ಮಹದೇಶ್ವರ ಬೆಟ್ಟದಲ್ಲಿ ಮಾಸ್ಟರ್ ಕಂಟ್ರೋಲ್‌ ರೂಂ ಶುರು

| Published : Jun 21 2025, 12:49 AM IST

ಸಾರಾಂಶ

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿರುವ ಮಾಸ್ಟರ್ ಕಂಟ್ರೋಲ್‌ ರೂಂ.

ಜಿ ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳ ಹಿತದೃಷ್ಟಿಯಿಂದ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಮಾಸ್ಟರ್ ಕಂಟ್ರೋಲ್ ರೂಂ ತೆರೆಯುವ ಮೂಲಕ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಅಗತ್ಯ ಕ್ರಮ ವಹಿಸಿದ್ದಾರೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಜಾತ್ರಾ ಮಹೋತ್ಸವ ಹಬ್ಬ-ಹರಿದಿನಗಳು, ಅಮಾವಾಸ್ಯೆ ಹಾಗೂ ಸರ್ಕಾರಿ ರಜೆ ದಿನಗಳಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಶ್ರೀ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ಹಾಗೂ ದೇವಸ್ಥಾನದಲ್ಲಿ ಇರುವ ಸಮಸ್ಯೆಗಳನ್ನು ಗಮನಿಸಲು ಹಾಗೂ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ನಿಟ್ಟಿನಲ್ಲಿ 200 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಈ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಬದಲಾವಣೆ ತಂದಿದ್ದಾರೆ.ಸಿಸಿ ಕ್ಯಾಮರಾ ಅಳವಡಿಕೆ ಸ್ಥಳ:

ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದರ್ಶನದ ಸರತಿ ಸಾಲು, ಮುಡಿ ಕೌಂಟರ್, ದೇವಸ್ಥಾನದ ರಾಜ ಗೋಪುರ, ದೇವಸ್ಥಾನದ ಒಳ ಆವರಣ, ಹೊರ ಆವರಣ, ವಸತಿಗೃಹಗಳು, ಚೆಕ್ ಪೋಸ್ಟ್ , ಬಸ್ ನಿಲ್ದಾಣ ಭಕ್ತಾದಿಗಳು ಹೆಚ್ಚಾಗಿ ಸೇರುವ ಪ್ರದೇಶಗಳು ಸೇರಿದಂತೆ ಇನ್ನಿತರ ಕಡೆ ಹೆಚ್ಚು ಕಡೆ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಹದ್ದಿನ ಕಣ್ಣಿಟ್ಟಿದ್ದಾರೆ.

ಭಕ್ತಾದಿಗಳ ಸಂಖ್ಯೆ ನಿಖರ:

ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಜಾತ್ರಾ ಮಹೋತ್ಸವ ಹಾಗೂ ಹಬ್ಬದ ದಿನಗಳಲ್ಲಿ ಬರುವ ಭಕ್ತಾದಿಗಳ ಸಂಖ್ಯೆಯನ್ನು ಹಿಂದಿನ ದಿನಗಳಲ್ಲಿ ನಿಖರವಾಗಿ ಹೇಳಲು ಸಾಧ್ಯವಾಗುತ್ತಿರಲಿಲ್ಲ, ಪ್ರಾಧಿಕಾರದ ಕಾರ್ಯದರ್ಶಿಯಾಗಿ ರಘು ಅಧಿಕಾರವಹಿಸಿಕೊಂಡ ನಂತರ ವಿಶೇಷ ತಂತ್ರಜ್ಞಾನವುಳ್ಳ ಸಿಸಿ ಕ್ಯಾಮರಾಗಳನ್ನು ಬದಲಾವಣೆ ಮಾಡಿದ ಹಿನ್ನೆಲೆ ದರ್ಶನಕ್ಕೆ ಹೋಗುವ ಪ್ರತಿಯೊಬ್ಬ ಭಕ್ತರನ್ನು (ಹೆಡ್ ಕ್ಯಾಮೆರಾ) ದ ಮೂಲಕ ಎಣಿಕೆ ಮಾಡಲಾಗುತ್ತಿದ್ದು ಪ್ರತಿನಿತ್ಯ ಎಷ್ಟು ಭಕ್ತಾದಿಗಳು ಆಗಮಿಸಿ ದರ್ಶನ ಪಡೆದಿದ್ದಾರೆ. ವಿಶೇಷ ದಿನಗಳಲ್ಲಿ ಒಂದು ಗಂಟೆಯಲ್ಲಿ ಎಷ್ಟು ಭಕ್ತಾದಿಗಳು ದರ್ಶನ ಮಾಡಲು ಸಾಧ್ಯ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಾಗುತ್ತಿದೆ.

