ಸಾರಾಂಶ
ಕನ್ನಡಪ್ರಭ ವಾರ್ತೆ ಹಳಿಯಾಳ
ಸತ್ಯಮೇವ ಜಯತೇ ಎಂದು ತಮ್ಮ ನಡೆನುಡಿಯಲ್ಲಿ ಸಾರಿದ ರಾಷ್ಟ್ರಪಿತ ಗಾಂಧೀಜಿ ಹಾಗೂ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಲಾಲ್ ಬಹದ್ದೂರ ಶಾಸ್ತ್ರಿ ಅವರು ಸದಾ ನಮಗೆಲ್ಲರಿಗೂ ಆದರ್ಶವಾಗಲಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಗುರುವಾರ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಾಪುಜಿ ಮತ್ತು ಶಾಸ್ತ್ರೀಜಿ ದೇಶದ ಅಭಿವೃದ್ಧಿಯ ಕನಸು ಕಂಡವರು. ನನ್ನ ಜೀವನವೇ ನನ್ನ ಸಂದೇಶ ಎಂದು ಜಗತ್ತಿಗೆ ಸಾರಿದ ಗಾಂಧೀಜಿ ತಮ್ಮ ಸರಳ ಜೀವನ ಹಾಗೂ ಆದರ್ಶಗಳ ಮೂಲಕ ಗುರುತಿಸಲ್ಪಡುತ್ತಾರೆ. ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅವರು ಇತರ ದೇಶಗಳ ಸ್ವಾತಂತ್ರ್ಯ ಹೋರಾಟಗಳಿಗೂ ಸ್ಫೂರ್ತಿಯಾಗಿದ್ದರು. ಶಾಸ್ತ್ರೀಜಿ ಅಲ್ಪ ಆಡಳಿತಾವಧಿಯಲ್ಲಿ ಸರಳ ಜೀವನಶೈಲಿ, ಖಡಕ್ ಆಡಳಿತ ಮತ್ತು ದಿಟ್ಟ ನಿರ್ಧಾರಗಳ ಮೂಲಕ ತಾವೊಬ್ಬ ಅಸಾಮಾನ್ಯ ನಾಯಕನೆಂದೆನ್ನಿಸಿ ಕೊಂಡರು ಎಂದರು.
ಭಜನಾ-ವಂದನೆ:ಕಾರ್ಯಕ್ರಮದಲ್ಲಿ ಶಿಕ್ಷಕಿ ಸುಮಾ ಹಾಗೂ ಸಂಗಡಿಗರು ಭಾವಗೀತೆಗಳು ಭಜನೆಗಳ ಮೂಲಕ ಗಾಂಧೀಜಿ ಹಾಗೂ ಶಾಸ್ತ್ರಿಜೀ ಅವರ ದೇಶಸೇವೆ ಸ್ಮರಿಸಿದರು. ರಮೇಶ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.
ಸ್ವಚ್ಛತಾ ಕಾರ್ಯ:ಸಭಾ ಕಾರ್ಯಕ್ರಮದ ಆನಂತರ ಶಾಸಕರು ತಾಲೂಕಾಡಳಿತ ಸೌಧದ ಆವರಣದಲ್ಲಿ ಕಸಗುಡಿಸಿ ಸ್ವಚ್ಛತಾ ಕಾರ್ಯ ನಡೆಸಿದರು. ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ, ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೆಕರ, ಮುಖಂಡರಾದ ಉಮೇಶ ಬೊಳಶೆಟ್ಟಿ, ರವಿ ತೋರಣಗಟ್ಟಿ, ಮಾಲಾ ಬೃಗಾಂಜಾ, ಫಯಾಜ ಶೇಖ್, ಕುಮಾರ ಜಾವಳೇಕರ, ಖಲೀದ ದುಸಗಿಕರ, ಅನಿಲ ಚವ್ಹಾಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯ್ಕ ಬಾವಿಕೇರಿ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಿ.ಡಿ. ಗಂಗಾಧರ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಡಿ. ಮಡಿವಾಳ ಆಗಮಿಸಿದ್ದರು.