ಸಾರಾಂಶ
ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ವಿಜಯದಶಮಿ ಅಂಗವಾಗಿ ಕುದುರೆವಾಹನೋತ್ಸವ ನೆರವೇರಿತು.ತಡರಾತ್ರಿ ಕಲ್ಯಾಣನಾಯಕಿ ಅಮ್ಮನವರಿಗೆ ದೊಡ್ಡಶೇಷ ವಾಹನೋತ್ಸವ ನೆರವೇರಿತು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಚೆಲುವನಾರಾಯಣಸ್ವಾಮಿ ಅವರ ಬನ್ನಿ ಪೂಜಾ ಕಾರ್ಯಕ್ರಮ ಶನಿವಾರ ತಡರಾತ್ರಿ ನೆರವೇರಿತು.ಬನ್ನಿಮಂಟಪದ ಬಳಿ ಲೋಕ ಕಲ್ಯಾಣಾರ್ಥವಾಗಿ ದಶದಿಕ್ಕುಗಳಿಗೆ ಬಾಣಪ್ರಯೋಗ ಮಾಡಿ ದಲಿತ ಭಕ್ತರಿಗೆ ಮರ್ಯಾದೆ ಮಾಡಿದ ನಂತರ ಸ್ವಾಮಿ ವಿಜಯೋತ್ಸವ ಮೆರವಣಿಗೆ ಮೇಲುಕೋಟೆಯತ್ತ ಸಾಗಿತು. ಅಂಗಡಿಬೀದಿ ವೃತ್ತದಲ್ಲಿ ಕಲ್ಯಾಣನಾಯಕಿ ಅಮ್ಮನವರ ಶೇಷವಾಹನೋತ್ಸವ ಎದುರುಗೊಂಡ ನಂತರ ನಾಲ್ಕೂ ಬೀದಿಗಳಲ್ಲಿ ರಾತ್ರಿ 12ಕ್ಕೆ ಕತ್ತಲೆಯಲ್ಲೇ ನಡೆದ ವಿಯದಶಮಿ ವಿಜಯೋತ್ಸವ ನೆರವೇರಿತು. ಅತ್ಯಂತ ಅದ್ವಾನವಾಗಿ ನಿರ್ಲಕ್ಷ್ಯದಿಂದ ನಡೆದ ಕುದುರೆ ವಾಹನೋತ್ಸವದಲ್ಲಿ ಬೆರಳೆಣಿಕೆಯಲ್ಲಿ ಭಕ್ತರು ಭಾಗವಹಿಸಿದ್ದರು. ಒಂದೆಡೆ ಚೆಲುವನಾರಾಯಣನಿಗೆ ಆಕರ್ಷಕ ಪುಷ್ಪಹಾರವಿಲ್ಲದೆ ಜನರೇಟರ್ ದೀಪದ ವ್ಯವಸ್ಥೆಯಿಲ್ಲದೆ ಉತ್ಸವ ನಡೆದರೆ ಬನ್ನಿಪೂಜೆ ಮಾಡುವ ವೇಳೆ ಯಾವುದೇ ಬೆಳಕಿನ ವ್ಯವಸ್ಥೆ ಮಾಡದ ಕಾರಣ ಪರದಾಡಿದ ದೇಗುಲದ ಸಿಬ್ಬಂದಿ ಭಕ್ತರು ತಂದಿದ್ದ ಕಾರಿನ ಹೆಡ್ ಲೈಟ್ ಹಾಕಿಸಿಕೊಂಡು ಹೀನಾಯ ಸ್ಥಿತಿಯಲ್ಲಿ ಶಮಿ ಪೂಜೆ ಮಾಡಿದರು. ದೇವಾಲಯದ ಬಾಗಿಲಿಗೆ ವಿಜಯದಶಮಿಯಂದು ಕನಿಷ್ಠ ಮಾವಿನತೋರಣ ಕಟ್ಟುವ ಕಾರ್ಯವನ್ನೂ ಸಹ ಮಾಡಿರಲಿಲ್ಲ. ಆದರೆ, ದಲಿತ ಭಕ್ತರು ಬನ್ನಿಮಂಟಪಕ್ಕೆ ಮಾವಿನ ತೋರಣಕಟ್ಟಿ ಸಲ್ವಮಟ್ಟಿಗೆ ಸ್ವಚ್ಛಮಾಡಿದ್ದು ಕಂಡು ಬಂತು. ಸ್ವಾಮಿ ವಿಜಯೋತ್ಸವ ಸಂದಿಸಿದ ಅಂಗಡಿ ಬೀದಿ ವೃತ್ತ, ರಾಜಬೀದಿಗೂ ಹೆಚ್ಚಿನ ಬೆಳಕಿನ ವ್ಯವಸ್ಥೆ ಇರದೆ ಬೀದಿ ದೀಪಗಳಲ್ಲೇ ಉತ್ಸವ ದರ್ಶನ ಮಾಡುವಂತಾಗಿತ್ತು. ಇಡೀ ಉತ್ಸವ ಕತ್ತಲೆಯಲ್ಲೇ ನಡೆದ್ದು ಮಾತ್ರ ವಿಷರ್ಯಾಸ. ಚೆಲವನಾರಾಯಣಸ್ವಾಮಿ ದೇವಾಲಯದಲ್ಲಿ ಮುಂಬರುವ ರಾಜಮುಡಿ ಬ್ರಹ್ಮೋತ್ಸವಕ್ಕಾದರೂ ದೇವಾಲಯದ ಆಡಳಿತ ಸೂಕ್ತ ವ್ಯವಸ್ಥೆ ಮಾಡಲಿ ಎಂದು ನಾಗರೀಕರು ಒತ್ತಾಯಿಸಿದ್ದಾರೆ.