ಕನ್ನಡಪ್ರಭ ವಾರ್ತೆ ತಾಳಿಕೋಟೆ ಮಹ್ಮದ ಪೈಗಂಬರರು ಹಾಗೂ ಬಸವಣ್ಣನವರು ತಮ್ಮ ಜೀವನ ಸಂದೇಶದ ಮೂಲಕ ಮಾನವ ಸಮಾಜಕ್ಕೆ ಸಮಾನತೆ, ಸಹೋದರತ್ವ ಸತ್ಯ, ಪ್ರೀತಿ ಹಾಗೂ ಮಾನವೀಯತೆಯ ಸಂದೇಶ ಸಾರುವ ಮೂಲಕ ಮನುಷ್ಯನ ಅಜ್ಞಾನ ಮತ್ತು ಅಂಧಕಾರ ಕಿತ್ತೊಗೆಯುವ ಕಾರ್ಯ ಮಾಡಿದ್ದಾರೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಮಹ್ಮದ ಪೈಗಂಬರರು ಹಾಗೂ ಬಸವಣ್ಣನವರು ತಮ್ಮ ಜೀವನ ಸಂದೇಶದ ಮೂಲಕ ಮಾನವ ಸಮಾಜಕ್ಕೆ ಸಮಾನತೆ, ಸಹೋದರತ್ವ ಸತ್ಯ, ಪ್ರೀತಿ ಹಾಗೂ ಮಾನವೀಯತೆಯ ಸಂದೇಶ ಸಾರುವ ಮೂಲಕ ಮನುಷ್ಯನ ಅಜ್ಞಾನ ಮತ್ತು ಅಂಧಕಾರ ಕಿತ್ತೊಗೆಯುವ ಕಾರ್ಯ ಮಾಡಿದ್ದಾರೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.

ಸ್ಥಳೀಯ ಜಮಾತೆ ಇಸ್ಲಾಂ ಹಿಂದ್ ನಗರ ಘಟಕದಿಂದ ರಾಜ್ಯವ್ಯಾಪಿ ಆಚರಿಸಿಕೊಂಡು ಬರುತ್ತಿರುವ ಸಿರತ್ ಅಭಿಯಾನದ ಕುರಿತು ಶ್ರೀ ವಿಠ್ಠಲ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಧರ್ಮದ ಮೂಲ ಉದ್ದೇಶ ಮನುಷ್ಯನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸುವುದು. ಮಹ್ಮದ್ ಪೈಗಂಬರರು ಪ್ರೀತಿ ಕರುಣೆ ಸಹೋದರತ್ವ ಶಾಂತಿ ಮತ್ತು ಮಾನವೀಯತೆ ಮೌಲ್ಯ ಬೋಧಿಸಿದರು. ಅದರಂತೆ ಬಸವಣ್ಣನವರು ಕೂಡ ಜಾತಿ, ಮೇಲು, ಕೀಳು ಬೇಧಗಳನ್ನು ವಿರೋಧಿಸಿ ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಶ್ರಮದ ಗೌರವ ಎತ್ತಿ ಹಿಡಿದರು. ಸಮಾಜದಲ್ಲಿ ಅಜ್ಞಾನ, ಮೂಢನಂಬಿಕೆ, ಅಸಮಾನತೆ ಹಾಗೂ ದ್ವೇಷದಂತಹ ಅಂಧಕಾರವನ್ನು ದೂರಮಾಡಬೇಕಾಗಿದೆ. ಕಲ್ಲು ದೇವರಾಗಲು ಸಾಧ್ಯವಿದೆ ಆದರೆ ಮನುಷ್ಯ ದೇವರಾಗಲು ಯಾಕೆ ಸಾಧ್ಯವಿಲ್ಲಾ ಎಂದು ಪ್ರಶ್ನಿಸಿದರು.

