ಹುಬ್ಬಳ್ಳಿ:

ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಳೆದ 21 ದಿನಗಳಿಂದ ಅರ್ನಿಷ್ಟಾವಧಿ ಉಪವಾಸ ಸತ್ಯಾಗ್ರಹದ ನಡೆಸುತ್ತಿರುವ ಶಿಕ್ಷಣ ತಜ್ಞ ಸೋನಮ್‌ ವಾಂಗ್ಚುಕ್‌ ಹಾಗೂ ವಿದ್ಯಾರ್ಥಿಗಳ ಜೀವ ರಕ್ಷಣೆಗೆ ತಕ್ಷಣವೇ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಒತ್ತಾಯಿಸಿ ನಗರದಲ್ಲಿ ಹುಬ್ಬಳ್ಳಿಯ ಸಮಾನತೆಗಾಗಿ ನಾವು ಸಂಘಟನೆಯ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಸುರಿಯುವ ಮಳೆಯ ನಡುವೆಯೇ ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಚೆನ್ನಮ್ಮ ವೃತ್ತದ ಮಾರ್ಗವಾಗಿ ಆಗಮಿಸಿ ತಹಸೀಲ್ದಾರ್‌ ಕಚೇರಿಗೆ ಆಗಮಿಸಿ ಸಮಾವೇಶಗೊಂಡಿತು.

ರ್‍ಯಾಲಿಯ ಉದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ಶಿಕ್ಷಣ ಸಚಿವರ ವಿರುದ್ಧ ವಿವಿಧ ಘೋಷಣೆ ಕೂಗಿದ ಪ್ರತಿಭಟನಾಕಾರರು ನೀಟ್‌ ಪರೀಕ್ಷೆಯಲ್ಲಿ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ದೇಶಾದ್ಯಂತ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಖಂಡಿಸಿ, ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ಕ್ರಮವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸುದೀರ್ಘ ಉಪವಾಸದಿಂದ ಸೋನಮ್‌ ವಾಂಗ್ಚುಕ್‌ ಹಾಗೂ ಇತರ ಹೋರಾಟಗಾರರ ಆರೋಗ್ಯ ತೀವ್ರವಾಗಿ ಕ್ಷೀಣಿಸಿದ್ದು, ಕೇಂದ್ರ ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ ಸಂವಾದ ನಡೆಸುವ ಮೂಲಕ ಸಮಸ್ಯೆಗೆ ತಾರ್ಕಿಕ ಅಂತ್ಯ ಹೇಳಬೇಕು. ಇಲ್ಲದೇ ಹೋದಲ್ಲಿ ದೇಶಾದ್ಯಂತ ಉಗ್ರಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.


ವಿದ್ಯಾರ್ಥಿ ಯುವಜನರ ಮತ್ತು ಸೋನಮ್‌ ವಾಂಗ್ಚುಕ್‌ ಜತೆಗೆ ಮಾತುಕತೆ ನಡೆಸದೆ ಅವರ ಹೋರಾಟವನ್ನು ಕೇಂದ್ರ ಸರ್ಕಾರವು ಅತ್ಯಂತ ವ್ಯವಸ್ಥಿತವಾಗಿ ಹತ್ತಿಕ್ಕುವ ಸರ್ವಾಧಿಕಾರದ ಕ್ರಮಗಳು ಖಂಡನಾರ್ಹ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಗೊಳಿಸಿರುವ ''''''''ನೀಟ್‌''''''''ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತ ಸನತಕುಮಾರ ಬೆಳಗಲಿ, ರೈತ ಹೋರಾಟಗಾರ ಬಿ.ಎಸ್‌. ಸೊಪ್ಪಿನ, ಮಾಜಿ ಸಂಸದ ಐ.ಜಿ. ಸನದಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಶ್ಯಾಮಲಾ ಗುರುಪ್ರಸಾದ, ಅನ್ವರ ಮುಧೋಳ, ಗುರುನಾಥ ಉಳ್ಳಿಕಾಶಿ, ನಾಗರಾಜ ಗುರಿಕಾರ, ಮಂಜುಳಾ ಬೆಣಗಿ, ಬಸವರಾಜ ಸೂಳಿಭಾವಿ, ಮಹೇಶ ಪತ್ತಾರ, ಎಸ್‌.ಎ. ಮುಲ್ಲಾ, ಬಾಬಾಜಾನ್‌ ಮುಧೋಳ, ಉಮೇಶ ಎಸ್‌.ಕೆ., ಮಹಾಂತಪ್ಪ ನಂದೂರ ಸೇರಿದಂತೆ ಹಲವರಿದ್ದರು.20ಎಚ್‌ಯುಬಿ2: ಪ್ರತಿಭಟನೆ ನಡೆಸಿದರು.