ಜಿಲ್ಲೆಯ ಯೋಜನೆಗಳಿಗೆ ಅರಣ್ಯ ಪ್ರದೇಶವನ್ನು ಉದಾರವಾಗಿ ನೀಡುವ ಸರ್ಕಾರವು ಜೀವನಕ್ಕಾಗಿ ಮತ್ತು ವಾಸ್ತವ್ಯಕ್ಕಾಗಿ ಇರುವ ಅರಣ್ಯವಾಸಿ ಮತ್ತು ಇನ್ನಿತರ ಜನಸಾಮಾನ್ಯರಿಗೆ ಸಮಸ್ಯೆಯಾಗುವಂಥ ಕಸ್ತೂರಿರಂಗನ್ ವರದಿ ಜಾರಿಗೆ ತರುವುದು ಸರಿಯಲ್ಲ.
ಹೊನ್ನಾವರ: ಕಸ್ತೂರಿರಂಗನ್ ವರದಿ ವಿರೋಧಿಸಿ ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸೋಮವಾರ ಪಟ್ಟಣದಲ್ಲಿ ಬೃಹತ್ ರ್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮೂಡಗಣಪತಿ ದೇವಸ್ಥಾನದ ಆವರಣದಲ್ಲಿ ಬಹಿರಂಗ ಸಭೆಯಲ್ಲಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ಜಿಲ್ಲಾದ್ಯಂತ ಕಸ್ತೂರಿರಂಗನ್ ವರದಿ ವಿರೋಧಿಸಿ ೧ ಲಕ್ಷ ಆಕ್ಷೇಪ ಪತ್ರ ಸಲ್ಲಿಸಲಾಗುವುದು. ಅಲ್ಲದೇ, ಜಿಲ್ಲೆಯ ಯೋಜನೆಗಳಿಗೆ ಅರಣ್ಯ ಪ್ರದೇಶವನ್ನು ಉದಾರವಾಗಿ ನೀಡುವ ಸರ್ಕಾರವು ಜೀವನಕ್ಕಾಗಿ ಮತ್ತು ವಾಸ್ತವ್ಯಕ್ಕಾಗಿ ಇರುವ ಅರಣ್ಯವಾಸಿ ಮತ್ತು ಇನ್ನಿತರ ಜನಸಾಮಾನ್ಯರಿಗೆ ಸಮಸ್ಯೆಯಾಗುವಂಥ ಕಸ್ತೂರಿರಂಗನ್ ವರದಿ ಜಾರಿಗೆ ತರುವುದು ಸರಿಯಲ್ಲ ಎಂದರು.ಮುಖಂಡ ಸುರೇಶ ಮೇಸ್ತ ಪ್ರಾಸ್ತಾವಿಕವಾಗಿ ಮಾತನಾಡಿ, ಕಸ್ತೂರಿರಂಗನ್ ವರದಿ ವಿರೋಧಕ್ಕೆ ಸಂಘಟನಾತ್ಮಕ ಹೋರಾಟ ಮಾಡಲಾಗುತ್ತಿದೆ. ಪಕ್ಷಾತೀತವಾಗಿ ಜನಪ್ರತಿನಿಧಿಗಳು ಜಿಲ್ಲೆಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿಯನ್ನು ವಿರೋಧಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಈ ಕುರಿತು ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
ಸುರೇಶ ನಾಯ್ಕ ಗೆರಸೊಪ್ಪ, ಕುಮಟಾ ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ, ಸಂಚಾಲಕಿ ಅನಿತಾ ಲೋಪಿಸ್, ನಾಗೇಶ ನಾಯ್ಕ, ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ ಮಾತನಾಡಿದರು. ದಾವೂದ್ ಇಬ್ರಾಹೀಂ, ರಫೀಕ್, ಸಾಂತಾನ್ ಫರ್ನಾಂಡಿಸ್, ಶಾಂತಿ ಗಂಗಾ ಗೌಡ, ವಿನಯ ನಾಯ್ಕ ಜನಾರ್ದನ್ ನಾಯ್ಕ ಚಂದಾವರ, ಗಣೇಶ ನಾಯ್ಕ ಚಂದಾವರ, ಸುರೇಶ ತುಂಬೋಳ್ಳಿ, ವಿನೋದ ಯಲಕೊಟಗಿ, ರಾಮ ಮರಾಠಿ, ಸಂಕೇತ ನಾಯ್ಕ, ಮಾರುತಿ ನಾಯ್ಕ, ಮಂಜು ಫರ್ನಾಂಡಿಸ್, ಹೇಮಲತಾ ನಾಯ್ಕ ಉಪಸ್ಥಿತರಿದ್ದರು.ವಿಕಲಚೇತನರ ಸಂಘದ ಬೆಂಬಲ:
