ಮಂಗಳೂರು: ಎo.ಸಿ.ಸಿ. ಬ್ಯಾಂಕಿನ ಬೆಳ್ಮಣ್ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಒಂದೇ ವರ್ಷದಲ್ಲಿ 10 ಕೋಟಿ ರು. ವ್ಯವಹಾರ ಗುರಿಯನ್ನು ಯಶಸ್ವಿಯಾಗಿ ದಾಟಿದ ಮಹತ್ವದ ಸಾಧನೆಯನ್ನು ಶನಿವಾರ ಬೆಳ್ಮಣ್‌ಶಾಖೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ವಹಿಸಿ, ಪ್ರಸ್ತುತ ಬ್ಯಾಂಕ್ ತನ್ನ ಶಾಖೆಗಳನ್ನು 16 ರಿಂದ 21 ಕ್ಕೆ ವಿಸ್ತರಿಸಿದೆ. ದೇರಳಕಟ್ಟೆ ಮತ್ತು ಕಟಪಾಡಿಯಲ್ಲಿ ಹೊಸ ಶಾಖೆಗಳನ್ನು ತೆರೆಯುವ ಮೂಲಕ ಮತ್ತು ಹೊನ್ನಾವರ ಹಾಗೂ ಮಂಗಳೂರಿನಲ್ಲಿ ಶಾಖೆಗಳನ್ನು ತೆರೆಯುವ ಪ್ರಯತ್ನ ಜಾರಿಯಲ್ಲಿದ್ದು, ಈ ಮೂಲಕ ಶಾಖೆಗಳ ಸಂಖ್ಯೆಯನ್ನು 25 ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ಹೆಚ್ಚುವರಿಯಾಗಿ 15 ಹೊಸ ಎಟಿಎಂಗಳನ್ನು ತೆರೆಯಲಾಗಿದೆ. ಮುಂದಿನ ಎರಡು ಮೂರು ತಿಂಗಳಲ್ಲಿ ಯುಪಿಐ ಮತ್ತು ಗೂಗಲ್ ಪೇ ಸೇವೆಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಘೋಷಿಸಿದರು.

ಮೊದಲ ವರ್ಷದೊಳಗೆ ಸಾಧಿಸಲಾದ 10 ಕೋಟಿ ರು. ಮೈಲಿಗಲ್ಲು ಸಾಮೂಹಿಕ ಪ್ರಯತ್ನ, ದೂರದೃಷ್ಟಿಯ ಯೋಜನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಹಕರ ಅಚಲ ನಂಬಿಕೆಯ ಫಲಿತಾಂಶವಾಗಿದೆ. ಈಗ 12 ಕೋಟಿ ರು. ದಾಟಿದೆ. ಬ್ಯಾಂಕಿನ ಪ್ರಾಥಮಿಕ ಉದ್ದೇಶ ತನ್ನ ಗ್ರಾಹಕರಿಗೆ ತ್ವರಿತ ಮತ್ತು ಪರಿಣಾಮಕಾರಿ ಸೇವೆಯನ್ನು ಒದಗಿಸುವುದು. ಶಾಖೆಯ ಗ್ರಾಹಕರು ಬ್ಯಾಂಕಿನ ನಿಜವಾದ ಬ್ರಾಂಡ್ ರಾಯಭಾರಿಗಳು ಎಂದು ಅವರು ಬಣ್ಣಿಸಿದರು.

ಕೇಕ್‌ ಕತ್ತರಿಸುವ ಮೂಲಕ ಸಂಭ್ರಮವನ್ನು ಹಂಚಿಕೊ‍ಳ್ಳಲಾಯಿತು. ಈ ಸಂದರ್ಭ ಸ್ಥಾಪಕ ಗ್ರಾಹಕರನ್ನು ಸನ್ಮಾನಿಸಲಾಯಿತು. ಎಸ್‌ಎಸ್ಎಲ್‌ಸಿ ಮತ್ತು ಪಿಯುಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಪರಪ್ಪಾಡಿ ಅವರ್ ಲೇಡಿ ಆಫ್ ಪರ್ಪೆಚುಯಲ್ ಸುಕುರ್ ಚರ್ಚ್‌ ಧರ್ಮಗುರು ರೆ.ಫಾ. ಡೇನಿಸ್ ಡಿಸೋಜಾ, ಬೆಳ್ಮಣ್‌ ಸಂತ ಜೋಸೆಫರ ಪ್ರೌಢ ಶಾಲೆಯ ಶಿಕ್ಷಕಿ ಲೈಲಾ ಬಬಿತಾ ನೊರೊನ್ಹಾ, ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್ ಮತ್ತು ಬೆಳ್ಮಣ್ ಶಾಖಾ ಪ್ರಬಂಧಕಿ ಶೈನಿ ಲಸ್ರಾದೊ ಇದ್ದರು.

ನಿರ್ದೇಶಕಿ ಡಾ. ಫ್ರೀಡಾ ಡಿಸೋಜಾ ಸ್ವಾಗತಿಸಿದರು. ಜೇಸನ್ ಪಿರೇರಾ ಶಿರ್ತಾಡಿ ನಿರೂಪಿಸಿ ವಂದಿಸಿದರು.