ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸುವುದು ಸಮಾಜದ ಶೈಕ್ಷಣಿಕ ಪ್ರಗತಿಗೆ ಮುನ್ನುಡಿ ಬರೆಯಲಿದೆ.
ಕುಂದಗೋಳ:
ವಿಶ್ವಗುರು ಬಸವಣ್ಣನವರ ‘ಕಾಯಕವೇ ಕೈಲಾಸ’ ಸಂದೇಶದಂತೆ ಬಣಜಿಗ ಸಮಾಜ ಬಾಂಧವರು ಎಲ್ಲರ ವಿಶ್ವಾಸ ಪಡೆದು ಪ್ರತಿವರ್ಷ ವಿಭಿನ್ನ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.ತಾಲೂಕಿನ ಸಂಶಿ ಗ್ರಾಮದ ಜ. ಫಕೀರೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸುವುದು ಸಮಾಜದ ಶೈಕ್ಷಣಿಕ ಪ್ರಗತಿಗೆ ಮುನ್ನುಡಿ ಬರೆಯಲಿದೆ ಎಂದರು.ಶಿರಹಟ್ಟಿ ಸಂಸ್ಥಾನ ಮಠದ ಜ. ಫಕೀರ ಸಿದ್ಧರಾಮ ಶ್ರೀ ಹಾಗೂ ಸಂಶಿ ವಿರಕ್ತಮಠದ ಚನ್ನವೀರ ದೇವರು ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ಪ್ರವೀಣ್ ಕೋರಿ ಸಿದ್ಧಪಡಿಸಿದ ಸಮಾಜದ ಮ್ಯಾಟ್ರಿಮೊನಿ ಆ್ಯಪ್ ಬಿಡುಗಡೆಗೊಳಿಸಲಾಯಿತು. ಅಶೋಕ ಹಂಚಲಿ ಉಪನ್ಯಾಸ ನೀಡಿದರು. ಶೋಭಾ ಜಾಬಿನ ಸಂಗೀತ ಸೇವೆ ನೀಡಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ತಾಲೂಕು ಅಧ್ಯಕ್ಷ ಫಕ್ಕೀರೇಶ ಕೋರಿ, ಶಂಕ್ರಣ್ಣ ಮುನವಳ್ಳಿ, ಮಲ್ಲಿಕಾರ್ಜುನ ರೂಡಗಿ, ವಿಜಯಕುಮಾರ ಉಳವಪ್ಪನವರ, ಬಸವರಾಜ ಖಜ್ಜಿ ಸೇರಿದಂತೆ ಸಮಾಜದ ಪದಾಧಿಕಾರಿಗಳಿದ್ದರು. ಎ.ಬಿ. ಉಪ್ಪಿನ ಸ್ವಾಗತಿಸಿದರು.