ಸಾರಾಂಶ
ಈ ಅಧಿಕಾರವಧಿ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳುವ ಅಗತ್ಯವೇನು? ಯಾಕೆ ಸಿದ್ದರಾಮಯ್ಯಗೆ ವಿಶ್ವಾಸವಿಲ್ಲವೇ? ಇದು ಅವರಿಗೆ ತಾವು ಮುಂದುವರಿಯುವ ವಿಶ್ವಾಸವಿಲ್ಲ. ಅಸ್ಥಿರತೆಯಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
ಹುಬ್ಬಳ್ಳಿ:
ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ಅಸ್ಥಿರತೆಯ ಲಕ್ಷಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಅಧಿಕಾರವಧಿ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳುವ ಅಗತ್ಯವೇನು? ಯಾಕೆ ಸಿದ್ದರಾಮಯ್ಯಗೆ ವಿಶ್ವಾಸವಿಲ್ಲವೇ? ಇದು ಅವರಿಗೆ ತಾವು ಮುಂದುವರಿಯುವ ವಿಶ್ವಾಸವಿಲ್ಲ. ಅಸ್ಥಿರತೆಯಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ವ್ಯಂಗ್ಯವಾಡಿದರು.
ಗೊಂದಲ ತಪ್ಪಿಸುವ ಉದ್ದೇಶದಿಂದ ಜಾತಿ ಗಣತಿ ಆರಂಭಿಸಿದ್ದಾರೆ ಎಂದು ಆರೋಪಿಸಿದ ಅವರು, ಸಮೀಕ್ಷೆ ಹೆಸರಲ್ಲಿ ಜಾತಿ ಗಣತಿ ಮಾಡುತ್ತಿದ್ದಾರೆ. ಇಲ್ಲದ ಜಾತಿಗಳನ್ನೆಲ್ಲ ಸೇರಿದ್ದಾರೆ. ಮುಜಾವರ ಬ್ರಾಹ್ಮಣ, ಬ್ರಾಹ್ಮಣ ಕ್ರಿಶ್ಚಿಯನ್ ಇವೆಲ್ಲ ಏನು ತೋರಿಸುತ್ತಿದೆ? ಯಾವುದಾದರೂ ಸಂಘಟನೆ ಸದಸ್ಯರಾಗಿದ್ದಾರಾ? ಎನ್ನುವ ಪ್ರಶ್ನೆಯೂ ಇದೆ. ಇದೆಲ್ಲ ಯಾಕೆ ಬೇಕು? ಎಂದು ಪ್ರಶ್ನಿಸಿದರು.ಆರ್ಎಸ್ಎಸ್, ವಿಎಚ್ಪಿ ಸದಸ್ಯರೆಂದರೆ ಹಿಡಿದುಕೊಂಡು ಹೋಗುವುದಕ್ಕಾಗಿಯೇ ಈ ರೀತಿ ಪ್ರಶ್ನೆ ಮಾಡುತ್ತಿದ್ದಾರಾ? ಎಂದ ಅವರು, ಜನ ಹಾಗೂ ಜಾತಿ ಗಣತಿ ಮಾಡುವ ಅಧಿಕಾರ ಇರುವುದು ಕೇಂದ್ರಕ್ಕೆ. ಇವರು ಸುಮ್ಮನೆ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಜಿಎಸ್ಟಿ ಪರಿಹಾರ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಮೊದಲು ಮನವಿ ಮೇಲೆ ಮನವಿ ಕೊಟ್ಟರೂ ರಾಜ್ಯ ಸರ್ಕಾರದ ಪಾಲು ಕೊಡುತ್ತಿರಲಿಲ್ಲ. ಎನ್ಡಿಎ ಸರ್ಕಾರ ಬಂದ ಮೇಲೆ ನಾವೇ ಮೊದಲು ಕೊಡುತ್ತಿದ್ದೇವೆ. ಆದರೆ, ರಾಜ್ಯ ಸರ್ಕಾರವನ್ನು ಆರ್ಥಿಕವಾಗಿ ಸರಿಯಾಗಿ ನಡೆಸಲು ಇವರಿಗೆ ಆಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರಷ್ಟೇ ಎಂದರು.