ಪ್ರತಿವರ್ಷ 50 ಲಕ್ಷ ಜನರಿಂದ ದರ್ಶನ:

ಮಲೆಮಹದೇಶ್ವರ ಬೆಟ್ಟದಲ್ಲಿ ಹೊಸ ವರ್ಷ, ಸಂಕ್ರಾಂತಿ, ಮಹಾಶಿವರಾತ್ರಿ, ಯುಗಾದಿ, ದೀಪಾವಳಿ, ಕಾರ್ತಿಕ ಮಾಸ ಭೀಮನ ಅಮಾವಾಸ್ಯೆ, ಸೇರಿದಂತೆ ಇನ್ನಿತರ ವಿಶೇಷ ದಿನಗಳು ಸೇರಿದಂತೆ ಒಂದು ವರ್ಷದಲ್ಲಿ ಸುಮಾರು 50ರಿಂದ 60 ಲಕ್ಷ ಜನ ಭೇಟಿ ನೀಡಿ ಮಲೆಮಹದೇಶ್ವರನ ದರ್ಶನ ಪಡೆಯುತ್ತಿರುವುದು ಇತಿಹಾಸ ಸೃಷ್ಟಿ ಮಾಡಿದೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯದ ಶಕ್ತಿ ಯೋಜನೆ ಪ್ರಾರಂಭವಾದ ನಂತರ 10 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ.ನುರಿತ ತಂತ್ರಜ್ಞರಿಂದ ಮಾನಿಟರಿಂಗ್:

ಮಲೆಮಾದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಮಾಸ್ಟರ್ ಕಂಟ್ರೋಲ್ ತೆರೆದಿದ್ದು ದಿನದ 24 ಗಂಟೆಗಳ ಕಾಲ ನುರಿತ ತಂತ್ರಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದು ಶ್ರೀ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.ಕಳ್ಳರ ಪತ್ತೆಗೆ ಅನುಕೂಲ:

ಮಲೆಮಾದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವೊಮ್ಮೆ ಕಳ್ಳರು ತಮ್ಮ ಕೈಚಳಕ ತೋರಿಸಲು ಮುಂದಾಗುವುದು ಸಹಜ. ಆದರೆ ಪ್ರಾಧಿಕಾರದ ವತಿಯಿಂದ ಚೆಕ್ ಪೋಸ್ಟ್ ಗಳಲ್ಲಿ ನೂತನ ತಂತ್ರಜ್ಞಾನದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು ದೇವಸ್ಥಾನದ ಮಾಸ್ಟರ್ ಪ್ಲಾನ್ ಆವರಣ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಾರು ಟೆಂಪೋ ಪ್ರವಾಸಿ ಬಸ್‌ಗಳು ಸೇರಿದಂತೆ ಯಾವುದೇ ವಾಹನಗಳು ಸಂಚರಿಸಿದರು ಆ ವಾಹನಗಳ ಸಂಖ್ಯೆಯನ್ನು ದೃಢೀಕರಿಸುತ್ತಿರುವುದರಿಂದ ಅಪಘಾತ ಹಾಗೂ ಕಳ್ಳತನ ಸಂದರ್ಭಗಳಲ್ಲಿ ಪೊಲೀಸರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ.ಭಕ್ತರೇ ನೇರವಾಗಿ ಸಮಸ್ಯೆ ಕೇಳಿಕೊಳ್ಳಬಹುದು:

