ಎಂಸಿಡಿಸಿಸಿ ಚುನಾವಣೆ: ಶಾಸಕ ಗಣೇಶ್‌ ಸ್ಪರ್ಧೆ ಖಚಿತ

| Published : Jun 14 2025, 02:19 AM IST

ಎಂಸಿಡಿಸಿಸಿ ಚುನಾವಣೆ: ಶಾಸಕ ಗಣೇಶ್‌ ಸ್ಪರ್ಧೆ ಖಚಿತ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆ ಬರುವ ಜೂ.26 ರಂದು ಘೋಷಣೆಯಾಗಿದ್ದು, ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಒಲುವು ತೋರಿದ್ದಾರೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆ ಬರುವ ಜೂ.26 ರಂದು ಘೋಷಣೆಯಾಗಿದ್ದು, ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಒಲುವು ತೋರಿದ್ದಾರೆ.ಕಳೆದ ಮೇ19 ರಂದು ಕನ್ನಡಪ್ರಭದಲ್ಲಿ ಸಹಕಾರ ಕ್ಷೇತ್ರಕ್ಕೂ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೆಜ್ಜೆ? ಎಂದು ವರದಿ ಪ್ರಕಟಿಸಿತ್ತು. ಕನ್ನಡಪ್ರಭದ ನಿರೀಕ್ಷೆಯಂತೆಯೇ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕಾಂಗ್ರೆಸ್‌ ಪಕ್ಷದ ಒಮ್ಮತದ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ನಟೇಶ್‌, ಶಾಸಕರ ಆಪ್ತ ಸಹಾಯಕ ಮಂಜುನಾಥ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಜಿ.ಮಡಿವಾಳಪ್ಪ ಸೇರಿದಂತೆ ಡಜನ್‌ ನಷ್ಟು ಮಂದಿ ಆಕಾಂಕ್ಷಿಗಳಾಗಿದ್ದರು.

ಆದರೆ, ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಬಣಕ್ಕೆ ತಪ್ಪಿಸಬೇಕು ಎಂದು ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ಶಾಸಕರನ್ನೇ ಕಣಕ್ಕಿಳಿಸಲು ಸೂಚನೆ ನೀಡಿದ್ದ ಹಿನ್ನಲೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸ್ಪರ್ಧಿಸಲು ಒಲವು ತೋರಿ, ಇತ್ತೀಚಗೆ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷ, ಡೆಲಿಗೇಡೆಟ್‌ಗಳು ಹಾಗೂ ಸಂಘದ ಸಿಇಒಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕಾಂಗ್ರೆಸ್‌ ಬೆಂಬಲಿತರೇ ಅಧಿಕಾರ ಹಿಡಿದಿದ್ದಾರೆ. ಗೆಲ್ಲುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮಣಿದು ಸ್ಪರ್ಧಿಸಲಿದ್ದಾರೆ.

ನಿರಾಸೆ?:

ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮಹದಾಸೆ ಇಟ್ಟುಕೊಂಡಿದ್ದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌ಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸ್ಪರ್ಧೆ ಒಲುವು ತೋರಿದ್ದರಿಂದ ಸಹಜವಾಗಿ ನಿರಾಸೆ ಆಗಿದೆ.ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಹಾಗೂ ಪಕ್ಷದ ಮುಖಂಡರು ಸಲಹೆ ನೀಡಿದ ಕಾರಣ ಎಂಸಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದೇನೆ.-ಎಚ್.ಎಂ.ಗಣೇಶ್‌ ಪ್ರಸಾದ್‌ ಕಾಂಗ್ರೆಸ್‌ ಶಾಸಕ, ಗುಂಡ್ಲುಪೇಟೆ

ಎಂಸಿಡಿಸಿಸಿ ಬ್ಯಾಂಕ್‌ ಮಾಜಿ

ನಿರ್ದೇಶಕ ಸುನೀಲ್‌ ಹಿಂದೇಟು?

ಕಳೆದ ಅವಧಿಯಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿರ್ದೇಶಕ (ಎಂಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ) ಎಂ.ಪಿ.ಸುನೀಲ್‌ ಬಿಜೆಪಿಯಿಂದ ದೂರ ಸರಿದಿರುವ ಕಾರಣ ಜೊತೆಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸ್ಪರ್ಧಿಸುವ ಕಾರಣ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸ್ಪರ್ಧಿಸದಿದ್ದಲ್ಲಿ ಕಾಂಗ್ರೆಸ್‌ನ ಒಡಕಿನ ಲಾಭ ಪಡೆದು ಸ್ಪರ್ಧಿಸಲು ಚಿಂತನೆ ನಡೆಸಿದ್ದರು. ಮತ್ತು ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಜೊತೆ ವಿರಸ ಕಟ್ಟಿಕೊಂಡಿರುವ ಕಾರಣ ಬಿಜೆಪಿ ಬೆಂಬಲಿತ ಮತಗಳು ಕೈ ಕೊಡುವ ಕಾರಣ ಸ್ಪರ್ಧಿಸುತ್ತಿಲ್ಲ ಎನ್ನಲಾಗಿದೆ.

ಬಿಜೆಪಿಯಿಂದ ವೀರಪ್ಪ ಸ್ಪರ್ಧೆ ಖಚಿತ

ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸ್ಪರ್ಧೆಗೆ ಇಳಿಯಲು ಒಲುವು ತೋರುತ್ತಿದ್ದಂತೆಯೇ ಬಿಜೆಪಿಯಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಸಭೆ ನಡೆಸಿ, ತಾಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಎಸ್.ಎಂ.ವೀರಪ್ಪ ಸ್ಪರ್ಧಿಸಲು ಬಿಜೆಪಿ ಸೂಚನೆ ನೀಡಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾತ್ರಿ ಸಭೆ ನಡೆಸಿ ಬಿಜೆಪಿ ಹಿರಿಯ ಮುಖಂಡ ಎಚ್.ಜಿ.ಮಲ್ಲಕಾರ್ಜುನಪ್ಪ ಸ್ಪರ್ಧಿಸಲು ಸೂಚಿಸಿದರೂ ಸ್ಪರ್ಧಿಸಲ್ಲ ಎಂದು ಹೇಳಿದಾಗ ಕೊನೆಗೆ ತಾಪಂ ಮಾಜಿ ಸದಸ್ಯ ಎಸ್.ಎಂ.ವೀರಪ್ಪ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದಾರೆ.