23ರಂದು ಅರಣ್ಯ ಭೂಮಿ ಪೀಡಿತರು, ನಿರಾಶ್ರಿತರು, ಸಂತ್ರಸ್ತರ ಬೃಹತ್ ಸಭೆ

| Published : Aug 14 2025, 01:00 AM IST

23ರಂದು ಅರಣ್ಯ ಭೂಮಿ ಪೀಡಿತರು, ನಿರಾಶ್ರಿತರು, ಸಂತ್ರಸ್ತರ ಬೃಹತ್ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ರಾಜ್ಯದ ಮಲೆನಾಡು ಮತ್ತು ಕರಾವಳಿ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಮಂಗಳೂರು, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಹಲವಾರು ದಶಕಗಳಿಂದ ಭೂಮಿ ವಿಚಾರದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಪರಿಹಾರ ಸಿಕ್ಕಿಲ್ಲ ಎಂದು ಅಹಿಂದ ಚಳುವಳಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಹೇಳಿದರು.

ಅಹಿಂದ ಚಳುವಳಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಸುದ್ದಿಗೋಷ್ಠಿ

ಕನ್ನಡಪ್ರಭ ವಾರ್ತೆ, ತರೀಕೆರೆ

ರಾಜ್ಯದ ಮಲೆನಾಡು ಮತ್ತು ಕರಾವಳಿ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಮಂಗಳೂರು, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಹಲವಾರು ದಶಕಗಳಿಂದ ಭೂಮಿ ವಿಚಾರದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಪರಿಹಾರ ಸಿಕ್ಕಿಲ್ಲ ಎಂದು ಅಹಿಂದ ಚಳುವಳಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮಂತ್ರಿ ಹಾಗೂ ಹೋರಾಟ ಗಾರರಾದ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ. ಮುಖ್ಯಮಂತ್ರಿ, ಕಂದಾಯ, ಅರಣ್ಯ, ಕೈಗಾರಿಕಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರನ್ನು ಒಳಗೊಂಡು, ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಅರಣ್ಯ ಭೂಮಿ ಪೀಡಿತರ, ಭಾದಿತರ, ನಿರಾಶ್ರಿತರ, ಸಂತ್ರಸ್ತರ ಬೃಹತ್ ಸಭೆ ನಡೆಸಲು ಅಹಿಂದ ಚಳುವಳಿ ಸಂಘಟನೆ ಆ. 23 ರಂದು ಬೆಳಿಗ್ಗೆ 10.30 ಕ್ಕೆ ಶಿವಮೊಗ್ಗದ ಆರ್ ಟಿ ಒ ರಸ್ತೆಯ ಸರ್ಕಾರಿ ನೌಕರರ ಕಟ್ಟಡದಲ್ಲಿ ಪೂರ್ವಭಾವಿ ಸಭೆ ಕರೆಯ ಲಾಗಿದೆ. ಈ ಸಭೆಗೆ ಅರಣ್ಯ ಇಲಾಖೆಯಿಂದ ತೊಂದರೆಗೊಳಗಾದವರು, ಅರಣ್ಯ ಭೂಮಿ ಪೀಡಿತರು, ಬಾಧಿತರು, ನಿರಾಶ್ರಿತರು, ವಸತಿ ಹೀನರು, ಸಂತ್ರಸ್ತರು ಸಭೆಗೆ ಆಗಮಿಸಿ ಅವಹಹಾಲುಗಳನ್ನು ದಾಖಲೆ ಸಮೇತ ಅಹಿಂದ ಚಳುವಳಿ ಮುಖ್ಯ ಸಂಚಾಲಕರಿಗೆ ಮನವಿ ನೀಡಲು ತಿಳಿಸಿದರು. ಅಹಿಂದ ಚಳುವಳಿ ರಾಜ್ಯ ಸಂಚಾಲಕಿ ಎಂ. ವಿ. ಭವಾನಿ ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಾಶ್ರಿತರಿಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ರಾಜ್ಯ ಸರ್ಕಾರ ಅರಣ್ಯ ಭೂಮಿ ಮಂಜೂರು ಮಾಡಿವೆ. ಅರಣ್ಯ ಸಂರಕ್ಷಣೆ ಕಾಯ್ದೆ 1980 ರಲ್ಲಿ ಡಿ- ನೋಟಿಫಿಕೇಶನ್ ಗಳಿಗೆ ಸರ್ಕಾರದ ಮೂಲಕ ಯೋಜನಾ ನಿರಾಶ್ರಿತರ ಎಲ್ಲಾ ಸಾಗುವಳಿ ಅರಣ್ಯ ಭೂಮಿಯನ್ನು ಕಾನೂನು ಬದ್ಧವಾಗಿ ಸಕ್ರಮಗೊಳಿಸಲು ಒತ್ತಾಯಿಸಲಾಗುವುದು. 1978ರ ಪೂರ್ವದ 14. 848 .83 ಹೆಕ್ಟರ್ ಅರಣ್ಯ ಒತ್ತುವರಿ ಭೂಮಿ ಸಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಅರಣ್ಯ ಭೂಮಿಯಲ್ಲಿ ವಾಸಿಸುತ್ತಿದ್ದವರು ಮನೆಗಳಿಗೆ ರಾಜ್ಯ ಕಂದಾಯ ಕಾಯ್ದೆ 94ಸಿ ಹಕ್ಕುಪತ್ರ ನೀಡಲು ಒತ್ತಾಯಿಸು ವುದು, ಅರಣ್ಯ ಭೂಮಿ ಸಕ್ರಮಗೊಳಿಸಲು ಅರಣ್ಯ ಹಕ್ಕು ಕಾಯ್ದೆ 2006ರ ಕಾನೂನಿನಡಿ, ಅರಣ್ಯವಾಸಿಗಳಿಗೆ ಸಕ್ರಮಕ್ಕೆ ಒತ್ತಾಯಿಸುವುದು, ಭದ್ರಾವತಿ ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆ ಮುಚ್ಚಲಾಗಿದ್ದು ಕಾರ್ಮಿಕರಿಗೆ ಉದ್ಯೋಗಗಳು ಅಥವಾ ಪರಿಹಾರ ಒದಗಿಸಲು ಒತ್ತಾಯಿಸುವುದು ಹಲವಾರು ಬೇಡಿಕೆ ಇಟ್ಟು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು, ಅಹಿಂದ ಚಳುವಳಿಯೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು. ಜಿಲ್ಲಾ ಸಂಚಾಲಕಿ ವಸಂತ ಕುಮಾರಿ ಕಡೂರು ಮಾತನಾಡಿ ದಲಿತರು ಮೃತರಾದರೆ ಶವಸಂಸ್ಕಾರಕ್ಕೆ ಸ್ಮಶಾನ ಇಲ್ಲದಂತಾಗಿದೆ. ಈ ಕುರಿತು ಹೋರಾಟಮಾಡಬೇಕು ಎಂದು ಹೇಳಿದರು. ಜೈನರ ಸಮಾಜದ ಜಿಲ್ಲಾ ಸಂಚಾಲಕ ಜಿತೇಂದ್ರಬಾಬು ಕಡೂರು ಮಾತನಾಡಿ ಹಿಂದುಳಿದವರಲ್ಲಿ ತುಂಬಾ ಜನರಿಗೆ ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ ಈ ಕುರಿತು ಗಮನ ಸೆಳೆಯುವಂತ ಕಾರ್ಯಕ್ರಮ ಮಾಡಬೇಕು ಎಂದರು. ಬಂಜಾರ ಲಂಬಾಣಿ ಸಮಾಜದ ಜಿಲ್ಲಾ ಸಂಚಾಲಕ ಎಚ್, ಎಲ್. ಮಂಜುನಾಥ ನಾಯ್ಕ್ ಮಾತನಾಡಿ ಹೊಸಳ್ಳಿ ತಾಂಡ್ಯದ ಅರ್ಧ ಗ್ರಾಮ ನಿವಾಸಿಗಳು ಮನೆ ನಿವೇಶನಗಳಿಲ್ಲದೆ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದು ಹಕ್ಕು ಪತ್ರಗಳು ಇಲ್ಲದಂತಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು. ಕ್ರೈಸ್ತ ಸಮುದಾಯದ ಜಿಲ್ಲಾ ಸಂಚಾಲಕ ರಾಮಾಂಜನಿ ಮಾತನಾಡಿ ದಲಿತರ ಜಮೀನುಗಳು ಉಳ್ಳವರ ಒಡತನದಲ್ಲಿದೆ ಪಹಣಿ, ಎಮ್ ಆರ್ ಮುಂತಾದ ದಾಖಲೆಗಳು ದಲಿತರ ಹೆಸರಿನಲ್ಲಿ ಇದ್ದರೂ ಶ್ರೀಮಂತರು ಭೂಮಿಯನ್ನು ದಲಿತರಿಗೆ ಬಿಡದೆ ದೌರ್ಜನ್ಯ ಮಾಡುತ್ತಿದ್ದಾರೆ. ದಲಿತರ ಜಮೀನುಗಳನ್ನು ದಾಖಲೆಗಳ ಪ್ರಕಾರ ಬಿಡಿಸಿಕೊಡಬೇಕು ಈ ಕುರಿತು ಸರ್ಕಾರದ ಗಮನಕ್ಕೆ ತರಬೇಕು ಎಂದು ತಿಳಿಸಿದರು. ಮಾದಿಗ ಸಮಾಜದ ಜಿಲ್ಲಾ ಸಂಚಾಲಕ ಓಂಕಾರಪ್ಪ ನೇರಲಕೆರೆ ಮಾತನಾಡಿ ಜಿಲ್ಲೆಯಲ್ಲಿ ಭೂಮಿ ಸಮಸ್ಯೆ ಸುಳಿಯಲ್ಲಿ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ತುಂಬಾ ಜನ ಬಾಧಿತರಿದ್ದಾರೆ. ಅರಣ್ಯ ಇಲಾಖೆಯವರು ಸುಮಾರು ಗ್ರಾಮ ಗಳನ್ನೇ ನಮ್ಮದು ಎಂದು ಹೇಳುತ್ತಿದ್ದಾರೆ. ಈ ಕುರಿತು ಬಳ್ಳಾವರ, ತಣಿಗೆಬೈಲು, ಕೃಷ್ಣಾಪುರ, ನಂದಿಬಟ್ಟಲು ಕಾಲೋನಿ, ಜೈಪುರ ಗ್ರಾಮಗಳ ಜನರು ದಾಖಲೆಗಳ ಸಮೇತ ಆ.23 ರಂದು ಶಿವಮೊಗ್ಗದ ಈ ಸಭೆಗೆ ಆಗಮಿಸಬೇಕೆಂದು ತಿಳಿಸಿದರು. ತಾಲೂಕು ಸಂಚಾಲಕಿ ಪದ್ಮ ಮಾತನಾಡಿ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಇನ್ನು ಜೀವಂತವಾಗಿದೆ. ಬಗುರ್ ಹುಕುಂ ಸಾಗುವಳಿ ದಾರರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಬಡ ರೈತರ ಸಮಸ್ಯೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ಆಗಬೇಕು ಎಂದರು. ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಉಸ್ತುವಾರಿ ಸಂಚಾಲಕ ಆದಿಲ್ ಪಾಷಾ, ತಾಲೂಕು ಸಂಘಟನಾ ಸಂಚಾಲಕರಾದ ವಾಣಿ , ಮಂಜುಳಾ, ವೇದಾವತಿ, ಚುಡಾಮಣಿ, ರಮ್ಯಾ, ಆಶಾ, ಬಂಜಾರ ಸಮಾಜದ ಜಿಲ್ಲಾ ಸಂಘಟನಾ ಸಂಚಾಲಕರಾದ ಎಚ್. ಇ. ಪ್ರದೀಪ್, ಬಿ ಕೃಷ್ಣ ನಾಯ್ಕ ಉಪಸ್ಥಿತರಿದ್ದರು.-

13ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಚಳುವಳಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್ ವೆಂಕಟೇಶ್ ಮಾತನಾಡಿದರು.