ಪಂಚ ಕ್ಷೇತ್ರದಲ್ಲಿ ಒಂದಾದ ಗುಣವಂತೆ ದೇವಸ್ಥಾನ ಜಗತ್ ಪ್ರಸಿದ್ಧವಾಗಿದೆ. ಭಕ್ತಾದಿಗಳು, ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಗುಣವಂತೇಶ್ವರ ಸಭಾಂಗಣದ ಅಡಿಗಲ್ಲು ಸಮಾರಂಭ

ಕನ್ನಡಪ್ರಭ ವಾರ್ತೆ ಹೊನ್ನಾವರ

ಪಂಚ ಕ್ಷೇತ್ರದಲ್ಲಿ ಒಂದಾದ ಗುಣವಂತೆ ದೇವಸ್ಥಾನ ಜಗತ್ ಪ್ರಸಿದ್ಧವಾಗಿದೆ. ಭಕ್ತಾದಿಗಳು, ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅವರಿಗೆ ಅನುಕೂಲ ಆಗುವ ಹಾಗೆ ಆಗಬೇಕು ಎಂದು ವಿಧಾನಸಭಾ ಉಪಾಸಭಾಧ್ಯಕ್ಷ ಮಂಕಾಳ ವೈದ್ಯ ಹೇಳಿದರು.

ತಾಲೂಕಿನ ಗುಣವಂತೆ ಶಂಭುಲಿಂಗೇಶ್ವರ ದೇವಸ್ಥಾನದ ವತಿಯಿಂದ ನಿರ್ಮಿಸಲಾಗುತ್ತಿರುವ ಗುಣವಂತೇಶ್ವರ ಸಭಾಂಗಣದ ಅಡಿಗಲ್ಲು ಸಮಾರಂಭ ನೆರವೇರಿಸಿ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.

₹ಆರು ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ, ಗುಣವಂತೇಶ್ವರ ಸಭಾಂಗಣಕ್ಕೆ ಸರಕಾರದಿಂದ ₹ಒಂದು ಕೋಟಿ ಕೊಡಿಸುವ ಜೊತೆಗೆ ವೈಯಕ್ತಿಕವಾಗಿಯೂ ಸಹಾಯ ಮಾಡುತ್ತೇನೆ. ಒಂದು ವರ್ಷದಲ್ಲಿ ಸಭಾಂಗಣ ನಿರ್ಮಿಸಿ ಲೋಕಾರ್ಪಣೆ ಮಾಡುವ ಹಾಗೆ ಮಾಡೋಣ ಎಂದರು.

ಇಲ್ಲಿ ನಿರ್ಮಿಸುತ್ತಿರುವ ಸಭಾಂಗಣ ಬಡವರಿಗೆ, ಸಾಮಾನ್ಯ ಜನರಿಗೆ ಅನುಕೂಲ ಆಗಬೇಕು. ಮದುವೆ ಇತರ ಕಾರ್ಯಕ್ರಮವನ್ನು ದೇವರ ಸನ್ನಿದಿಯಲ್ಲಿ ಮಾಡಿದ ಧನ್ಯತೆ ಅವರಿಗೆ ಆಗಬೇಕು. ಆ ನಿಟ್ಟಿನಲ್ಲಿ ತಮ್ಮ ಸಭಾಂಗಣ ಕಡಿಮೆ ವೆಚ್ಚದಲ್ಲಿ ಮದುವೆ ಮಾಡಲು ಅವಕಾಶ ಮಾಡಿಕೊಡಿ. ಇನ್ನೂ ಪ್ರತಿ ಸೋಮವಾರ ಅನ್ನಸಂತರ್ಪಣೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದೀರಿ ಇದೆಲ್ಲ ಆದಷ್ಟು ಬೇಗ ಆಗಲಿ ಎಂದರು.

