ಕಾರ್ಕಳ: ಇಲ್ಲಿನ ಜೈ ತುಲುನಾಡ್ ಘಟಕದ ವತಿಯಿಂದ ತುಳು ಲಿಪಿ ಪುಸ್ತಕ ಬಿಡುಗಡೆ ಮತ್ತು ಒಂದು ದಿನದ ತುಲು ಲಿಪಿ ಕಲಿಕೆ ಕಾರ್ಯಾಗಾರವು ಬಜಗೋಳಿಯ ಶ್ರೀ ಸಾಯಿ ಸಭಾಭವನದಲ್ಲಿ ನಡೆಯಿತು. ಸಂಘಟನೆಯ ಅಧ್ಯಕ್ಷ ಮಹೇಶ್ ಕುಲಾಲ್ ಬೇಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯರಾದ ಕೃಷ್ಣ ಎಲ್. ಶೆಟ್ಟಿ ಅವರು ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರಲ್ಲದೇ, ತುಳು ಲಿಪಿ ಹೆಚ್ಚು ಜನರಿಗೆ ತಲುಪಿಸಬೇಕು, ಅದಕ್ಕಾಗಿ ಹೆಚ್ಚು ಕಡೆಗಳಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸಬೇಕು, ತುಳು ಭಾಷೆ ರಾಜ್ಯಭಾಷೆಯ ಸ್ಥಾನಮಾನ ಸಿಗಬೇಕು ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು ಮತ್ತು ಬಾರಕೂರಿನ ಅಳುಪ ವಂಶಸ್ಥರಾದ ಡಾ. ಆಕಾಶ್ ರಾಜ್ ಜೈನ್ ಅವರು ಗೇನದ ಬೊಲ್ಪು ಎಂಬ ತುಳು ಲಿಪಿ ಪುಸ್ತಕವನ್ನು ಬಿಡುಗಡೆ ಮಾಡಿ, ತುಳು ಭಾಷೆ, ತುಳು ಲಿಪಿಯ ಪ್ರಸಾರಕ್ಕೆ ಎಲ್ಲರೂ ಕೈ ಜೋಡಿಸಿದರೆ ಮಾತ್ರ ಈ ಹೋರಾಟಕ್ಕೆ ಜಯ ಸಿಗುತ್ತದೆ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸುಮಿತ್ ನಲ್ಲೂರ್, ಗ್ಯಾರಂಟಿ ಅನುಷ್ಠಾನ ಯೋಜನೆ ಅಧ್ಯಕ್ಷ ಅಜಿತ್ ಹೆಗ್ಡೆ, ದೈವರಾಧನೆಯ ಮಧ್ಯಸ್ಥದಾರರಾದ ಸದಾನಂದ ಸಾಲಿಯಾನ್, ಬಜಗೋಳಿಯ ಎಸ್.ಡಿ.ಎಂ.ಸಿ ಅಧ್ಯಕ್ಷ ಭಾಸ್ಕರ್ ಎಸ್ ಪೂಜಾರಿ, ಸಮಾಜ ಸೇವಕಿ ಗಾಯತ್ರಿ ಪ್ರಭು, ದೈವಾರಾಧಕ ರಾಜು ಪರವ ಹಾಗೂ ಜೈ ತುಳುನಾಡ್ ಕೇಂದ್ರ ಸಮಿತಿ ಅಧ್ಯಕ್ಷ ಅಶ್ವಥ್ ತುಲುವೆ ಉಪಸ್ಥಿತರಿದ್ದರು. ಪುಸ್ತಕವನ್ನು ಸಂಪಾದಿಸಿದ ಸಂಘಟನೆಯ ಉಡುಪಿ ಘಟಕದ ಪ್ರಚಾರ ಸಮಿತಿ ನಿರ್ವಾಹಕ ಪ್ರಶಾಂತ್ ಕುಂಜೂರ್ ಅವರನ್ನು ಸನ್ಮಾನಿಸಲಾಯಿತು. ಸಂಘಟನೆಯ ಸೌಮ್ಯ ಕುಂದರ್ ಕಾರ್ಯಕ್ರಮ ನಿರೂಪಿಸಿದರು, ಸಮನ್ವಿ ಪ್ರಾರ್ಥಿಸಿದರು, ಗೌತಮಿ ಸ್ವಾಗತಿಸಿದರು, ಕಾರ್ಕಳ ಘಟಕದ ಕಾರ್ಯದರ್ಶಿ ಅಕ್ಷತಾ ವರದಿ ಮಂಡಿಸಿದರು, ಉಪಾಧ್ಯಕ್ಷ ನಿತಿನ್ ನಲ್ಲೂರ್ ವಂದಿಸಿದರು. ಕಾರ್ಯಕ್ರಮದ ನಂತರ ಆಗಮಿಸಿದ ಸಾರ್ವಜನಿಕರಿಗೆ ಒಂದು ದಿನದ ತುಳು ಲಿಪಿ ಕಾರ್ಯಾಗಾರವನ್ನು ತುಳು ಲಿಪಿ ಶಿಕ್ಷಕ ಕಿರಣ್ ತುಲುವೆ ನಡೆಸಿಕೊಟ್ಟರು.