ಮಾತೃ ನಮನ: ಮಕ್ಕಳಿಂದ ಪೋಷಕರ ಪಾದಪೂಜೆ

| Published : Feb 08 2024, 01:36 AM IST

ಸಾರಾಂಶ

ತಮ್ಮ ನೆಚ್ಚಿನ ಸ್ವಾಮೀಜಿ ಸಮ್ಮುಖದಲ್ಲಿ ತಂದೆ ತಾಯಿಯರ ಪಾದ ಪೂಜೆ ಮಾಡಿ ಅವರೊಂದಿಗೆ ಸಹ ಭೋಜನ ಮಾಡುವ ಮೂಲಕ ನಗರದ ಆದಿಚುಂಚನಗಿರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಮನ ಸೆಳೆದರು.

ಅರಸೀಕೆರೆ: ತಮ್ಮ ನೆಚ್ಚಿನ ಸ್ವಾಮೀಜಿ ಸಮ್ಮುಖದಲ್ಲಿ ತಂದೆ ತಾಯಿಯರ ಪಾದ ಪೂಜೆ ಮಾಡಿ ಅವರೊಂದಿಗೆ ಸಹ ಭೋಜನ ಮಾಡುವ ಮೂಲಕ ನಗರದ ಆದಿಚುಂಚನಗಿರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಮನ ಸೆಳೆದರು.

ಶಾಲೆಯಲ್ಲಿ ನಡೆದ ‘ಮಾತೃ ಪಿತೃ ನಮನ’ ಹಾಗೂ ‘ಮಾತೃ ಭೋಜನ’ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪೋಷಕರ ಪಾದಪೂಜೆ ಮಾಡಿ ತಮ್ಮ ನೆಚ್ಚಿನ ಗುರು ಹಾಸನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಪಾದಕ್ಕೆರಗಿ ಆಶೀರ್ವಾದ ಪಡೆದುಕೊಂಡರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹಾಸನ ಆದಿಚುಂಚನಗಿ ಮಹಾ ಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ, ಶಿಕ್ಷಣವೆಂದರೆ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಪಾಠ ಪ್ರವಚನ ಮಾತ್ರವಲ್ಲ, ಮಾನವೀಯತೆ, ಸಹಿಷ್ಣುತೆ, ವಿವೇಕ, ಪ್ರಗತಿ, ಆಲೋಚನೆ, ಸತ್ಯಾನ್ವೇಷಣೆಗಳ ದ್ಯೋತಕವಾಗಿರಬೇಕು. ಆಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ ಎಂಬುದು ಬೈರವೈಕ್ಯ ಡಾ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪ್ರತಿಪಾದನೆಯಾಗಿತ್ತು. ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಶಿಕ್ಷಣದ ಜತೆಗೆ ಗುರು ಹಿರಿಯರನ್ನು ಗೌರವದಿಂದ ಕಾಣುವ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನೀತಿ ಪಾಠವನ್ನು ಹೇಳಿಕೊಡಲಾಗುತ್ತದೆ ಎಂದು ಹೇಳಿದರು.

ಶಿಕ್ಷಣವು ಮತಿವಾದದಿಂದ ಕೂಡಿರಬಾರದು, ಮೌಢ್ಯತೆಯನ್ನು ಸಮಾಜದಿಂದ ಕಿತ್ತೊಗೆದು ವಿವೇಕತೆ ಬೆಳೆಸುವ ಜ್ಯೋತಿ ಆಗಿರಬೇಕು. ಅಂತಹ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಜವಾಬ್ದಾರಿಯನ್ನು ಸಮಾಜ ನಿಭಾಯಿಸಬೇಕು. ಆ ನಿಟ್ಟಿನಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಮಾಡಿರುವ ಕ್ರಾಂತಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮಾತ್ರ ಉಜ್ವಲಗೊಳಿಸಿಲ್ಲ, ಸಮಾಜಕ್ಕೆ ಬೆಳಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಪೌರಾಯುಕ್ತ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಲಿಂಗರಾಜು, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಉಪಸ್ಥಿತರಿದ್ದರು.