ಕನ್ನಡಪ್ರಭ ವಾರ್ತೆ ಭದ್ರಾವತಿ
ತಾಲೂಕಿನ ಮಾವಿನಕೆರೆ ಸಂತ ಕಿರಿಯ ಪುಷ್ಪ ತೆರೇಸಾ ದೇವಾಲಯದ ವತಿಯಿಂದ ಶನಿವಾರ ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.ಬೆಳಿಗ್ಗೆ ೧೦ ಗಂಟೆಗೆ ಜೀವಂತ ಶಿಲುಬೆ ಹಾದಿಯ ಮೂಲಕ ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಐತಿಹಾಸಿಕ ದೃಶ್ಯವನ್ನು ಮರು ಸೃಷ್ಟಿಸಲಾಯಿತು. ಈ ಮೂಲಕ ಧಾರ್ಮಿಕತೆಯ ಮಹತ್ವ ಭಕ್ತರಿಗೆ ತಿಳಿಸಲಾಯಿತು.
ಯೇಸು ಕ್ರಿಸ್ತರನ್ನು ಶಿಲುಬೆಗೇರಿಸುವ ಮತ್ತು ಗೋಲ್ಗತ್ತ ಬೆಟ್ಟವನ್ನು ಪ್ರವೇಶಿಸುವ ಮೊದಲು ಚಿತ್ರಹಿಂಸೆ ನೀಡುತ್ತ ಎಳೆದೊಯ್ಯುವ ಪಾಡು, ಮರಣದ ದೃಶ್ಯವನ್ನು ಮಾವಿನ ಕೆರೆಯ ಬೀದಿಗಳಲ್ಲಿ ಪಾತ್ರಧಾರಿಗಳಿಂದ ಮರು ಸೃಷ್ಟಿ ಮಾಡಲಾಯಿತು. ಪಯಣದ ಉದ್ದಕ್ಕೂ ರಸ್ತೆಯ ಅಕ್ಕ-ಪಕ್ಕದಲ್ಲಿ ಏಸುಕ್ರಿಸ್ತರಿಗೆ ನೀಡಿದ ಚಿತ್ರಹಿಂಸೆ ನೆನಪಿಸುವ ವಿವಿಧ ದೃಶ್ಯಗಳ ಫ್ಲೆಕ್ಸ್ ಹಾಕಲಾಗಿತ್ತು. ಕಬಳೆ ಧರ್ಮ ಕೇಂದ್ರದ ಧರ್ಮ ಗುರುಗಳಾದ ಫಾದರ್ ರೋಮನ್ ಪಿಂಟೋರವರಿಂದ ಮಾವಿನಕೆರೆಯ ಬೆಟ್ಟದ ಮೇಲೆ ೧೪ ಸ್ಥಳದ ಶಿಲುಬೆ ಹಾದಿ ಪೂಜಾ ವಿಧಿ-ವಿಧಾನ ಮತ್ತು ಶಿಲುಬೆಗೆ ಗೌರವ ಸನ್ಮಾನ ನೆರವೇರಿಸಲಾಯಿತು. ನಂತರ ಅನ್ನ ಸಂರ್ಪಣೆ ನೆರವೇರಿಸಲಾಯಿತು.ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧ ಶಮನವಾಗಿ, ಜಗತ್ತಿನೆಲ್ಲೆಡೆ ಶಾಂತಿ ನೆಲೆಸಲೆಂದು ಮತ್ತು ಸಮಾಜದ ಹಂಚಿಗೆ ತಳ್ಳಲ್ಪಟ್ಟವರ, ನಿರ್ಗತಿಕರ ವರ್ಷವನ್ನಾಗಿ ಶಿವಮೊಗ್ಗ ಧರ್ಮಕ್ಷೇತ್ರ ಸ್ಮರಿಸುತ್ತಿರುವ ನಿಟ್ಟಿನಲ್ಲಿ ಅವರಿಗಾಗಿ ಪ್ರಾರ್ಥಿಸಲಾಯಿತು.