ಕಸ್ತೂರಿರಂಗನ್ ವರದಿ ವಿರೋಧಿಸಿ ಕುಮಟಾ ತಾಲೂಕಿನ ವಿಕಲಚೇತನರ ಸಂಘದ ಅಧ್ಯಕ್ಷ ಪ್ರವೀಣ ಶೆಟ್ಟಿ ಮತ್ತು ಪ್ರಕಾಶ ನಾಯ್ಕ, ಈಶ್ವರ ನಾಯ್ಕ ಅವರ ನೇತೃತ್ವದ ತಂಡವು ಮೆರವಣಿಗೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ಬೃಹತ್ ರ್ಯಾಲಿ:ಕಸ್ತೂರಿರಂಗನ್ ವರದಿ ೭ನೇ ಅಧಿಸೂಚನೆಗೆ ತಿರಸ್ಕರಿಸಲು ಆಗ್ರಹಿಸಿ ಹೊನ್ನಾವರ ಶರಾವತಿ ಸರ್ಕಲ್ ನಲ್ಲಿ ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಡೊಳ್ಳು ಬಾರಿಸುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು.ಮೆರವಣಿಗೆಯ ನೇತೃತ್ವವನ್ನು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ, ನಗರಾಧ್ಯಕ್ಷ ಸುರೇಶ್ ಮೇಸ್ತ, ಕುಮಟಾ ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ, ರಾಜು ಗೌಡ ಕತಗಾಲ, ಜಗದೀಶ ಹರಿಕಂತ್ರ, ಯೋಗೇಶ ಗೌಡ, ಸಾರಂಬಿ, ಗಜಾನನ ಪಟಗಾರ ಹೆಗಡೆ, ವೆಂಕಟರಮಣ ಮಟಗಾರ, ರಜಾಕ್, ಮಂಜುನಾಥ ಗೌಡ ಮುಂತಾದವರು ನೇತೃತ್ವ ವಹಿಸಿದ್ದರು.6 ಸಾವಿರಕ್ಕೂ ಮಿಕ್ಕಿ ಆಕ್ಷೇಪಣೆ: ಕಸ್ತೂರಿರಂಗನ್ ವರದಿ ವಿರೋಧಿಸಿ ತಾಲೂಕಾದ್ಯಂತ ಆರು ಸಾವಿರಕ್ಕೂ ಮಿಕ್ಕಿ ಲಿಖಿತ ಆಕ್ಷೇಪ ಪತ್ರವನ್ನು ತಾಲೂಕಾಡಳಿತಕ್ಕೆ ದ್ವಿಪ್ರತಿಯಲ್ಲಿ ಸಲ್ಲಿಸಲಾಯಿತು. ಆಕ್ಷೇಪ ಪತ್ರವು ಕೇಂದ್ರ ಸರ್ಕಾರದ ಅರಣ್ಯ ಸಚಿವರಿಗೆ ಬರೆಯಲಾಗಿದ್ದು, ಅವೈಜ್ಞಾನಿಕ ವರದಿಯ ಕುರಿತು ಆಕ್ಷೇಪ ಪತ್ರದಲ್ಲಿ ೧೦ ಅಂಶಗಳನ್ನು ಪ್ರಸ್ತಾಪಿಸಲಾಯಿತು.ಅಧಿಕಾರಿಯಿಂದ ಆಕ್ಷೇಪ ಪತ್ರ ಸ್ವೀಕಾರ: ತಾಲೂಕು ದಂಡಾಧಿಕಾರಿ ಪ್ರವೀಣ ಕರಾಂಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಕುಮಾರ, ಸಿಪಿಐ ಸಿದ್ದರಾಮೇಶ್ವರ ಮುಂತಾದ ಅಧಿಕಾರಿಗಳು ವೇದಿಕೆಗೆ ಆಗಮಿಸಿ ಗ್ರೀನ್ ಕಾರ್ಡ್ ಪ್ರಮುಖರಾದ ಶಾಂತಿ ಗೌಡ ಅವರಿಂದ ಆಕ್ಷೇಪ ಪತ್ರ ಸ್ವೀಕರಿಸಿ ಆಕ್ಷೇಪ ಪತ್ರದ ಅಭಿಯಾನಕ್ಕೆ ಚಾಲನೆ ನೀಡಿದರು.