ಸಾರಾಂಶ
ಸಂಘದ ಚುನಾವಣೆಯಲ್ಲಿ ತಾವು ಸಹ ಸ್ಪರ್ಧಿಸಿದ್ದು, ಸೋಲು ಅನುಭವಿಸಿದರೂ ಸಂಘದ ಅಭಿವೃದ್ಧಿಗೆ ನಾವು ಸದಾ ಕೈ ಜೋಡಿಸುತ್ತೇವೆ. ಕನ್ನಡಪರ ಕೆಲಸ ಮಾಡಲು ಸದಾ ಸಿದ್ಧ ಎಂದ ಅವರು, ವಿಜೇತ ತಂಡ ಟೀಕೆಗಳು ಸತ್ತಿವೆ. ಕೆಲಸಗಳು ಉಳಿದಿವೆ ಎಂದು ಹೇಳಿಕೆ ನೀಡಿದೆ. ಟೀಕೆಗಳು ಎಂದಿಗೂ ಸಾಯೋದಿಲ್ಲ. ಅವರನ್ನು ಎಚ್ಚರಿಸಿ, ಮತ್ತಷ್ಟು ಕೆಲಸ ಮಾಡಲು ಹಚ್ಚುತ್ತವೆ.
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಗೆದ್ದವರು ಮಾತೃಹೃದಯದಿಂದ ಕನ್ನಡ ನಾಡು, ನುಡಿ ಉಳಿವಿಗಾಗಿ ಕೆಲಸ ಮಾಡಲಿ ಎಂಬುದೇ ನಮ್ಮ ಆಶಯ ಎಂದು ಸಂಘದ ಚುನಾವಣೆಯ ಪರಾಜಿತ ಅಭ್ಯರ್ಥಿ ಸಂಜೀವ ಧುಮಕನಾಳ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಚುನಾವಣೆಯಲ್ಲಿ ತಾವು ಸಹ ಸ್ಪರ್ಧಿಸಿದ್ದು, ಸೋಲು ಅನುಭವಿಸಿದರೂ ಸಂಘದ ಅಭಿವೃದ್ಧಿಗೆ ನಾವು ಸದಾ ಕೈ ಜೋಡಿಸುತ್ತೇವೆ. ಕನ್ನಡಪರ ಕೆಲಸ ಮಾಡಲು ಸದಾ ಸಿದ್ಧ ಎಂದ ಅವರು, ವಿಜೇತ ತಂಡ ಟೀಕೆಗಳು ಸತ್ತಿವೆ. ಕೆಲಸಗಳು ಉಳಿದಿವೆ ಎಂದು ಹೇಳಿಕೆ ನೀಡಿದೆ. ಟೀಕೆಗಳು ಎಂದಿಗೂ ಸಾಯೋದಿಲ್ಲ. ಅವರನ್ನು ಎಚ್ಚರಿಸಿ, ಮತ್ತಷ್ಟು ಕೆಲಸ ಮಾಡಲು ಹಚ್ಚುತ್ತವೆ ಎಂದರು.ಚುನಾವಣೆಯಲ್ಲಿ ಪುನರಾಯ್ಕೆಯಾದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಪಂ. ಬಸವರಾಜ ರಾಜಗುರು ಟ್ರಸ್ಟ್ ಅಧ್ಯಕ್ಷರು. ಒಬ್ಬರೇ ಎರಡು ಟ್ರಸ್ಟ್ ಹಾಗೂ ಸಂಘದ ಅಧ್ಯಕ್ಷರಾಗಬಾರದು. ತಾವೇ ಸ್ವಯಂ ಪ್ರೇರಣೆಯಿಂದ ಟ್ರಸ್ಟ್ಗೆ ರಾಜಿನಾಮೆ ನೀಡಲಿ ಎಂದರು.
ಅಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ ಹನುಮಾಕ್ಷಿ ಗೋಗಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಹಣಬಲ, ಜಾತಿಬಲ ಕೆಲಸ ಮಾಡಿದೆ. ಸೋತರೂ ಕನ್ನಡ ಕಟ್ಟುವ ಕೆಲಸ ಮಾಡುತ್ತೇನೆ. ಸಂಘದಲ್ಲಿ ಏನು ನಡೆಯುತ್ತಿದೆ ಎಂದು ಕಾಲಕಾಲಕ್ಕೆ ಮತದಾರರ ಮುಂದೆ ಹಂತ ಹಂತವಾಗಿ ಮಾಧ್ಯಮಗಳ ಮೂಲಕ ಮತದಾರರಿಗೆ ತಿಳಿಸುತ್ತೇನೆ. ಗೆದ್ದವರನ್ನು ಎಚ್ಚರಿಸುವ ಕೆಲಸ ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ ಎಂದರು.