ಸಾರಾಂಶ
ಶ್ರೀಕೃಷ್ಣವಾಣಿಯಾದ ಗೀತಾರ್ಥ ಜ್ಞಾನದಿಂದ ಮಾನಸಿಕ ಸದೃಢತೆ ಗಳಿಸಿಕೊಳ್ಳಬೇಕು
ಕುಮಟಾ: ಭಗವದ್ಗೀತೆಯ ಓದುವಿಕೆ ಹಾಗೂ ಪ್ರವಚನ ಕೇಳುವಿಕೆ ಮೂಲಕ ಶ್ರೀಕೃಷ್ಣವಾಣಿಯಾದ ಗೀತಾರ್ಥ ಜ್ಞಾನದಿಂದ ಮಾನಸಿಕ ಸದೃಢತೆ ಗಳಿಸಿಕೊಳ್ಳಬೇಕು ಎಂದು ಕೆನರಾ ಬ್ಯಾಂಕ ಆರ್ಸೆಟಿ ನಿರ್ದೇಶಕ ರಾಜು ಕೆ. ಹೇಳಿದರು.
ತಾಲೂಕಿನ ತಂಡ್ರಕುಳಿಯಲ್ಲಿ ದೀವಗಿಯ ಚೇತನಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ಭಗವದ್ಗೀತಾ ಅಧ್ಯಯನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಶ್ರೀಮದ್ಭಗವದ್ಗೀತಾ ಪ್ರವಚನ ಮಾಲಿಕೆಗೆ ಚಾಲನೆ ನೀಡಿ ಮಾತನಾಡಿದರು.ಮುಖ್ಯ ಅತಿಥಿ ಕಂಪ್ಯೂಟರ್ ತರಬೇತುದಾರ ಮೈಸೂರಿನ ರಮೇಶ ಮಾತನಾಡಿ, ಇಂದು ಎಲ್ಲ ಇದ್ದರೂ ಕ್ಷುಲ್ಲಕ ವಿಚಾರಗಳಿಗೆ ತಾಳ್ಮೆ, ಸಹನೆ ಕಳೆದುಕೊಳ್ಳುವ ವ್ಯಕ್ತಿಗಳಿಗೆ ಭಗವದ್ಗೀತೆಯ ಪ್ರವಚನ ಆಲಿಕೆಯಿಂದ ಬದುಕಿನಲ್ಲಿ ವಿವೇಕ ಹಾಗೂ ಬದುಕಿನ ಸ್ಪಷ್ಟತೆ ಗಳಿಸಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಪ್ರವಚನಮಾಲಿಕೆ ನಡೆಸಿಕೊಡಲಿದ್ದ ದೀವಗಿಯ ಶ್ರೀಮದ್ಭಗವದ್ಗೀತಾ ಪಾಠಶಾಲೆಯ ಸಂಚಾಲಕಿ ಎ.ಆರ್.ಭಾರತಿ ಭಗವದ್ಗೀತೆಯ ಮಹತ್ವ ವಿವರಿಸಿ ಗೀತಾಸಂದೇಶ ಪ್ರಸ್ತುತಪಡಿಸಿದರು. ಗ್ರಾಮದ ಯಜಮಾನ ಗಣಪಯ್ಯ ಅಂಬಿಗ ಅಧ್ಯಕ್ಷತೆ ವಹಿಸಿದ್ದರು.ತಂಡ್ರಕುಳಿ ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಎ. ಅಂಬಿಗ ಸ್ವಾಗತಿಸಿದರು. ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷ ಆರ್.ಕೆ.ಅಂಬಿಗ ಕಾರ್ಯಕ್ರಮ ನಿರ್ವಹಿಸಿದರು. ಅನುಷಾ ಎಸ್. ಅಂಬಿಗ ವಂದಿಸಿದರು.