ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳುವ ಜೊತೆಗೆ ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ರೋಗಿಗಳ ಬದುಕು ಹಸನುಗೊಳಿಸಲು ಶ್ರಮಿಸಬೇಕು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯ, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಲೈಡ್ ಹೆಲ್ತ್ ಸಂಸ್ಥೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.
ರೋಗಿಗಳ ಪಾಲಿಗೆ ವೈದ್ಯರೇ ದೇವರು. ವೈದ್ಯಕೀಯ ಕ್ಷೇತ್ರದ ಪದವಿ ಪಡೆದು ಪಾದಾರ್ಪಣೆ ಮಾಡುತ್ತಿರುವ ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಸೇವೆ ಮಾಡುವ ಮೂಲಕ ಜನಾನುರಾಗಿಯಾಗಿರಬೇಕು. ತಮ್ಮ ಓದಿಗೆ ಕಾರಣರಾದ ನಿಮ್ಮ ತಂದೆ, ತಾಯಿ ಸೇರಿದಂತೆ ಕುಟುಂಬದವರ ಪರಿಶ್ರಮವನ್ನು ಸ್ಮರಿಸಬೇಕು, ಮನುಷ್ಯನಿಗೆ ಎಷ್ಟೇ ಹಣವಿದ್ದರೂ ಆರೋಗ್ಯ ಅತೀ ಅಮೂಲ್ಯವಾದದು ಎಂದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿ ಹರ್ಷಗುಪ್ತ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಸಮಾಜಿಕ ಕಳಕಳಿ ಹೊಂದಿರಬೇಕು. ವೃತ್ತಿ ಜೀವನದಲ್ಲಿ ನೈತಿಕತೆಗೆ ಹೆಚ್ಚು ಒತ್ತು ನೀಡಬೇಕು. ಸಮಸ್ಯೆಯ ಆಳ, ಅಗಲದ ಸಂಪೂರ್ಣ ಅರಿವಿನಿಂದ ಪರಿಹಾರ ಸಾಧ್ಯ. ರೋಗಿಗಳ ಜೀವನ ಸುಧಾರಣೆಯಲ್ಲಿ ವೈದ್ಯಕೀಯ ಸೇವೆ ಬಹಳ ಮುಖ್ಯ. ಹಣಕ್ಕೆ ಹೆಚ್ಚು ಒತ್ತು ನೀಡದೇ ವೈದ್ಯಕೀಯ ಕ್ಷೇತ್ರ ಸೇವಾ ಮನೋಭಾವನೆಯನ್ನು ಮೈಗೋಡಿಸಿಕೊಳ್ಳಬೇಕು ಎಂದರು.
ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಅವರು ವೈದ್ಯಕೀಯ ಪದವೀಧರಿಗೆ ಮುಂದಿನ ವೈದ್ಯಕೀಯ ಕ್ಷೇತ್ರದಲ್ಲಿನ ಸವಾಲು ಹಾಗೂ ಜೀವನದ ಅಭ್ಯಾಸ ಮತ್ತು ಕಲಿಕೆ ಕುರಿತು ಕೆಲ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.ವೈದ್ಯಕೀಯ ಪದವಿ ಪಡೆದ ಪದವೀಧರರಿಗೆ ಅಭಿನಂದನೆ ತಿಳಿಸಿದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎ.ಶೇಖರ್, ವೈದ್ಯಕೀಯ ಸೇವೆಗಳ ಬಗ್ಗೆ ಹಿತವಚನ ನೀಡಿ ಪದವಿ ಪಡೆದ ವಿದ್ಯಾರ್ಥಿಗಳು ಕುಟುಂಬ ಸದಸ್ಯರಿಗೆ ವಿದೆಯವಾಗಿರಬೇಕು ಎಂದರು.
ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿ, ಪದವಿ ಪಡೆದ ಪದವೀಧರರಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಅತಿಹೆಚ್ಚು ಅಂಕ ಪಡೆದ ಹಾಗೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಬಹುಮಾನ ನೀಡಲಾಯಿತು.148 ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನ ವಿಭಾಗದಲ್ಲಿ 34 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಟ್ರಸ್ಟಿ ಡಿ.ದೇವರಾಜ್, ವಿಶ್ವವಿದ್ಯಾಲಯದ ರಿಜಿಸ್ಟಾರ್ ಡಾ.ಸಿ.ಕೆ.ಸುಬ್ಬರಾಯ, ಆದಿಚುಂಚನಗಿರಿ ಆಸ್ಪತ್ರೆ ಮುಖ್ಯಸ್ಥ ಡಾ.ಕೆ.ಎಂ.ಶಿವಕುಮಾರ್, ಅಕಾಡೆಮಿಕ್ ಡೀನ್ ಡಾ.ರಮೇಶ್, ಹಣಕಾಸು ಮುಖ್ಯಸ್ಥ ಬಿ.ಕೆ.ಉಮೇಶ್, ಏಮ್ಸ್ ಆಡಳಿತಾಧಿಕಾರಿ ಸಿ.ಎನ್.ಚಂದ್ರನ್ರಾಜ್ ಸೇರಿದಂತೆ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.