ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬಗರ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ವಿತರಿಸುವುದು, ಆಲಮಟ್ಟಿ ಅಣೆಕಟ್ಟ ಎತ್ತರವನ್ನು 524 ಮೀಟರ್ಗೆ ಎತ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ರಾಜ್ಯ ಸಮಿತಿ ವತಿಯಿಂದ ಜೂನ್ 27ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಬಸವರಾಜ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳು ಹಾಗು ಆಡಳಿತ ಮತ್ತು ಕೋಮುವಾದಿ, ಜಾತಿವಾದಿ ನಿಲುವುಗಳನ್ನು ಪ್ರತಿರೋಧಿಸಿ ಮತ್ತು ಜನತೆಯ ಹಕ್ಕೊತ್ತಾಯಗಳನ್ನು ಮಂಡಿಸಿ ರಾಜ್ಯದಾದ್ಯಂತ ಜೂನ್ 15 ರಿಂದ 25ರ ವರೆಗೆ ರಾಜಕೀಯ ಪ್ರಚಾರಾಂದೋಲನಗಳನ್ನು ಸಂಘಟಿಸಲಾಗುವುದು. ಜೊತೆಗೆ ಜೂನ್ 27 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆಗಳನ್ನು ನಡೆಸಲು ಸಿಪಿಐಎಂ ತನ್ನ ಎಲ್ಲಾ ಘಟಕಗಳು ಹಾಗೂ ಜನತೆಗೆ ಕರೆ ನೀಡಿದೆ ಎಂದರು.
ಬಿಜೆಪಿ ನೇತೃತ್ವದ ಕೇಂದ್ರದ ಎನ್ಡಿಎ ಸರ್ಕಾರ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳು ದೇಶ ಮತ್ತು ರಾಜ್ಯದಲ್ಲಿ ಬಂಡವಾಳದಾರರ ಹಾಗೂ ಭೂ ಮಾಲೀಕರ ಲೂಟಿಕೋರರ ಆರ್ಥಿಕ ನೀತಿಗಳನ್ನು ನಿರಂತರವಾಗಿ ಜಾರಿಗೊಳಿಸುತ್ತಿವೆ. ಎಂದು ಆರೋಪಿಸಿದರು.ನಗರ ಹಾಗೂ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿನಿರತ ಲಕ್ಷಾಂತರ ಬಡವರನ್ನು ಅವರ ಜಮೀನುಗಳಿಂದ ಒಕ್ಕಲೆಬ್ಬಿಸಿ ಬಂಡವಾಳಶಾಹಿಗಳಿಗೆ ದಾನ ಕೊಡಲಾಗುತ್ತಿದೆ. ಬಡವರು, ದಲಿತರಿಗೆ ಮತ್ತು ಮಹಿಳೆಯರಿಗೆ ನೆರವಾಗದ ಈ ಸರಕಾರಗಳು ಬಂಡವಾಳಗಾರರಿಗೆ ಲಕ್ಷಾಂತರ ಕೋಟಿ ರೂಪಾಯಿಗಳವರೆಗೆ ಸಹಾಯಧನ ಒದಗಿಸುತ್ತವೆ. ಬಡವರಿಗೆ ಮನೆ ನಿವೇಶನಕ್ಕೆ ಜಾಗ ಇಲ್ಲವೆನ್ನುವ ಇವರು ಬಂಡವಾಳಶಾಹಿಗಳಿಗೆ ಸಾವಿರಾರು ಎಕರೆ ಜಮೀನನ್ನು ತಲಾ ಎಕರೆಗೆ ₹ 100 ನಂತೆ ಲೀಸ್ಗೆ ಜಮೀನು ಒದಗಿಸುತ್ತಿವೆ. ಬಿಜೆಪಿ ಹಾಗೂ ಕಾಂಗ್ರೆಸ್ನ ಈ ನಡೆಗಳಿಂದಾಗಿ ಜನತೆಗೆ ಅವುಗಳ ನಿಜವಾದ ಜನ ವಿರೋಧಿಯಾದ ನೈಜ ಮುಖಗಳು ತಿಳಿಯದಂತಾಗಿವೆ. ಈ ಹಿನ್ನೆಲೆಯಲ್ಲಿ ಜನತೆಯ ನಡುವೆ ಅವರ ಸ್ವಾವಲಂಬಿ ಬದುಕಿನ ಮೇಲೆ ನಡೆಸುವ ದಾಳಿಯ ಹಿನ್ನೆಲೆಯನ್ನು ಮತ್ತು ಸ್ವಾವವಲಂಬಿ ಬದುಕು ಬಯಸುವ ಜನತೆಗೆ ಅದಕ್ಕಾಗಿ ಸರ್ಕಾರದಿಂದ ಬಂದ ಬೊಕ್ಕಸದ ಹಣ ಹಾಗೂ ಭೂ ಸಂಪನ್ಮೂಲಗಳನ್ನು ಬಳಸದೆ ಲೂಟಿಕೋರರಿಗೆ ತೆರೆದು ಕೊಡುವ ನೀತಿಗಳನ್ನು ಬಯಲುಗೊಳಿಸಿ ಜನತೆಯ ನಡುವೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜಕೀಯ ಪ್ರಚಾರಾಂದೋಲನವನ್ನು ನಡೆಸಲಾಗುತ್ತಿದೆ. ಅದೇ ರೀತಿ, ರಾಜ್ಯ ಹಾಗೂ ಜಿಲ್ಲೆಗಳ ನೈಜ ಅಭಿವೃದ್ಧಿಯ ಹಾಗೂ ಜನತೆಯ ಹಕ್ಕೊತ್ತಾಯಗಳನ್ನು ಮಂಡಿಸಲು ಜೂನ್ 27 ರಂದು ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಪ್ರದರ್ಶನ ಏರ್ಪಡಿಸಲು ಸಿಪಿಐಎಂ ಕರೆ ನೀಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭೀಮರಾಯ ಪೂಜಾರಿ, ಸುರೇಖಾ ರಜಪೂತ, ಸುರೇಶ.ಜಿ.ಬಿ, ಲಕ್ಷ್ಮಣ ಹಂದ್ರಾಳ, ಅಣ್ಣಾರಾಯ ಈಳಗೇರ, ಭಾರತಿ ವಾಲಿ ಮತ್ತಿತರರು ಉಪಸ್ಥಿತರಿದ್ದರು.-----ಕೋಟ್ನಿರ್ಮಿಸಲಾಗದ ಕೈಗಾರಿಕೆಗಳ ಹೆಸರಲ್ಲಿ ಕಂಪನಿಗಳ ಜೊತೆ ಶಾಮೀಲಾಗಿ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನ ಮಾಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು13,000 ಎಕರೆ ಜಮೀನನ್ನು ಮೋಸದ ಭೂ ಬೆಲೆಗೆ ಖರೀದಿಸಿ ಸುಮಾರು ₹ 15,000 ಕೋಟಿಗೆ ವಂಚಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ತಮ್ಮ ಜಮೀನು ಕೊಡುವುದಿಲ್ಲವೆಂದು ಕಳೆದ ಮೂರೂವರೆ ವರ್ಷಗಳಿಂದ ಚಳುವಳಿ ನಡೆಸುತ್ತಿದ್ದರೂ ಕಾಯ್ದೆ ಬಾಹಿರವಾಗಿ ಸ್ವಾಧೀನಕ್ಕೆ ಮುಂದಾಗುತ್ತಿದ್ದಾರೆ.ಬಸವರಾಜ, ಸಿಪಿಎಂ(ಐ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