ಸಾರಾಂಶ
ಭಾವೈಕ್ಯತೆ ಎಂದರೆ ಎಲ್ಲರ ಮನಸ್ಸುಗಳು, ಭಾವನೆಗಳು, ಹೃದಯಗಳು ಒಂದಾಬೇಕು ಎಂದು ಶ್ರೀ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಮಹಾ ಸಂಸ್ಥಾನಮಠದ ೧೩ನೇ ಪೀಠಾಧಿಪತಿ ಫಕೀರ ಸಿದ್ದರಾಮ ಸ್ವಾಮೀಜಿ ಹೇಳಿದರು.
ಶಿರಹಟ್ಟಿ: ಭಾವೈಕ್ಯತೆ ಎಂದರೆ ಎಲ್ಲರ ಮನಸ್ಸುಗಳು, ಭಾವನೆಗಳು, ಹೃದಯಗಳು ಒಂದಾಬೇಕು ಎಂದು ಶ್ರೀ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಮಹಾ ಸಂಸ್ಥಾನಮಠದ ೧೩ನೇ ಪೀಠಾಧಿಪತಿ ಫಕೀರ ಸಿದ್ದರಾಮ ಸ್ವಾಮೀಜಿ ಹೇಳಿದರು.
ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದ ಶ್ರೀ ಫಕೀರ ಸಿದ್ದರಾಮಸ್ವಾಮೀಜಿಗಳ ಅಮೃತ ಮಹೋತ್ಸವದ ಅಂಗವಾಗಿ ರಥಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅವರು ಬುಧವಾರ ಶಿರಹಟ್ಟಿ ಮಠದಲ್ಲಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾತಿ ಭೇದ ಮಾಡಲಾರದೇ ಧರ್ಮದ ಭಾವನೆ ಬೆಳೆಸಿಕೊಂಡರೆ ಭೂಮಿ ಸ್ವರ್ಗವಾಗಿ ಪರಿಣಮಿಸಲಿದೆ. ಸ್ವರ್ಗ ಆಗಲಿ ಎನ್ನುವ ದೃಷ್ಟಿಯಿಂದ ಫಕೀರ ಸ್ವಾಮಿಗಳ ಭಾವೈಕ್ಯತಾ ರಥಯಾತ್ರೆ ಪ್ರಾರಂಭ ಮಾಡಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠವು ಮೊದಲಿನಿಂದಲೂ ಭಾವೈಕ್ಯತಾ ಪೀಠವಾಗಿ ಹೆಸರುವಾಸಿಯಾಗಿದೆ. ಪೀಠ ಪರಂಪರೆಯ ಪ್ರಕಾರ ಭಾವೈಕ್ಯತಾ ರಥದ ಮೆರವಣಿಗೆ ನಾಡಿನ ತುಂಬ ಸಂಚಾರ ಮಾಡುವ ತಯಾರಿ ಮಾಡಲಾಗಿದೆ.
ಜ. ೧೦ರಂದು ಹುಬ್ಬಳ್ಳಿಯ ಬಿಡ್ನಾಳ ಗ್ರಾಮದಿಂದ ಬೃಹತ್ ಭಾವೈಕ್ಯತಾ ರಥಯಾತ್ರೆ ಹೊರಟಿದೆ. ೩೧ರ ವರೆಗೆ ೨೧ ದಿನಗಳ ಕಾಲ ನಾಡಿನಾದ್ಯಂತ ಸಂಚರಿಸಲಿದೆ ಎಂದರು.
ದೇಶದ ತುಂಬೆಲ್ಲ ಜಾತಿ ಜಾತಿಗಳ ಮಧ್ಯೆ ಗದ್ದಲ ನಡೆಯುತ್ತಿವೆ. ದ್ವೇಷ ಬಿಡು ಪ್ರೀತಿ ಮಾಡು ಎಂಬ ಭಾವೈಕ್ಯತೆ ಸಂದೇಶ ಸಾರುವ ಶಿರಹಟ್ಟಿ ಫಕೀರೇಶ್ವರ ಮಠ ಹಿಂದೂ-ಮುಸ್ಲಿಮರಲ್ಲಿ ಸೌಹಾರ್ದ ಮೂಡಿಸುವ ನಿಟ್ಟಿನಲ್ಲಿ ದೇಶದಲ್ಲಿಯೇ ಮಾದರಿಯಾಗಿದೆ.
ಇಂದು ಜಾತಿಗೊಂದು ಮಠಗಳು ಹುಟ್ಟಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಹಿಂದು- ಮುಸ್ಲಿಂ ಎರಡು ಧರ್ಮಗಳನ್ನು ಪ್ರತಿನಿಧಿಸುವ ಮಠ ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರೇಶ್ವರ ಮಠವಾಗಿದೆ ಎಂದರು.
ಮುಖಂಡರಾದ ಬಿ.ಎಸ್. ಹಿರೇಮಠ, ಎನ್.ಆರ್. ಕುಲಕರ್ಣಿ, ಚಂದ್ರಕಾಂತ ನೂರಶೆಟ್ಟರ, ಸುರೇಶ ಕಪ್ಪತ್ತನವರ, ಎಂ.ಸಿ. ಹಿರೇಮಠ, ಅಜ್ಜು ಪಾಟೀಲ, ಬಸವರಾಜ ಹೊಸೂರ, ನವಲಗುಂದ ದೇವರು, ಬಿ.ಎಂ. ಭೋರಶೆಟ್ಟರ, ಮುತ್ತು ಕುಳಗೇರಿ, ವೀರನಗೌಡ ಪಲ್ಲನಗೌಡ ಪಾಟೀಲ, ಎಂ.ಜಿ. ಮೊಹರೇಕರ ಇದ್ದರು.