ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ

| Published : May 27 2025, 01:10 AM IST

ಸಾರಾಂಶ

ಹುಕ್ಕೇರಿ ಕೃಷಿ ಇಲಾಖೆ ಆವರಣದಲ್ಲಿ ಶಾಸಕ ನಿಖಿಲ್ ಕತ್ತಿ ಅವರು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು ರೈತರು ಭೂಮಿ ತೇವಾಂಶ ನೋಡಿಕೊಂಡು ಮುಂಗಾರು ಬಿತ್ತನೆ ಪ್ರಾರಂಭಿಸಬೇಕು. ಕೃಷಿ ಇಲಾಖೆಯು ಬಿತ್ತನೆಗೆ ಬೇಕಾದ ಅಗತ್ಯ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ಪಟ್ಟಣದ ಹೊರವಲಯದ ಕೃಷಿ ಇಲಾಖೆ ಆವರಣದಲ್ಲಿ ಸೋಮವಾರ ರೈತರಿಗೆ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ಅವಶ್ಯಕತೆಗೆ ಅನುಗುಣವಾಗಿ ಬೀಜ ಮತ್ತು ಗೊಬ್ಬರ ಸಂಗ್ರಹವಿದೆ. ಹುಕ್ಕೇರಿ, ಸಂಕೇಶ್ವರ ಮತ್ತು ಯಮಕನಮರಡಿ ರೈತ ಸಂಪರ್ಕ ಕೇಂದ್ರ ಮತ್ತು 37 ಪಿಕೆಪಿಎಸ್‌ಗಳಲ್ಲಿ ಬೀಜ, ಗೊಬ್ಬರ ವಿತರಿಸಲಾಗುತ್ತಿದೆ. ಬೀಜ, ಗೊಬ್ಬರ ವಿತರಣೆಯಲ್ಲಿ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ರೈತರು ಕೃಷಿ ಇಲಾಖೆಗೆ ಅಗತ್ಯ ದಾಖಲಾತಿ ಸಲ್ಲಿಸಿ ಮುಂಗಾರು ಹಂಗಾಮಿನ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ರಾಮಚಂದ್ರ ನಾಯ್ಕರ ಮಾತನಾಡಿ, ಈಗಾಗಲೇ 5502 ಮೆಟ್ರಿಕ್ ಟನ್ ವಿವಿಧ ಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. 5 ಸಾವಿರ ಕ್ವಿಂಟಲ್ ಸೋಯಾಬಿನ್, 5 ಕ್ವಿಂಟಲ್ ಹೆಸರು ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದೆ ಎಂದರು.

ಮುಖಂಡರಾದ ಮಹಾವೀರ ನಿಲಜಗಿ, ಎ.ಕೆ.ಪಾಟೀಲ, ಸತ್ಯಪ್ಪಾ ನಾಯಿಕ, ಗುರು ಕುಲಕರ್ಣಿ, ರಾಚಯ್ಯ ಹಿರೇಮಠ, ಬಿ.ಕೆ.ಮಗೆನ್ನವರ, ಶಿವನಗೌಡ ಪಾಟೀಲ, ಆನಂದ ಲಕ್ಕುಂಡಿ, ಶೀತಲ ಬ್ಯಾಳಿ, ಚನ್ನಪ್ಪ ಗಜಬರ, ಸಿದ್ದಪ್ಪ ಹಳಿಜೋಳ, ಎಚ್.ಎಲ್.ಪೂಜೇರಿ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಪುರುಷೋತ್ತಮ ಫೀರಾಜೆ ಮತ್ತಿತರರು ಉಪಸ್ಥಿತರಿದ್ದರು.