ಪಂಚಕ್ಷೇತ್ರಗಳಾದ ಮುರುಡೇಶ್ವರ, ಗುಣವಂತೆಶ್ವರ, ದಾರೇಶ್ವರ, ಗೋಕರ್ಣೇಶ್ವರ, ಸಜ್ಜೆಶ್ವರದಲ್ಲಿ ಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂಬುದು ನನ್ನ ವಯಕ್ತಿಕ ಆಸೆ ಆಗಿದೆ. ಮುರುಡೇಶ್ವರದಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಒಂದಿನ ರಾತ್ರಿಯಿಂದ ಬೆಳಿಗ್ಗೆ ತನಕ ಜಾಗರಣೆ ಮಾಡಬೇಕು, ದೇವರ ಧ್ಯಾನ ಮಾಡಬೇಕು ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ನರಸಿಂಹ ಪಂಡಿತ ಮಾತನಾಡಿ, ದೇವಸ್ಥಾನ ಅಭಿವೃದ್ಧಿ, ಸಭಾಂಗಣ ನಿರ್ಮಾಣ, ಕೆರೆ ಅಭಿವೃದ್ಧಿ ಜನರಿಗಾಗಿ ಮಾಡುತ್ತಿದ್ದೇವೆ. ಸಭಾಂಗಣ ನಿರ್ಮಾಣಕ್ಕೆ ವೈದ್ಯರು ಸರಕಾರದಿಂದ ₹ಒಂದು ಕೋಟಿ ಕೊಡಿಸುತ್ತೇನೆ. ನಾನು ನಿಮ್ಮ ಜೊತೆ ಇರುತ್ತೇನೆ ಎಂದಿದ್ದಾರೆ. ನಾವು ಅವರ ಜೊತೆ ಇರುತ್ತೇವೆ. ಸಭಾಂಗಣ ನಿರ್ಮಾಣದ ನಂತರ ಕೆರೆ ಅಭಿವೃದ್ಧಿ ಮಾಡಲಿದ್ದೇವೆ. 50 ಅಡಿಯ ಶಿವನ ಮೂರ್ತಿ ನೀರು ಕೆರೆಗೆ ಬರುವ ಹಾಗೆ ಗಂಗಾವತರಣ ಮಾಡುವ ಯೋಜನೆ ಹಾಕಿ ಕೊಂಡಿದ್ದೇವೆ ಎಂದರು.

ಈ ಸಂದರ್ಭ ಆಡಳಿತ ಕಮಿಟಿಯ ಶಿವಾನಂದ ಗೌಡ, ಶಿವಾನಂದ ನಾಯ್ಕ, ಎಂ.ವಿ. ಹೆಗಡೆ, ಸುಬ್ರಾಯ ಆಚಾರಿ, ಅಣ್ಣಪ್ಪ ಗೌಡ ಮಾದ್ನಿ, ಧರ್ಮ ನಾಯ್ಕ, ನಾಗರಾಜ್ ಬಂಡಾರಿ, ಹರಿಶ್ಚಂದ್ರ ದೇಶಬಂಡಾರಿ. ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಚಂದ್ರಶೇಖರ ಗೌಡ, ಗಣಪ್ಪಯ್ಯ ಗೌಡ, ಕೃಷ್ಣ ಗೌಡ, ವಿಕ್ರಂ ನಾಯ್ಕ, ಅಣ್ಣಪ್ಪ ನಾಯ್ಕ, ಅಣ್ಣಪ್ಪ ಗೌಡ, ಮಾಬ್ಲ ಗೌಡ, ತಿಮ್ಮಪ್ಪ ಗೌಡ, ಗಜು ನಾಯ್ಕ ಮಂಕಿ ಇತರರಿದ್ದರು.

ಆಡಳಿತ ಮಂಡಳಿ ವತಿಯಿಂದ ಮಂಕಾಳ ವೈದ್ಯರಿಗೆ ಸನ್ಮಾನಿಸಲಾಯಿತು. ಚೇತನಾ ಗೌಡ ಪ್ರಾರ್ಥನೆ ಗೀತೆ ಹಾಡಿದರು. ಎಂ.ಎಸ್. ಹೆಗಡೆ ಸ್ವಾಗತಿಸಿದರು. ನಾಗಪ್ಪ ಗೌಡ ಪ್ರಾಸ್ತಾವಿಕ ಮಾತನ್ನಾಡಿದರು. ಗೋವಿಂದ ಗೌಡ ವಂದಿಸಿದರು. ಎಚ್.ಎಸ್. ಗೌಡ ನಿರೂಪಿಸಿದರು.