ಸಾರಾಂಶ
ಚುನಾವಣೆಯಲ್ಲಿ ಜನ ಬೆಂಬಲದಿಂದ ಗೆಲ್ಲಲಾಗದ ಹತಾಶೆಯಿಂದ ಕಾರ್ಕಳ ಕಾಂಗ್ರೆಸ್ ನಾಯಕರು ಬಿಜೆಪಿಯ ಕಾರ್ಯಕರ್ತರನ್ನು ಹೆದರಿಸಿ ಬೆದರಿಸಿ ವೈಯಕ್ತಿಕವಾಗಿ ಮಟ್ಟಹಾಕುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ನಾನಾ ರೀತಿಯ ಅಪಪ್ರಚಾರದ ನಾಟಕವಾಡಿದರೂ ಯಶಸ್ಸು ಕಾಣದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟ ಕಾರ್ಕಳ ಕಾಂಗ್ರೆಸ್, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿರಿಸಿಕೊಂಡಿದೆ. ಇದೀಗ ಕಾಂಗ್ರೆಸಿಗರು ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಗೆ ಹಲ್ಲೆ ಮಾಡುವ ಮಟ್ಟಕ್ಕೆ ಇಳಿದಿರುವುದು ತೀರ ಆತಂಕಕಾರಿ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ಬೆಂಬಲದಿಂದ ಗೆಲ್ಲಲಾಗದ ಹತಾಶೆಯಿಂದ ಕಾರ್ಕಳ ಕಾಂಗ್ರೆಸ್ ನಾಯಕರು ಬಿಜೆಪಿಯ ಕಾರ್ಯಕರ್ತರನ್ನು ಹೆದರಿಸಿ ಬೆದರಿಸಿ ವೈಯಕ್ತಿಕವಾಗಿ ಮಟ್ಟಹಾಕುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದೆ ಎಂಬ ಭಂಡ ಧೈರ್ಯದಿಂದ ಸರ್ಕಾರಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರಿಗೆ ವೈಯಕ್ತಿಕವಾಗಿ ಹಾಗೂ ಅವರ ಉದ್ಯಮಗಳಿಗೆ ತೊಂದರೆ ನೀಡುವ ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಇತಹ ಅಸಹ್ಯ, ನೀಚ ರಾಜಕಾರಣವನ್ನು ಇಡೀ ರಾಜ್ಯವೇ ಕಂಡಿರಲಿಕ್ಕಿಲ್ಲ, ಒಂದು ಪಕ್ಷದ ಪರಾಜಿತ ಅಭ್ಯರ್ಥಿ ಮತ್ತು ಆತನ ಪಕ್ಷ ಮತ್ತೊಮ್ಮೆ ಜನ ವಿಶ್ವಾಸ ಗಳಿಸುವ ಪ್ರಯತ್ನ ಮಾಡಬೇಕೇ ವಿನಃ ಈ ರೀತಿಯ ನಡೆ ರಾಜ್ಯ ರಾಜಕಾರಣಕ್ಕೇ ಒಂದು ಕಪ್ಪು ಚುಕ್ಕೆ. ಇದು ಕಾಂಗ್ರೆಸ್ ಪಕ್ಷವನ್ನೇ ವಿನಾಶದ ಹಾದಿಗೆ ಕೊಂಡೊಯ್ಯಲಿದೆ ಎಂದು ಹೇಳಿದ್ದಾರೆ.
ಕಾರ್ಕಳ ಕಾಂಗ್ರೆಸ್ನ ಈ ದ್ವೇಷ ರಾಜಕಾರಣ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂದು ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಮಟ್ಟಕ್ಕೆ ಮುಂದುವರಿದಿರುವುದು ಬಹಳ ಆತಂಕಕಾರಿ ಹಾಗೂ ಇದು ಕೇವಲ ಬಿಜೆಪಿ ಕಾರ್ಯಕರ್ತನ ಮೇಲೆ ನಡೆಸಿರುವ ಹಲ್ಲೆ ಅಲ್ಲ ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದನ್ನು ಕಾರ್ಕಳ ಬಿಜೆಪಿ ಬಹಳ ಕಟುವಾಗಿ ಖಂಡಿಸುತ್ತದೆ. ಇಂತಹ ದ್ವೇಷ ರಾಜಕಾರಣದ ವಿರುದ್ಧ ಬಿಜೆಪಿಯ ಹೋರಾಟ ಇನ್ನಷ್ಟು ತೀವ್ರವಾಗಲಿದೆ ಎಂದು ತಿಳಿಸಿದರು.