ಸಾರಾಂಶ
ಭಜಕರ ಸಮಾವೇಶದಲ್ಲಿ ವಕೀಲರರಾದ ಬಿ.ಕೆ. ಧನಂಜಯ ರಾವ್, ಸುಬ್ರಹ್ಮಣ್ಯ ಕುಮಾರ್ ಆಗರ್ತ, ಕುಣಿತ ಭಜನಾ ತರಬೇತಿದಾರರ ಸಂಘದ ಅಧ್ಯಕ್ಷ ಸಂದೇಶ ಸುವರ್ಣ, ತಾಲೂಕಿನ ಎಲ್ಲ ಭಜನಾ ಮಂಡಳಿಗಳ ಭಜಕರು ಉಪಸ್ಥಿತರಿರುತ್ತಾರೆ ಎಂದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕುಣಿತ ಭಜನೆ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿುರುವ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಭಜನಾ ಪರಿಷತ್ ಬೆಳ್ತಂಗಡಿ ಮತ್ತು ಕುಣಿತ ಭಜನಾ ತರಬೇತಿದಾರರ ಸಂಘದ ನೇತೃತ್ವದಲ್ಲಿ ಎಲ್ಲ ಹಿಂದೂಪರ ಸಂಘಟನೆಗಳ ಹಾಗೂ ತಾಲೂಕಿನ ಎಲ್ಲ ಭಜನಾ ಮಂಡಳಿಗಳ ಸಹಕಾರದೊಂದಿಗೆ ತಾಲೂಕಿನ ಎಲ್ಲ ಭಜಕರು ನ.4ರಂದು ಬೆಳಗ್ಗೆ 9.30ಕ್ಕೆ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಅಯ್ಯಪ್ಪ ದೇವಸ್ಥಾನದಿಂದ ಭಜನಾ ಮೆರವಣಿಗೆ ನಡೆಸಲಿದ್ದಾರೆ.ಬೆಳ್ತಂಗಡಿ ಮಿನಿ ವಿಧಾನಸೌದದ ಬಳಿಯಲ್ಲಿ ಸಮಾವೇಶಗೊಂಡು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಭಜನಾ ಪರಿಷತ್ ರಾಜ್ಯ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್ ಮಂಗಳವಾರ ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಜಕರ ಸಮಾವೇಶದಲ್ಲಿ ವಕೀಲರರಾದ ಬಿ.ಕೆ. ಧನಂಜಯ ರಾವ್, ಸುಬ್ರಹ್ಮಣ್ಯ ಕುಮಾರ್ ಆಗರ್ತ, ಕುಣಿತ ಭಜನಾ ತರಬೇತಿದಾರರ ಸಂಘದ ಅಧ್ಯಕ್ಷ ಸಂದೇಶ ಸುವರ್ಣ, ತಾಲೂಕಿನ ಎಲ್ಲ ಭಜನಾ ಮಂಡಳಿಗಳ ಭಜಕರು ಉಪಸ್ಥಿತರಿರುತ್ತಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಭಜನಾ ಪರಿಷತ್ ತಾಲೂಕು ಅಧ್ಯಕ್ಷ ವೆಂಕಟೇಶ್ವರ ಭಟ್ ಕಜೆ, ಕುಣಿತ ಭಜನಾ ತರಬೇತಿದಾರರ ಸಂಘದ ಕಾರ್ಯದರ್ಶಿ ಹರೀಶ್ ನೆರಿಯ, ಭಜನಾ ಪರಿಷತ್ ಸಂಘಟನಾ ಕಾರ್ಯದರ್ಶಿ ನಾಗೇಶ್ ನೆರಿಯ, ಭಜನಾ ಪರಿಷತ್ ಸಂಯೋಜಕಿ ಬೇಬಿ ಉಮೇಶ ಪೂಜಾರಿ, ಭಜನಾ ಪರಿಷತ್ ಸಂಯೋಜಕ ಸೋಮನಾಥ್, ಸದಸ್ಯೆ ಗೀತಾ ವಿ. ನಾಯ್ಕ ಇದ್ದರು.