ಪಾದಯಾತ್ರೆ:
ಈ ಐತಿಹಾಸಿಕ ಸ್ಥಳಕ್ಕೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಮತ್ತು ಎಲ್ಲಡೆಯಲ್ಲಿಯೂ ಶಾಂತಿ, ಐಕ್ಯತೆ, ಸಮಾಧಾನ, ಉತ್ತಮ ಪರಿಸರ ನೆಲೆಗೊಳ್ಳಲೆಂದು ಪ್ರಾರ್ಥಿಸುತ್ತಾ ಕ್ರೈಸ್ತ ಸಮುದಾಯದ ತಪಸ್ಸು ಕಾಲದ ಉಪವಾಸದ ನಿಮಿತ್ತ ಹಳೇನಗರ ಗಾಂಧೀನಗರದ ವೇಳಾ೦ಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೆಸಾ ನಿರ್ದೇಶನದಲ್ಲಿ, ಶ್ರೀಸಾಮಾನ್ಯ ಆಯೋಗದ ನಿರ್ದೇಶಕಿ ಸಿಸ್ಟರ್ ಶೋಭನರವರ ಅಧ್ಯಕ್ಷತೆಯಲ್ಲಿ ಹಳೇನಗರದ ಗಾಂಧೀನಗರ ವೇಳಾ೦ಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರ ಮತ್ತು ಕಾರೇಹಳ್ಳಿ ಪುಣ್ಯಕ್ಷೇತ್ರದ ಭಕ್ತರು ಸುಮಾರು ಎಂಟು ಕಿಲೋಮೀಟರ್ನಷ್ಟು ದೂರ ಕಾಲ್ನಡಿಗೆಯಲ್ಲಿ ವಿವಿಧ ಉದ್ದೇಶಗಳು ಈಡೇರಲೆಂದು ಪ್ರಾರ್ಥಿಸುತ್ತಾ ಐತಿಹಾಸಿಕ ಸ್ಥಳವಾದ ಮಾವಿನಕೆರೆ ಧರ್ಮ ಕೇಂದ್ರಕ್ಕೆ ತಲುಪಲಾಯಿತು. ಮಾವಿನಕೆರೆ ಧರ್ಮ ಕೇಂದ್ರದ ಗುರುಗಳಾದ ಪೌಲ್ ಕ್ರಾಸ್ತ ಮಹೋತ್ಸವಕ್ಕೆ ಆಗಮಿಸಿದ ಭಕ್ತರನ್ನು ಅಭಿನಂದಿಸಿ, ಸ್ವಾಗತಿಸಿದರು.
ಐತಿಹಾಸಿಕ ದೃಶ್ಯದ ಮರು ಸೃಷ್ಟಿ ಮಾಡಿದ ಪಾತ್ರಧಾರಿಗಳು, ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡಿದ ದಾನಿಗಳನ್ನು ಗೌರವಿಸಲಾಯಿತು.ನ್ಯೂಟೌನ್ ಅಮಲೋಧ್ಬವಿ ಮಾತೆ ದೇವಾಲಯದ ಧರ್ಮಗುರು ಲ್ಯಾನ್ಸಿ ಡಿಸೋಜಾ, ಕಾರೇಹಳ್ಳಿ ಧರ್ಮ ಕ್ಷೇತ್ರದ ಧರ್ಮಗುರು ಫಾದರ್ ಸಂತೋಷ್ ಅಲ್ಮೇಡಾ, ಫಾದರ್ ಸಂತೋಷ್ ಪೆರೇರಾ, ಫಾದರ್ ವೆನಿಲ್ ಡಿಸಿಲ್ವ, ಅಲ್ಬನ್ ಡಿಸಿಲ್ವ, ಫಾದರ್ ಜಾರ್ಜ್, ನಿರ್ಮಲ ಆಸ್ಪತ್ರೆ, ಸೈಂಟ್ ಡೋಮೆನಿಕ್ ಧರ್ಮ ಭಗಿನಿಯರು, ಭಕ್ತರು ಪಾಲ್ಗೊಂಡಿದ್ದರು.