ಮಾಗಡಿ: ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ತಿಂಗಳಿಗೆರಡು ಬಾರಿ ಕೊಳವೆಬಾವಿಗಳ ಮೋಟಾರುಗಳು ಸುಟ್ಟು ಹೋಗುತ್ತಿದ್ದು ರಾಜ್ಯ ಸರ್ಕಾರ ಮೋಟಾರುಗಳ ರಿಪೇರಿ ಭಾಗ್ಯವನ್ನೂ ಒದಗಿಸಲಿ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಆಗ್ರಹಿಸಿದರು
ಮಾಗಡಿ: ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ತಿಂಗಳಿಗೆರಡು ಬಾರಿ ಕೊಳವೆಬಾವಿಗಳ ಮೋಟಾರುಗಳು ಸುಟ್ಟು ಹೋಗುತ್ತಿದ್ದು ರಾಜ್ಯ ಸರ್ಕಾರ ಮೋಟಾರುಗಳ ರಿಪೇರಿ ಭಾಗ್ಯವನ್ನೂ ಒದಗಿಸಲಿ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಆಗ್ರಹಿಸಿದರು.
ಪಟ್ಟಣದ ಬೆಸ್ಕಾಂ ಕಚೇರಿ ಮುಂದೆ ರೈತ ಸಂಘದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಒಮ್ಮೆ ಮೋಟಾರು ದುರಸ್ತಿಯಾದರೆ 40 ಸಾವಿರ ರುಪಾಯಿ ಖರ್ಚು ಮಾಡಿ ರೈತ ಬೆಳೆ ಬೆಳೆಯುವುದು ಹೇಗೆ? ಬಿಸಿಲು ಹೆಚ್ಚಾಗಿದ್ದು, ಬೆಳೆಗಳು ಒಣಗುತ್ತಿವೆ. ಮೋಟರ್ಗಳು ಕೆಟ್ಟು ಹೋದರೆ ರೈತ ಎಲ್ಲಿಂದ ಹಣ ತರಬೇಕು. ಮೋಟರ್ಗಳು ಸುಟ್ಟರೆ ಇದರ ರಿಪೇರಿ ಖರ್ಚನ್ನು ಸರ್ಕಾರವೇ ಭರಿಸಬೇಕು. ಬೆಳಗಿನ ಹೊತ್ತಿನಲ್ಲಿ ವಿದ್ಯುತ್ ಕೊಡಬೇಕು. ರಾತ್ರಿ ಹೊತ್ತಿನಲ್ಲಿ ವಿದ್ಯುತ್ ಕೊಟ್ಟರೆ ಜಮೀನುಗಳಲ್ಲಿ ಚಿರತೆಗಳ ಕಾಟದಲ್ಲಿ ಬೆಳೆಗಳಿಗೆ ನೀರು ಬಿಡಲು ಆಗುತ್ತಿಲ್ಲ. ಸಮರ್ಪಕ ವಿದ್ಯುತ್ ಪೂರೈಸುವಂತೆ ಆಕ್ರೋಶ ವ್ಯಕ್ತಪಡಿಸಿದರು.ಬೆಸ್ಕಾಂ ಅಧಿಕಾರಿಗಳಿಗೆ ಸರ್ಕಾರ ಸಂಬಳ, ಕಾರು ಮತ್ತಿತರ ಸೌಲಭ್ಯ ಕಲ್ಪಿಸಿರುವುದು ರೈತರು, ಜನಸಾಮಾನ್ಯರ ಸಮಸ್ಯೆ ಕೇಳಲು, ರೈತರ ಮನೆ ಬಾಗಿಲಿಗೆ ಬಂದು ಟಿಸಿ, ವಿದ್ಯುತ್ ಸಮರ್ಪಕವಾಗಿದೆಯಾ ಎಂದು ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಅದು ಬಿಟ್ಟು ರೈತರೇ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸುವ ಹಾಗೆ ಮಾಡಬಾರದು. ನಾವು ನಿಮ್ಮ ಕಚೇರಿ ಮುಂದೆ ರಸ್ತೆ ತಡೆ ನಡೆಸಿದರೆ ಪೊಲೀಸರು ನಮ್ಮನ್ನು ಬಂಧಿಸುತ್ತಾರೆ. ನಾವು ರಸ್ತೆ ತಡೆದರೂ ನೀವು ಸ್ಥಳಕ್ಕೆ ಬರುವುದಿಲ್ಲ. ರೈತರ ಸಮಸ್ಯೆ ಬಗೆಹರಿಸದಿದ್ದರೆ ಶೀಘ್ರದಲ್ಲೆ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಲೋಕೇಶ್ ಎಚ್ಚರಿಕೆ ನೀಡಿದರು.
ಬೆಸ್ಕಾಂ ಕಾರ್ಯನಿರ್ವಾಹಕ ಪ್ರಸನ್ನ ಕುಮಾರ್ ಮಾತನಾಡಿ, ಪಟ್ಟಣದ ಬೈಚಾಪುರದ ಬಳಿ ಕೇಬಲ್ ಕಾಮಗಾರಿ ಮತ್ತು ಶಿವನಸಂದ್ರದಲ್ಲಿ ಕೇಬಲ್ ಕಾಮಗಾರಿ ನಡೆಯುತ್ತಿದ್ದು ಸಮರ್ಪಕ ವಿದ್ಯುತ್ ಪೂರೈಕೆಗೆ ಅಡಚಣೆಯಾಗಿದೆ. ಎರಡು ಕಾಮಗಾರಿಗಳು ಪೂರ್ಣಗೊಂಡರೆ ಸಮಸ್ಯೆ ಬಗೆಹರಿಯುತ್ತದೆ. ಮೂರು ದಿನದೊಳಗೆ ಟಿಸಿಗಳನ್ನು ದುರಸ್ತಿ ಮಾಡುತ್ತೇವೆ. ಇದಕ್ಕಾಗಿ ಹೆಚ್ಚುವರಿ 30 ಟಿಸಿಗಳನ್ನು ತರಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ರೈತರ ಎಲ್ಲಾ ಸಮಸ್ಯೆಗಳನ್ನು ಬಗೆರಿಸುತ್ತೇವೆಂದು ಭರವಸೆ ನೀಡಿದ ಬಳಿಕ ರೈತ ಸಂಘ ಪ್ರತಿಭಟನೆ ಹಿಂಪಡೆಯಿತು.ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಚನ್ನರಾಯಪ್ಪ, ಧನಂಜಯ, ಷಡಕ್ಷರಿ, ಬುಡನ್ ಸಾಬ್, ವೆಂಕಟಲಕ್ಷ್ಮಮ್ಮ, ಮುನಿರಾಜ್, ಶಶಿಧರ್, ರಂಗಸ್ವಾಮಯ್ಯ, ರಾಜಣ್ಣ, ಕುಮಾರ್, ಸುರೇಶ್, ಶಂಕ್ರಪ್ಪ, ಉದಗಲ್ ರಾಜಣ್ಣ, ಕಾಂತರಾಜು, ಮಂಜುನಾಥ್, ಪಟೇಲ್ ಹನುಮಂತಯ್ಯ ಇತರರು ಭಾವವಹಿಸಿದ್ದರು.
(ಫೋಟೊ ಕ್ಯಾಫ್ಞನ್)ಮಾಗಡಿ ಪಟ್ಟಣದ ಬೆಸ್ಕಾಂ ಕಚೇರಿ ಮುಂದೆ ರೈತ ಸಂಘದ ಪದಾಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.