿಶ್ವನಾಥ ದೇವರ ಕಳಶಾರೋಹಣ, ಜಾತ್ರಾ ಮಹೋತ್ಸವ ಹಾಗೂ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಕಾರ್ಯಕ್ರಮದ ಅಂಗವಾಗಿ 10 ಜೋಡಿಗಳ ಸಾಮೂಹಿಕ ವಿವಾಹಗಳು ನಡೆದವು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕುಷ್ಟಗಿಯ ಮದ್ದಾನೇಶ್ವರ ಮಠದ ಕರಿಬಸವ ಶ್ರೀಗಳು ಮಾತನಾಡಿ, ಸಾಮೂಹಿಕ ವಿವಾಹ ಸಾಮಾಜಿಕ ಏಕತೆ ಬೆಳೆಯುತ್ತಿದ್ದು ಅನವಶ್ಯಕ ಖರ್ಚು ಕಡಿಮೆ ಮಾಡುವ ಉತ್ತಮ ಸಂಪ್ರದಾಯವಾಗಿದ್ದು, ಸಮಾಜದಲ್ಲಿ ಸೌಹಾರ್ದತೆ ಹೆಚ್ಚಿಸುತ್ತದೆ ಎಂದ ಸಾಮೂಹಿಕ ವಿವಾಹಗಳು ಬಡವರ ಮದುವೆಗಳಲ್ಲ ಭಾಗ್ಯವಂತರ ಮದುವೆಗಳು ಸಮಾಜಮುಖಿ ಕಾರ್ಯಗಳಾಗಿದ್ದು ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.ಗುಡದೂರ ನಿಲಕಂಠಯ್ಯ ತಾತನವರು ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗುವ ಜತೆಗೆ ಪ್ರಗತಿಗೆ ಪೂರಕವಾಗುತ್ತದೆ.ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುದುವುದಲ್ಲದೆ,ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ ವಧು–ವರರು ದಾಂಪತ್ಯ ಜೀವನ ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ದೊಡ್ಡಯ್ಯ ಗದ್ದಡಕಿ, ಕಳಕಪ್ಪ ಪುರದ, ಪುಂಡಲಿಕಪ್ಪ ಬಡಕುಂಟಿ, ದೊಡ್ಡಬಸಯ್ಯ ಹಿರೇಮಠ ಬಸವರಾಜ ಮೇಳಿ, ಸಣ್ಣೆಪ್ಪ ಲೈನದ, ಕಳಕಪ್ಪ ಪುರದ, ಕಳಕಪ್ಪ ಬಳೂಟಗಿ, ದೇವಪ್ಪ ಗಂಗನಾಳ, ನಾಗಪ್ಪ ಜಿಗಜಿನ್ನಿ,ಶಿವಾನಂದಯ್ಯ ಹಿರೇಮಠ, ಸಂಗನಗೌಡ ಕೊಡಗಲಿ, ಇಮಾಮಸಾಬ್ ಗರಡಿಮನಿ, ಗವಿಸಿದ್ದಪ್ಪ ಸಾಹುಕಾರ, ಕಲ್ಲಯ್ಯ ಶಾಸ್ತ್ರಿಗಳು, ಬಾಶುಸಾಬ್ ಜಿನ್ನದ ಸೇರಿದಂತೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಜಾತ್ರೆ ಸಾಮೂಹಿಕ ವಿವಾಹ ಸಮಾರಂಭದ ನಿಮಿತ್ತ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.