ಬೆಂಗಳೂರಿನ ಖ್ಯಾತ ಲೇಖಕ ಯೋಗೇಶ್ ಮಾಸ್ಟರ್ ಮಾತನಾಡಿ, ಭಗವಂತ ಮತ್ತು ಭಕ್ತನ ನೇರ ಸಂಪರ್ಕಕ್ಕಾಗಿ ಭಕ್ತಿ ಚಳುವಳಿ ಎಂಬುದು ಈ ಹಿಂದೆ ಕಾರಣವಾಯಿತು. ಪ್ರತಿಸಲವೂ ಸಮಾಜದಲ್ಲಿ ಒತ್ತಡ ಹೆಚ್ಚಾದಾಗ ಸಮಾಜೋದ್ಧಾರ್ಮಿಕ ಆಂದೋಲನಗಳು ಉಂಟಾದವು. ಪ್ರವಾದಿಗಳು ಬಸವಣ್ಣನವರು ಸಾರ್ವತ್ರಿಕವಾದಂತಹ ಸತ್ಯ ಶೋಧನೆಯಂತಹ ಬೋಧನೆಗಳನ್ನು ಮಾಡಿದ್ದಾರೆ ಎಂದರು.

ನೇತ್ರ ತಜ್ಞ ಡಾ.ಪ್ರಭುಗೌಡ ಪಾಟೀಲ (ಲಿಂಗದಳ್ಳಿ) ಮಾತನಾಡಿ, ನಾವು ಮಾನವರು ಮಾನವೀಯತೆಗಾಗಿ ಬದುಕಬೇಕಾಗಿದೆ. ಹಿಂದೂ ಮುಸ್ಲಿಂ ಎಂಬ ಭಾವನೆ ತೆಗೆದು ಹಾಕಿ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ನಡೆಯಬೇಕಾಗಿದೆ. ಈ ದೇಶದಲ್ಲಿ ಎಲ್ಲರ ಬದುಕು ಹೂವಿನಂತೆ ನಡೆದಿದೆ. ಕೆಲವೆಡೆ ಅದನ್ನು ಲಾಭಕ್ಕಾಗಿ ಬೇರ್ಪಡಿಸುವಂತಹ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

ಉಪನ್ಯಾಸಕ ಪ್ರೋ.ಲಾಲಹುಸೇನ್ ಕಂದಗಲ್ಲ ಹಾಗೂ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್. ಪಾಟೀಲ(ಕೂಚಬಾಳ), ವಿ.ಪಿ.ಎಂ.ಶಾಲಾ ಮುಖ್ಯಸ್ಥರಾದ ಫಾದರ್ ಸುನೀಲ್ ಅಂದ್ರಾದೆ ಮಾತನಾಡಿದರು. ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಜಾಹಿದ್ ನಮಾಜಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆ ಮೇಲೆ ದಾರ್ಮಿಕ ಮುಖಂಡ ಸೈಯದ್ ಶಕೀಲ್ ಅಹ್ಮದ್ ಖಾಜಿ, ಬೆಳಗಾವಿಯ ವಲಯ ಸಂಚಾಲಕ ಮೌಲಾನಾ ಅಬ್ದುಲ್ ಕಾದೀರ್ ಸೌದಾಗರ, ಶರಣ ಸಾಹಿತ್ಯ ಬಳಗದ ಅಧ್ಯಕ್ಷ ಡಾ.ವಿಜಯಕುಮಾರ ಕಾರ್ಚಿ, ಕದಳಿ ವೇದಿಕೆಯ ಅಧ್ಯಕ್ಷೆ ಉಮಾ ಸಾಲಂಕಿ, ಜಮಾತೆ ಇಸ್ಲಾಂ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಕುರ್ಷಿದ ಮೋಮಿನ್, ರೋಷನ್ ಬಿ ಎಕಿನ್, ಸಿರತ್ ಅಭಿಯಾನದ ಸಂಚಾಲಕ ಮುರ್ತುಜಾ ಮೇತ್ರಿ, ಉಪಸಂಚಾಲಕ ಹುಸೇನ್ ಪಟೇಲ್, ಮೌಲಾನಾ ಕಾಸ್ಮಿಮುಸ್ತಿ, ಜಾವೇದ್ ಮುಲ್ಲಾ, ಅಲ್ಲಾಭಕ್ಷ ನಮಾಜಕಟ್ಟಿ, ಮೊದಲಾದವರು ಉಪಸ್ತಿತರಿದ್ದರು