ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂಬರುವ ಚುನಾವಣೆ ವೇಳೆಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಒಗ್ಗೂಡಿ ಹೆಚ್ಚು ಪಕ್ಷ ಬಲವರ್ಧನೆ ನಿಟ್ಟಿನಲ್ಲಿ ಕೈಜೋಡಿಸಬೇಕು, ಇಂದಿನ ಜೆಡಿಎಸ್ ಅಭಿಯಾನ ಮುಂದಿನ ಚುನಾವಣಾ ಪರ್ವಕ್ಕೆ ಸಾಕ್ಷಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಹನೂರು ಶಾಸಕ ಎಂ. ಆರ್. ಮಂಜುನಾಥ್ ಹೇಳಿದರು.ಅವರು ವೆಂಕಟೇಶ್ವರ ಮಹಲ್ ನಲ್ಲಿ ಜಾತ್ಯಾತೀತ ಜನತಾದಳ ಆಯೋಜಿಸಿದ್ದ ಪದಗ್ರಹಣ, ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ಭಾಗದಲ್ಲಿ ಜೆಡಿಎಸ್ ಹೆಮ್ಮರವಾಗಿ ಬೆಳೆಯುವಂತಾಗಬೇಕು, ಇಂದಿನ ಕಾರ್ಯಕ್ರಮದಲ್ಲಿ ಇಲ್ಲಿ ಕಡಿಮೆ ಸಂಖ್ಯೆಯ ಜನರಿದ್ದರೂ ಸಹ ನಿಮ್ಮೆಲ್ಲರ ಶಕ್ತಿ ಅಗಾಧವಾದದ್ದು, ಬೂತ್ ಮಟ್ಟದಲ್ಲಿ ಜನರ ಬಳಿಗೆ ತೆರಳಿ ಕೆಲಸ ಮಾಡುವಂತಾಗಬೇಕು ಎಂದು ಹೇಳಿದರು.
ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅನ್ಯಾಯವಾದಲ್ಲಿ ಧ್ವನಿ ಎತ್ತಲು ಮುಂದಾಗಬೇಕು, ನೊಂದವರಿಗೆ ಶಕ್ತಿ ತುಂಬಿ ನ್ಯಾಯ ಕೊಡಿಸಲು ಎಲ್ಲರೂ ಕೆಲಸ ಮಾಡಬೇಕು. ಆಗಲೇ ಪಕ್ಷ ತನ್ನಿಂತಾನೇ ಬಲವರ್ಧನೆಯಾಗುತ್ತಾ ಹೋಗುತ್ತದೆ, ಈ ನಿಟ್ಟಿನಲ್ಲಿ ಎಲ್ಲರಿಗೂ ಶಕ್ತಿ ತುಂಬುವಲ್ಲಿ ನನ್ನ ಕೈಲಾದ ಪ್ರಯತ್ನ ಮಾಡುವೆ ಎಂದರು.ನಗರಸಭೆ ಸದಸ್ಯೆ ಜಯಮರಿರವರು ಜೆಡಿಎಸ್ ಸೇರ್ಪಡೆಯಾದ ಹಿನ್ನೆಲೆ ಅವರನ್ನು ಮಹಿಳಾ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಯಿತು.
ತಾಲೂಕು ಅಧ್ಯಕ್ಷರಾಗಿ ಮಾಂಬಳ್ಳಿ ರಾಜೇಶ್ ಮಹಾಜನ್, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಯ್ಯನಪುರ ರಾಚಯ್ಯ, ಉಪಾಧ್ಯಕ್ಷರಾಗಿ ಕುಣಗಳ್ಳಿ ಸುಂದರ್, ಯುವ ಘಟಕ ಅಧ್ಯಕ್ಷರಾಗಿ ಅಜಯ್ ನೇಮಕಗೊಂಡರು. ಯಳಂದೂರು ಜೆಡಿಎಸ್ ತಾಲೂಕು ಅಧ್ಯಕ್ಷರಾಗಿ ಆನಂದ್, ಪ್ರಧಾನ ಕಾರ್ಯದರ್ಶಿಯಾಗಿ ಅಂಬಳೆ ರವೀಶ್, ಯುವಘಟಕ ಅಧ್ಯಕ್ಷರಾಗಿ ಕಾರ್ತೀಕ್, ಸಂತೇಮರಳ್ಳಿ ಹೋಬಳಿ ಅಧ್ಯಕ್ಷರಾಗಿ ಆಯ್ಕೆಯಾದ ಶಂಕರಪ್ಪ ಹಾಗೂ ಇನ್ನಿತರರಿಗೆ ಶಲ್ಯ ನೀಡಿ ಅಭಿನಂದಿಸಲಾಯಿತು.ಕೊಳ್ಳೇಗಾಲ ಕ್ಷೇತ್ರದ ಪರಾಜಿತ ಅಭ್ಯರ್ಥಿ ಪುಟ್ಟಸ್ವಾಮಿ ಮಾತನಾಡಿ, ಇಂದಿನಿಂದಲೇ ಮುಂಬರುವ ಗ್ರಾಪಂ, ಜಿಪಂ, ತಾಪಂ ಚುನಾವಣೆಗೆ ಪಕ್ಷ ಸಜ್ಜಾಗಿದೆ. 241 ಬೂತ್ ಗಳಲ್ಲಿ ಈಗಾಗಲೇ 200 ಬೂತ್ ಗಳಿಗೆ ಕಾರ್ಯಕರ್ತರನ್ನು ನೇಮಿಸಲಾಗಿದೆ. ಇಂದಿನ ಕಾರ್ಯಕ್ರಮ ಮುಂದಿನ ಚುನಾವಣೆಯ ದಿಕ್ಸೂಚಿ, ಪಕ್ಷ ಹೆಮ್ಮರವಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸ್ಪಂದಿಸುತ್ತೇವೆ, ಜೆಡಿಎಸ್ ಮುಗಿಸುವುದು ಯಾರಿಂದಲೂ ಸಾಧ್ಯವಿಲ್ಲ, ಇಲ್ಲಿಂದ ನಾಯಕರಾದವರು ಕಾಂಗ್ರೆಸ್ ಪಕ್ಷದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ ಎಂದರು.