ಸಾರಾಂಶ
ನಾವು ಪರಿಸರವನ್ನು ಕಾಪಾಡಿದರೆ ಪರಿಸರ ನಮ್ಮನ್ನು ರಕ್ಷಣೆ ಮಾಡುತ್ತದೆ. ಪರಿಸರ ಕಾಳಜಿ ಯಾವತ್ತೂ ಕಡಿಮೆಯಾಗಬಾರದು ಎಂದು ಪರಿಸರ ತಜ್ಞ ಅಖಿಲೇಶ್ ಚಿಪ್ಳಿ ಹೇಳಿದರು.
ಸಾಗರ: ನಾವು ಪರಿಸರವನ್ನು ಕಾಪಾಡಿದರೆ ಪರಿಸರ ನಮ್ಮನ್ನು ರಕ್ಷಣೆ ಮಾಡುತ್ತದೆ. ಪರಿಸರ ಕಾಳಜಿ ಯಾವತ್ತೂ ಕಡಿಮೆಯಾಗಬಾರದು ಎಂದು ಪರಿಸರ ತಜ್ಞ ಅಖಿಲೇಶ್ ಚಿಪ್ಳಿ ಹೇಳಿದರು.
ತಾಲೂಕಿನ ಚಿಪ್ಪಳಿ ಲಿಂಗದಹಳ್ಳಿಯ ಶಿವಪ್ಪನಾಯಕ ಗ್ರಾಮ ಅರಣ್ಯ ಸಮಿತಿ ವತಿಯಿಂದ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹವಾಮಾನ ಬದಲಾಗುತ್ತಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಮಳೆಮಾರುತಗಳಲ್ಲಿ ವ್ಯತ್ಯಯ ಕಾಣುತ್ತಿದ್ದೇವೆ. ಅಲ್ಲಲ್ಲಿ ಭೂಕುಸಿತ, ಭೂಕಂಪ, ಸುನಾಮಿಯಂತಹ ಘಟನೆಗಳು ನಡೆಯುತ್ತಿವೆ. ಪರಿಸರದ ಮೇಲಿನ ದೌರ್ಜನ್ಯದಿಂದಲೇ ಇಂತಹ ವಿಕೋಪಗಳು ನಡೆಯುತ್ತಿದೆ. ಪರಿಸರ ಉಳಿಸಿಕೊಳ್ಳಬೇಕು ಎನ್ನುವ ಮನುಷ್ಯ ಸಂಕಲ್ಪ ಹಾಗೂ ಪ್ರಯತ್ನ ಯಾವತ್ತೂ ಹಸಿರಾಗಿರಬೇಕು ಎಂದರು.
ಬೇರೆಬೇರೆ ಯೋಜನೆ ಹೆಸರಿನಲ್ಲಿ ಪರಿಸರದ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಕಾಡು ನಾಶವಾಗುತ್ತಿದೆ. ರಸ್ತೆ ನಿರ್ಮಾಣ ಹೆಸರಿನಲ್ಲಿ ನೂರಾರು ವರ್ಷಗಳಿಂದ ಜನರಿಗೆ ನೆರಳು ನೀಡುತ್ತಿದ್ದ ಮರಗಳ ಮಾರಣಹೋಮ ನಡೆಸಲಾಗುತ್ತಿದೆ. ಇದನ್ನು ಪ್ರಶ್ನೆ ಮಾಡಿದರೆ ಅಭಿವೃದ್ಧಿ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ ಪರಿಸರ ಉಳಿಸಿಕೊಳ್ಳುವ ಜೊತೆಗೆ ಅಭಿವೃದ್ಧಿ ಕಾರ್ಯಕೈಗೊಳ್ಳಿ ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸುರೇಶ್, ಸಂದೀಪ್ ಎಸ್. ನಾಯಕ್, ಉಪ ವಲಯ ಅರಣ್ಯಾಧಿಕಾರಿಗಳು, ಗ್ರಾಮ ಅರಣ್ಯ ಸಮಿತಿ ಪ್ರಮುಖರು ಹಾಜರಿದ್ದರು.