ಗ್ಯಾರಂಟಿ ಸಮರ್ಪಕ ಜಾರಿಗಾಗಿ ಗ್ರಾಪಂ ಮಟ್ಟದಲ್ಲೂ ಸಭೆ: ಸುಭಾಷ್ ಮಜ್ಜಗಿ

| Published : Jun 03 2025, 12:22 AM IST

ಗ್ಯಾರಂಟಿ ಸಮರ್ಪಕ ಜಾರಿಗಾಗಿ ಗ್ರಾಪಂ ಮಟ್ಟದಲ್ಲೂ ಸಭೆ: ಸುಭಾಷ್ ಮಜ್ಜಗಿ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಪ್ರತಿ ಗ್ರಾಮ ಪಂಚಾಯಿತಿಗೂ ಭೇಟಿ ನೀಡಿ ಪಂಚ ಗ್ಯಾರಂಟಿಗಳ ಕುರಿತು ಜನರು ಅನುಭವಿಸುವ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಸವಣೂರು: ಪಂಚ ಗ್ಯಾರಂಟಿ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಸಭೆ ಆಯೋಜಿಸಲಾಗುವುದು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಭಾಷ್ ಮಜ್ಜಗಿ ತಿಳಿಸಿದರು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈಗಾಗಲೇ ಪ್ರತಿ ಗ್ರಾಮ ಪಂಚಾಯಿತಿಗೂ ಭೇಟಿ ನೀಡಿ ಪಂಚ ಗ್ಯಾರಂಟಿಗಳ ಕುರಿತು ಜನರು ಅನುಭವಿಸುವ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಶೀಘ್ರದಲ್ಲಿ ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಆಯೋಜಿಸಲಾಗುವುದು ಎಂದರು.ತಾಲೂಕಿನಾದ್ಯಂತ ಪದೇ ಪದೇ ಹೆಸ್ಕಾಂ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಈ ರೀತಿ ವಿದ್ಯುತ್ ಕಡಿತ ಆಗುತ್ತಿರುವುದರಿಂದ ರೈತರು, ಜನಸಾಮಾನ್ಯರಿಗೆ ಅನಾನುಕೂಲ ಉಂಟಾಗಿದ್ದು, ಕೂಡಲೇ ತಾಂತ್ರಿಕ ಲೋಪದೋಷಗಳನ್ನು ಶೀಘ್ರದಲ್ಲಿ ಸರಿಪಡಿಸಿ ಜನಸಾಮಾನ್ಯರಿಗೆ ಗೃಹಜ್ಯೋತಿ ಯೋಜನೆ ಕುರಿತು ಮುಂಬರುವ ದಿನಗಳಲ್ಲಿ ಯಾವುದೇ ಆರೋಪಗಳು ಬಾರದಂತೆ ಹೆಸ್ಕಾಂ ಇಲಾಖೆ ಕ್ರಮ ವಹಿಸಬೇಕು ಎಂದು ಹೆಸ್ಕಾಂ ಅಧಿಕಾರಿ ದೇವರಾಜ ಅವರಡ್ಡಿ ಅವರಿಗೆ ತಿಳಿಸಿದರು.ಹೂವಿನಶಿಗ್ಲಿ ಮಾರ್ಗಕ್ಕೆ ಕೋವಿಡ್ ನಂತರದಲ್ಲಿ ಬಸ್ ಸ್ಥಗಿತಗೊಂಡಿದ್ದು, ಕೂಡಲೇ ಒಂದು ಬಸ್ ವ್ಯವಸ್ಥೆ ಕಲ್ಪಿಸಬೇಕು. ಮನ್ನಂಗಿ ಮೆಳ್ಳಾಗಟ್ಟಿ ಹಳೆ ಹಲಸೂರ ಗ್ರಾಮಗಳ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಅದಕ್ಕೆ ಒಂದು ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದರು.

ದಲ್ಲಾಳಿಗಳು, ಗ್ರಾಹಕರಿಂದ ₹10ರಿಂದ ₹15 ಸಾವಿರ ಪಡೆದು ಪಡಿತರ ಚೀಟಿ ನೀಡುತ್ತಿದ್ದಾರೆಂಬ ದೂರು ಬಂದಿದ್ದು, ಆಹಾರ ನಿರೀಕ್ಷಕರು ಅಂತಹ ಕಾರ್ಡ್‌ಗಳನ್ನು ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕು. ಜೋಳ ಖರೀದಿ ಕೇಂದ್ರ ಸವಣೂರಿನಲ್ಲಿ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ನೂತನವಾಗಿ ಆಗಮಿಸಿ ಅಧಿಕಾರ ವಹಿಸಿಕೊಂಡ ಪ್ರಭಾರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್. ಶಿಡೇನೂರ ಅವರನ್ನು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ತಾಪಂ ನಾಮನಿರ್ದೇಶಿತ ಸದಸ್ಯರು ಸನ್ಮಾನಿಸಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಗುರಪ್ಪ ಅಕ್ಕಿ, ಚಂದ್ರು ಹಟ್ಟಿ, ನೂರ ಅಹ್ಮದ ಮತ್ತೆಸಾಬನವರ, ಹನುಮಂತ ಹಳ್ಳಿ, ಅಶೋಕ ನೆಲ್ಲೂರ, ಕೆಡಿಪಿ ಸದಸ್ಯರಾದ ಮಂಜುನಾಥ ಮಾಲಿ, ಪ್ರಮುಖರಾದ ಸುರೇಶ ಮೇಟಿ, ಹೆಗ್ಗಪ್ಪ ಗಡ್ಡೆಣ್ಣವರ, ಗುಡ್ಡಪ್ಪ ಹರಿಜನ, ನಿಂಗಪ್ಪ ಕಳ್ಳಿಮನಿ, ರಾಮಣ್ಣ ಕಿತ್ತೂರು, ಇಬ್ರಾಹಿಂ ಕರ್ಜಗಿ ಇದ್ದರು.