ಸಾರಾಂಶ
ಬೆಂಗಳೂರು : ನಮ್ಮ ಮೆಟ್ರೋದ ಗುಲಾಬಿ ಮಾರ್ಗ ಸುರಂಗ ಕಾಮಗಾರಿ ವೇಳೆ ಮತ್ತೆ ರಸ್ತೆ ಕುಸಿದ ಘಟನೆ ಗುರುವಾರ ನಡೆದಿದೆ. ನಾಗವಾರ ಮುಖ್ಯ ರಸ್ತೆಯ ಉಮರ್ನಗರ ಬಳಿ ರಸ್ತೆ ಮಧ್ಯ ಭಾಗದಲ್ಲಿ ಹೊಂಡ ಉಂಟಾಗಿ ಸ್ಥಳೀಯರಲ್ಲಿ ಆತಂಕಕ್ಕೀಡಾದರು. ಬೆಂಗಳೂರು ಮೆಟ್ರೋ ರೈಲು ನಿಗಮವು ಕುಸಿದ ರಸ್ತೆ ಭಾಗಕ್ಕೆ ಕಾಂಕ್ರಿಟ್ ಸುರಿದು ದುರಸ್ತಿಪಡಿಸಿದೆ.
ಕೆ.ಜಿ.ಹಳ್ಳಿ - ನಾಗವಾರ ನಡುವೆ ತುಂಗಾ ಟನಲ್ ಬೋರಿಂಗ್ ಮಷಿನ್ ಅಂತಿಮ ಹಂತದ ಸುರಂಗ ಕಾಮಗಾರಿ ನಡೆಸುತ್ತಿದೆ. ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ರಸ್ತೆ ಮಧ್ಯದಲ್ಲಿ ದೊಡ್ಡ ಕಂದಕ ಉಂಟಾಯಿತು. ತಕ್ಷಣ ರಸ್ತೆಯನ್ನು ಬಂದ್ ಮಾಡಿ ಜನ ಸಂಚಾರ ನಿರ್ಬಂಧಿಸಲಾಯಿತು. ರಸ್ತೆ ಕುಸಿತದಿಂದ ಸುತ್ತಮುತ್ತಲ ಮನೆ, ಮಳಿಗೆ ಮಾಲೀಕರಲ್ಲಿ ಭೀತಿಗೊಳಗಾಗಿದ್ದರು. ಮೆಟ್ರೋ ಕಾಮಗಾರಿಯಿಂದಾಗಿ ಇಂತಹ ಹೊಂಡ ಸೃಷ್ಟಿಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭೂ ಕುಸಿತದಿಂದ ಯಾವುದೇ ಹಾನಿ ಸಂಭವಿಸಿಲ್ಲ. ತಕ್ಷಣ ಪೊಲೀಸರು ರಸ್ತೆಯನ್ನು ಬಂದ್ ಮಾಡಿ ಸಂಭಾವ್ಯ ಅಪಾಯ ತಪ್ಪಿಸಿದ್ದಾರೆ. ನಮ್ಮ ಮೆಟ್ರೋ ಕಾಮಗಾರಿಯ ವೇಳೆ ಉಂಟಾಗುತ್ತಿರುವ ಕಂಪನದಿಂದ ಅಕ್ಕಪಕ್ಕದ ಕಟ್ಟಡಗಳಲ್ಲೂ ಬಿರುಕು ಮೂಡಿದೆ ಎಂದು ಸ್ಥಳೀಯರು ಆರೋಪಿಸಿದರು. ಕಾಮಗಾರಿ ನಡೆಯುವ ವೇಳೆ ರಸ್ತೆಯ ಕೆಳಭಾಗದಲ್ಲಿ ನೀರು ತುಂಬಿಕೊಂಡು ರಸ್ತೆಯಲ್ಲಿ ಕುಸಿತ ಉಂಟಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಮೆಟ್ರೋ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಉಂಟಾಗಿದ್ದ ಕಂದಕಕ್ಕೆ ಕಾಂಕ್ರಿಟ್ ಸುರಿದು ರಸ್ತೆಯನ್ನು ದುರಸ್ತಿಪಡಿಸಿದರು.
ಕಳೆದ ಒಂದೂವರೆ ವರ್ಷದಲ್ಲಿ ಬ್ರಿಗೇಡ್ ರಸ್ತೆ, ಬನ್ನೇರುಘಟ್ಟ ಮುಖ್ಯರಸ್ತೆಯ ಚಿನ್ನಯ್ಯನಪಾಳ್ಯ, ಪಾಟರಿ ಟೌನ್ ಸೇರಿ ಇನ್ನೂ ಕೆಲವೆಡೆ ಮೆಟ್ರೋ ಸುರಂಗದ ಕಾಮಗಾರಿ ವೇಳೆ ರಸ್ತೆ ಕುಸಿದ ಘಟನೆ ನಡೆದಿತ್ತು.