ಶ್ರೀ ಕ್ಷೇತ್ರ ಮಲೆಮಾದೇಶ್ವರ ಬೆಟ್ಟದ ಸರತಿ ಸಾಲು, ಮುಡಿ ಕೌಂಟರ್ ಹಾಗೂ ಪ್ರಮುಖ ಸ್ಥಳಗಳಲ್ಲಿ ಮೈಕ್‌ ಸ್ಪೀಕರ್ ಅಳವಡಿಸಲಾಗಿದ್ದು ಅನಾರೋಗ್ಯದ ಸಮಸ್ಯೆ ಶೌಚಾಲಯ ಹಾಗೂ ಯಾವುದೇ ಸಮಸ್ಯೆಗಳಿದ್ದಾಗ ಮೈಕ್ ಮೂಲಕ ಮಾತನಾಡಿದರೆ ಮಾಸ್ಟರ್ ಕಂಟ್ರೋಲ್ ಸಿಬ್ಬಂದಿಗೆ ಮಾಹಿತಿ ಸಿಗಲಿದೆ ತಕ್ಷಣ ಅವರು ಸೆಕ್ಯೂರಿಟಿ ಸಿಬ್ಬಂದಿಗಳನ್ನು ಕಳುಹಿಸಿ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ.

ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳ ಸುರಕ್ಷತೆಗೆ ಪ್ರಾಧಿಕಾರದ ವತಿಯಿಂದ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇವಸ್ಥಾನದ ಮಾಸ್ಟರ್ ಪ್ಲಾನ್ ಆವರಣದಲ್ಲಿ 20ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಅನುಕೂಲ ಕಲ್ಪಿಸಲಾಗಿದೆ. ಭಕ್ತಾದಿಗಳು ನೇರವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ತಕ್ಷಣ ನಮ್ಮ ಪ್ರಾಧಿಕಾರದ ಸಿಬ್ಬಂದಿ ಸ್ಪಂದಿಸಿ ಸಮಸ್ಯೆ ಬಗೆಹರಿಸಲಿದ್ದಾರೆ.

ಎಈ ರಘು, ಕಾರ್ಯದರ್ಶಿ, ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಶ್ರೀ ಕ್ಷೇತ್ರ ಮಲೆಮಾದೇಶ್ವರ ಬೆಟ್ಟದ ಮಾಸ್ಟರ್ ಪ್ಲಾನ್ ಆವರಣದಲ್ಲಿ ಪ್ರಾಧಿಕಾರದ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸಿರುವುದರಿಂದ ಕಳ್ಳರ ಪತ್ತೆಗೆ ಹೆಚ್ಚಿನ ಅನುಕೂಲವಾಗಿದೆ. ರಂಗಮಂದಿರದಲ್ಲಿ ಕಳೆದುಕೊಂಡಿದ್ದ ಹಲವಾರು ಮೊಬೈಲ್‌ಗಳನ್ನು ನಮ್ಮ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಕಳ್ಳತನ , ಅಪಘಾತ, ನಾಪತ್ತೆ ಪ್ರಕರಣಗಳು ಸೇರಿದಂತೆ ಇತರ ಕಾನೂನು ಬಾಹಿರ ಚಟುವಟಿಕೆಗಳನ್ನು ಸಿಸಿ ಕ್ಯಾಮರಾದಿಂದ ಪತ್ತೆ ಹಚ್ಚಲು ಅನುಕೂಲವಾಗುತ್ತಿದೆ.

ಜಗದೀಶ್, ಇನ್ಸ್‌ಪೆಕ್ಟರ್, ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