ಬರ ಆವರಿಸಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಪಟ್ಟಣದ ಹಿರೆಕೆರೆಯಲ್ಲಿನ ನೀರನ್ನು ಹೊರಗಡೆ ಬಿಡುತ್ತಿರುವುದು ಸಮಂಜಸವಲ್ಲ, ರೈತರು ಸಂಕಷ್ಟದಲಿದ್ದಾರೆ
ಹರಪನಹಳ್ಳಿ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ, ಶಾಸಕರು ಕೇವಲ ಮೀಟಿಂಗ್ ಮಾಡಿ ಅಧಿಕಾರಿಗಳಿಗೆ ಹೇಳಿದರೆ ಸಾಲದು ಬೋರ್ವೆಲ್ ಕೊರೆಸುವುದು ಸೇರಿದಂತೆ ಏನೇನು ಕ್ರಮ ಕೈಗೊಳ್ಳಬೇಕೊ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಜಿ. ಕರುಣಾಕರರೆಡ್ಡಿ ಹೇಳಿದರು.ಅವರು ನಗರದ ಆಚಾರ ಬಡಾವಣೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018 ರಲ್ಲಿ ನಾನು ಹಾಕಿಸಿದ ಕೊಳವೆ ಬಾವಿಗಳು ಇಂದು ನಡೆಯುತ್ತಿವೆ, ಕುಡಿಯುವ ನೀರಿನ ಸಮಸ್ಯೆ ಶಾಸಕರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೆರೆ ನೀರನ್ನು ಬಿಡಬಾರದು: ಬರ ಆವರಿಸಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಪಟ್ಟಣದ ಹಿರೆಕೆರೆಯಲ್ಲಿನ ನೀರನ್ನು ಹೊರಗಡೆ ಬಿಡುತ್ತಿರುವುದು ಸಮಂಜಸವಲ್ಲ, ರೈತರು ಸಂಕಷ್ಟದಲಿದ್ದಾರೆ, ಕೆರೆ ಸ್ವಚ್ಛತೆ ತಪ್ಪಲ್ಲ ಆದರೆ ಸಂದರ್ಭ ನೋಡಬೇಕು ಎಂದು ತಿಳಿಸಿದರು.ಶಾಸಕರು ನಮ್ಮ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನೇ ಉದ್ಘಾಟನೆ ಮಾಡುತ್ತಿದ್ದಾರೆ, ಅಭಿವೃದ್ದಿ ಹೇಳಿಕೊಳ್ಳುವಷ್ಟು ಆಗಿಲ್ಲ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಘಟಕ ಪ್ರತ್ಯೇಕ ಮಾಡಬೇಕು, 150 ಹಾಸಿಗೆಗೆ ಮೇಲ್ದರ್ಜಗೇರಿಸಬೇಕು, ಐ.ಬಿ. ವೃತ್ತದಲ್ಲಿ ನಡೆದಿರುವ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಶಾಸಕರನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಬಹಳಷ್ಟು ತಾಲೂಕಿನಲ್ಲಿ ಬರ ಆವರಿಸಿರುವುದರಿಂದ ರೈತರ ಪಂಪಸೆಟ್ ಗಳಿಗೆ ಹಗಲಿನಲ್ಲಿ ಸಮರ್ಪಕ ವಿದ್ಯುತ್ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು, ಎಕರೆಗೆ ₹50 ಸಾವಿರ ಬರ ಪರಿಹಾರ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಮೋದಿಯಿಂದ ದೇಶದ ಚಿತ್ರಣ ಬದಲು: ಸ್ವಚ್ಛ ಭಾರತ, ಆಯುಷ್ಯಮಾನ್ ಭಾರತ, ಫಸಲ್ ಭೀಮಾ ಯೋಜನೆ, ಉಜ್ವಲ್ ಯೋಜನೆ, ಸಣ್ಣ ಕೈಗಾರಿಕೆ ಹಾಗೂ ಉದ್ದಿಮೆದಾರರಿಗೆ ಸಹಾಯಧನ ಹೀಗೆ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ 25 ವರ್ಷ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ದೇಶದ ಚಿತ್ರಣವೇ ಬದಲಾಗಿದೆ ಎಂದ ಮೋದಿ ಜನ್ಮದಿನಕ್ಕಾಗಿ ಇಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು, ಬ್ರೆಡ್ ವಿತರಿಸಿದ್ದೇವೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ, ಬಾಗಳಿ ಕೊಟ್ರೇಶಪ್ಪ, ಮಂಜುನಾಥ ಆರ್ ನಾಯ್ಕ, ಮಹೇಶ ಪೂಜಾರ, ಹಲುವಾಗಲು ದ್ಯಾಮಪ್ಪ, ವೀರಭದ್ರಪ್ಪ, ಪಂಪನಾಯ್ಕ, ಕಿರಣ್ ಶಾನ್ಬಾಗ್, ಜಾವೇದ್, ವಾಗೀಶ, ಹನುಮಂತಪ್ಪ, ಕೆ.ಮಲ್ಲೇಶ, ತಿಮ್ಮಣ್ಣ ಇತರರು ಉಪಸ್ಥಿತರಿದ್ದರು.