ಎಂಸಿಸಿ ಬ್ಯಾಂಕ್‌ ತನ್ನ ಕಾರ್ಕಳ ಶಾಖೆಯನ್ನು ಬುಧವಾರ ಸಾಲ್ಮರ ರಸ್ತೆಯ ಫಾರ್ಚೂನ್ ಆರ್ಕಿಡ್‌ನ ನೆಲ ಮಹಡಿಯಲ್ಲಿರುವ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿದೆ.

ಮಂಗಳೂರು: ಎಂಸಿಸಿ ಬ್ಯಾಂಕ್‌ ತನ್ನ ಕಾರ್ಕಳ ಶಾಖೆಯನ್ನು ಬುಧವಾರ ಸಾಲ್ಮರ ರಸ್ತೆಯ ಫಾರ್ಚೂನ್ ಆರ್ಕಿಡ್‌ನ ನೆಲ ಮಹಡಿಯಲ್ಲಿರುವ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿದೆ.ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ನೂತನ ಶಾಖಾ ಕಚೇರಿ ಉದ್ಘಾಟಿಸಿ ಮಾತನಾಡಿ, 2018ರಲ್ಲಿ ಸುಮಾರು 20 ಕೋಟಿ ರು. ಇದ್ದ ಶಾಖೆಯ ವ್ಯವಹಾರ ಕೇವಲ ಏಳು ವರ್ಷಗಳಲ್ಲಿ 56 ಕೋಟಿ ರು.ಗೆ ಏರಿಕೆಯಾಗಿದೆ. ಶಾಖಾ ಜಾಲವನ್ನು ಮತ್ತಷ್ಟು ವಿಸ್ತರಿಸುವುದು, ವ್ಯವಹಾರವನ್ನು ಬಲಪಡಿಸುವುದು ಹಾಗೂ ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಸೂಕ್ತ ಸ್ವಂತ ಕಟ್ಟಡಗಳನ್ನು ಹೊಂದುವುದು ಆಡಳಿತ ಮಂಡಳಿಯ ಉದ್ದೇಶವಾಗಿದೆ ಎಂದರು.

ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಸೇಫ್ ರೂಮ್‌ ಉದ್ಘಾಟಿಸಿ ಮಾತನಾಡಿ, ತುಳುನಾಡಿನ ಅಭಿವೃದ್ಧಿಯಲ್ಲಿ ಎಂಸಿಸಿ ಬ್ಯಾಂಕ್ ನೀಡುತ್ತಿರುವ ಕೊಡುಗೆ ಪ್ರಶಂಶನೀಯ ಎಂದರು.

ಅತ್ತೂರು ಸಂತ ಲಾರೆನ್ಸ್ ಮೈನರ್ ಬಸಿಲಿಕಾದ ಸಹಾಯಕ ಧರ್ಮಗುರು ಫಾ.ರಾಬಿನ್ ಸಾಂಥುಮಾಯರ್ ಅವರು ನೂತನ ಶಾಖಾ ಕಟ್ಟಡವನ್ನು ಆಶೀರ್ವದಿಸಿ ಮಾತನಾಡಿ, ಹೊಸ ಸ್ಥಳ ಕಾರ್ಕಳದ ಜನರನ್ನು ಇನ್ನಷ್ಟು ಉತ್ತಮವಾಗಿ ತಲುಪಲು ಹೊಸ ಅವಕಾಶವಾಗಿದೆ ಎಂದರು.

ಮಾಡೆಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಸಂಸ್ಥಾಪಕ ಅಧ್ಯಕ್ಷ ಜಾನ್ ಡಿಸಿಲ್ವಾ, ನಿವೃತ್ತ ಡ್ಯಾನ್‌ವೇ ಮೆಕ್ಯಾನಿಕಲ್ ಆ್ಯಂಡ್ ಎಂಜಿನಿಯರಿಂಗ್, ಯುಎಇಯ ಲ್ಯಾನ್ಸ್ ಲಾರ್ಡ್ ಜೋಸಿ ಲೋಬೋ, ವಕೀಲ ಶೇಖ್ ಅಬ್ದುಲ್ ಶರೀಫ್, ಉಪಾಧ್ಯಕ್ಷ ಜೆರಾಲ್ಡ್ ಜೂಡ್‌ ಡಿಸಿಲ್ವಾ, ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೆಜಸ್, ಶಾಖಾ ವ್ಯವಸ್ಥಾಪಕ ರೋಹನ್ ಜಾಯ್‌ ಪಿಂಟೋ, ನಿರ್ದೇಶಕರಾದ ಆಂಡ್ರ್ಯೂ ಡಿಸೋಜಾ, ಡೇವಿಡ್ ಡಿಸೋಜಾ, ಅನಿಲ್ ಪತ್ರಾವೊ, ರೋಶನ್ ಡಿಸೋಜಾ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಪಿ.ಮೊಂತೇರೊ, ಸಿ.ಜಿ.ಪಿಂಟೋ ಮತ್ತಿತರರು ಇದ್ದರು.

ನೂತನ ಕಟ್ಟಡದ ಮಾಲೀಕರ ಪರವಾಗಿ ಫಾರ್ಚೂನ್ ಪ್ರೊಮೋಟರ್ಸ್‌ನ ಪಾಲುದಾರ ಡೆನಿಸ್ ಪೆರೇರಾ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಸ್ವಾಗತಿಸಿದರು. ಶಾಖೆಯ ವ್ಯವಸ್ಥಾಪಕ ರೋಹನ್ ಜೆ.ಪಿಂಟೋ ವಂದಿಸಿದರು. ಎಲ್ಸನ್ ಹಿರ್ಗಾನ್ ನಿರೂಪಿಸಿದರು.