ಶಿರಸಿ: ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ಸೋರಿಕೆ ವಿಷಯದ ಬಗ್ಗೆ ಪುರಾತತ್ವ ಇಲಾಖೆಯ ಅಧಿಕಾರಿಗಳ ಜತೆಗೆ ಹೋರಾಟ ಸಮಿತಿ ಪದಾಧಿಕಾರಿಗಳು ಚರ್ಚೆ ನಡೆಸಿ, ಒಂದು ವಾರದಲ್ಲಿ ದೇವಸ್ಥಾನ ಸೋರದಂತೆ ಮಾಡಿಕೊಡಬೇಕು ಮತ್ತು ಯಾವುದೇ ಕಾರಣಕ್ಕೂ ದೇವಸ್ಥಾನ ಮೇಲೆ ಟಾರ್ಪಲ್ ಹೊದಿಕೆ ಮಾಡಬಾರದು ಎಂದು ಆಗ್ರಹಿಸಿದರು.

ಈ ವರ್ಷ ಟಾರ್ಪಲ್ ಹೊದೆಸುವುದು ಅನಿವಾರ್ಯ, ಮಳೆ ನಿಂತ ಕೂಡಲೇ ದುರಸ್ತಿ ಕಾರ್ಯ ನಡೆಯಲಿದೆ ಎಂದು ಪುರಾತತ್ವ ಇಲಾಖೆ ಅಧಿಕಾರಿ ರಾಕೇಶ್ ಹೇಳುತ್ತಿದ್ದಂತೆ ಸಿಟ್ಟಿಗೆದ್ದ ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ, ಯಾವ ಕಾರಣಕ್ಕೂ ಟಾರ್ಪಲ್ ಬಳಸುವಂತಿಲ್ಲ, ನಿಮ್ಮ ನಾಟಕ ನೋಡಿ ಸಾಕಾಗಿದೆ. ಸದ್ಯ ತಾತ್ಪೂರ್ತಿಕ ಬಂಧ ಬಳಸಿ ಸೋರಿಕೆ ತಡೆಗಟ್ಟಬೇಕು. ಮಳೆಗಾಲ ಮುಗಿದ ಬಳಿಕ ಶಾಶ್ವತ ಕಾಮಗಾರಿ ಮಾಡಬೇಕು ಎಂದರು.

ಸಭೆ ಮಧ್ಯೆ ಧಾರವಾಡ ವೃತ್ತ ಅಧೀಕ್ಷಕ ರಮೇಶ ಮೂಲಿಮನಿ ದೂರವಾಣಿಯಲ್ಲಿ ಮಾತನಾಡಿ, ನೀವು ಹೇಳಿದ ಪರಿಹಾರದ ಬಗ್ಗೆ ನಮಗೆ ಒಂದು ವಾರ ಅವಕಾಶ ಮಾಡಿ ಕೊಡಿ. ನಾವು ಈ ಬಗ್ಗೆ ಮೇಲಧಿಕಾರಿಗಳ ಒಪ್ಪಿಗೆ ಪಡೆದು ಜೂ. 1 ಅಥವಾ 2ನೇ ತಾರೀಕು ಮತ್ತೆ ಬನವಾಸಿಯಲ್ಲಿ ಹೋರಾಟ ಸಮಿತಿ ಜತೆ ಸಭೆ ನಡೆಸಿ, ತೀರ್ಮಾನ ಕೈಕೊಳ್ಳುತ್ತೇವೆ ಎಂದರು.

ಬನವಾಸಿ ಪೊಲೀಸ್ ಇನ್‌ಸ್ಪೆಕ್ಟರ್‌ ಮಹಾಂತೇಶ ಕುಂಬಾರ್ ಮಾತನಾಡಿ, ಆದಷ್ಟು ಬೇಗ ದುರಸ್ತಿ ಕಾರ್ಯ ಮಾಡಬೇಕು ಎಂದರು.

ಶ್ರೀ ಮಧುಕೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ್ ಹೇಮಾದ್ರಿ ಮಾತನಾಡಿ, ತಾತ್ಪೂರ್ತಿಕ ಕೆಲಸ ಮಾಡಿ ಬಿಟ್ಟರೆ ಮುಂದಿನ ಯೋಜನೆ ಮರೆಯದೆ ಆಗಬೇಕು ಎಂದರು.


