ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುದೀಪಾವಳಿ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ವಿಶ್ವ ಹಿಂದೂ ಪರಿಷತ್, ಮೂಕಾಂಬಿಕಾ ಸಮೃದ್ಧಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ, ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ವತಿಯಿಂದ ಮಾತಾ ಅಮೃತಾ ಕೃಪಾ ಆಸ್ಪತ್ರೆ ಆಶ್ರಯದಲ್ಲಿ ಸ್ವಚ್ಛ, ಆರೋಗ್ಯ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿತ್ತು.ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ, ಥೈರಾಡ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶ ಕ್ಯಾನ್ಸರ್ ಸೇರಿದಂತೆ ಹಲವಾರು ಆರೋಗ್ಯ ತಪಾಸಣೆ ಮಾಡಲಾಯಿತು. ಮಾತಾ ಅಮೃತಾ ಕೃಪಾ ಆಸ್ಪತ್ರೆಯ ಸುಸಜ್ಜಿತ ಚಲಿಸುವ ಆಸ್ಪತ್ರೆ ವಾಹನೊದಳಗೆ ಇಸಿಜಿ, ಎಕ್ಸ್ ರೇ, ಸ್ಕ್ಯಾನಿಂಗ್ ಸೇರಿದಂತೆ ಹಲವಾರು ರಕ್ತ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು.ವೈದ್ಯೆ ಡಾ. ಸೌಮ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಭಾರತವನ್ನು ಹಲವಾರು ರೋಗಗಳು ಕಾಡುತ್ತಿವೆ, ಮಧುಮೇಹ ಮತ್ತು ಕ್ಯಾನ್ಸರ್ 40 ವರ್ಷ ಒಳಪಟ್ಟವರಲ್ಲೂ ಈಗ ಕಾಣಿಸುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಭಾರತ ಸರ್ಕಾರವು ಕ್ಯಾನ್ಸರ್ ತಡೆಗಟ್ಟಲು ಹಲವಾರು ಲಸಿಕೆಗಳನ್ನು ಪೋಷಿಸುತ್ತಿದೆ, ಮಹಿಳೆಯರು ಅದನ್ನು ಪಡೆಯಲು ಸಲಹೆ ನೀಡಿದರು. ಪಪಂಯ ಪೌರಕಾರ್ಮಿಕರು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅನುಕೂಲ ಪಡೆದರು. ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ಆರ್. ಗಣೇಶ್ ಅವರು ದೀಪಾವಳಿಯ ಪ್ರಯುಕ್ತ ಎಲ್ಲರಿಗೂ ದೀಪಗಳ ವಿತರಿಸಿದರು. ಪುನೀತ್ ಜಿ. ಕೂಡ್ಲೂರು ಮಾತನಾಡಿದರು. ಮೂಕಾಂಬಿಕಾ ಸಮೃದ್ಧಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿಯ ಉಪಾಧ್ಯಕ್ಷ ರಾಮಕೃಷ್ಣ ವೈದ್ಯೆ ಸೌಮ್ಯ ಹಾಗೂ ತಂಡಕ್ಕೆ ಗೌರವ ಸಮರ್ಪಿಸಿದರು. ವಿಶ್ವ ಹಿಂದೂ ಪರಿಷತ್ ನ ಕಾರ್ಯದರ್ಶಿ ಮಧುಶಂಕರ್, ನಿರ್ದೇಶಕರಾದ ಶುಭಾ ಅರುಣ್, ಪೂಜಾ, ಉಪಾಧ್ಯಕ್ಷ ರಾಮಕೃಷ್ಣ, ನಾಗಭೂಷಣ ಆಚಾರ್ ಇದ್ದರು.