ಹೋರಾಟ ಸಮಿತಿ ಗೌರವಾಧ್ಯಕ್ಷ ಸಿ.ಎಫ್‌. ನಾಯಕ ಮಾಳಂಜಿ ಮಾತನಾಡಿ, ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಬೇಕು, ಯಾವುದೇ ಕಾರಣಕ್ಕೂ ಟಾರ್ಪಲ್ ಹಾಕಬಾರದು ಎಂದು ಮನವಿ ಮಾಡಿದರು.ವಿಎಸ್‌ಎಸ್‌ ಅಧ್ಯಕ್ಷ ಗಜಾನನ ಗೌಡ ಮಾತನಾಡಿ, ಇಲಾಖೆ ಪ್ರತಿ ವರ್ಷ ಹಾರಿಕೆ ಉತ್ತರ ಕೊಡುವುದೇ ರೂಢಿ ಎಂದರು. ಸಮಿತಿ ಕಾರ್ಯದರ್ಶಿ ವಿಶ್ವನಾಥ ವಡೆಯರ್, ಈ ವರ್ಷ ಸಾಧ್ಯವಾದರೆ ವಾಟರ್ ಪ್ರೂಫ್ ಪೇಂಟ್ ಎರಡು ಕೋಟ್ ಹೊಡೆದು ನೋಡಿ, ಸೋರಿಕೆ ಈ ವರ್ಷ ತಡೆಗಟ್ಟಲು ಸಾಕು, ಟಾರ್ಪಲ್ ಬಳಸುವಂತಿಲ್ಲ ಎಂದರು. ಮಧುಸೂದನ ದಯಾನಂದ ಭಟ್ ಮಾತನಾಡಿ, ಇಲಾಖೆಗೆ ಸಾಧ್ಯವಾಗದೇ ಹೋದರೆ ಸಾರ್ವಜನಿಕರಿಗೆ ಬಿಟ್ಟು ಕೊಡಿ, ದೇವರ ಕೆಲಸ ದೇಣಿಗೆ ಮೂಲಕ ಮಾಡುತ್ತೇವೆ ಎಂದರು.

ದೇವಸ್ಥಾನ ಸಮಿತಿ ಸದಸ್ಯರಾದ ಗೀತಾ ಯಜಮಾನ ಮಾತನಾಡಿ, ಮಳೆ ಮುಗಿಯುವ ವರೆಗೆ ತಗಡಿನ ಹೊದಿಕೆ ಮಾಡಿ, ಆನಂತರ ತೆಗೆದು ಇಲಾಖೆ ಯೋಜನೆ ಪ್ರಕಾರ ಕೆಲಸ ಮಾಡಲಿ ಎಂದು ಹೇಳಿದರು. ರವಿ ನಾಯಕ ಮತ್ತಳ್ಳಿ ಮಾತನಾಡಿ, ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ ಎಂದರು.

ದೇವಸ್ಥಾನ ಆಡಳಿತ ಮಂಡಳಿ ಕಾರ್ಯದರ್ಶಿ ಲತಾ ಶೆಟ್ಟಿ, ವೈದಿಕ ಪ್ರಮುಖ ವಿನಾಯಕ ಮಂಗಳೂರು, ಮೇಘರಾಜ ನರೇಗಲ್, ಪರಶುರಾಮ ಉಪ್ಪಾರ, ಪೊಲೀಸ್ ಇನ್‌ಸ್ಪೆಕ್ಟರ್‌ ರವೀಂದ್ರ, ಲಯನ್ಸ್ ಕ್ಲಬ್ ಮುಖ್ಯಸ್ಥ ಸಾಯಿರಾಮ ಕಾನಳ್ಳಿ, ಪೊಲೀಸ್‌ ಇಲಾಖೆಯ ಕುಮಾರ, ಸದಾನಂದ ಭಟ್, ಪುರಾತತ್ವ ಇಲಾಖೆಯ ಕಿರಣ್ ಭಟ್, ಇಲಾಖೆಯ ಅಮಿತ ಕುಮಾರ್, ಹಿಮಾಂಶ್ ಪಾಲ್ಗೊಂಡು ಚರ್ಚಿಸಿದರು.

ಶ್ರೀ ಮಧುಕೇಶ್ವರ ದೇವಸ್ಥಾನ ಮೇಲೆ ಹತ್ತಿ ನೋಡಿ ವೀಕ್ಷಣೆ ಮಾಡಲಾಯಿತು. ಇಲಾಖೆ ಅಧಿಕಾರಿ ರಾಕೇಶ್ ಇದ್ದರು.