ಮುಂಡರಗಿ: ಮೇವುಂಡಿ ಮಲ್ಲಾರಿಯವರು ಅನುವಾದಕ, ಪ್ರೂಫ್‌ ರೀಡರ್, ಸಂಶೋಧಕ, ಶಾಸನಗಳ ಕೃತಿ ಜ್ಞಾನ ಹೊಂದಿದವರಾಗಿ, ಮಾನವೀಯ ಮೌಲ್ಯ ಬಿಂಬಿಸುವ ಮಕ್ಕಳ ಕತೆಗಳ ಸಾಧಕರಾಗಿದ್ದರು ಎಂದು ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಹೇಳಿದರು.

ತಾಲೂಕು ಕಸಾಪ ಆಶ್ರಯದಲ್ಲಿ ಶನಿವಾರ ಸಂಜೆ ಜರುಗಿದ ಮಕ್ಕಳ ಸಾಹಿತಿ ಮೇವುಂಡಿ ಮಲ್ಲಾರಿ ಅವರ ಕುರಿತ ಬದುಕು ಬರಹ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಹಲವು ದಶಕಗಳ ಹಿಂದೆ ತಮ್ಮ ಕಡು ಬಡತನದಲ್ಲಿ ಮಧ್ಯದಲ್ಲಿಯೇ ಸಾಹಿತ್ಯ ಚಟುವಟಿಕೆಗಳನ್ನು ಮುಂದುವರಿಸಿದ ಕೀರ್ತಿ ಮೇವುಂಡಿ ಮಲ್ಲಾರಿಗೆ ಸಲ್ಲುತ್ತದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಶರಣ ಚಿಂತಕ ಹೇಮಂತಗೌಡ ಪಾಟೀಲ ಮಾತನಾಡಿ, ಸಾಹಿತ್ಯ ಚಟುವಟಿಕೆ ನಡೆಯಲು ಮತ್ತು ಸಾಹಿತ್ಯ ಭವನ ನಿರ್ಮಾಣಕ್ಕೆ ಡಾ. ಅನ್ನದಾನೀಶ್ವರ ಸ್ವಾಮಿಗಳು ಸ್ಥಳದಾನ ಮಾಡಿದ್ದಾರೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಪರಿಷತ್ತು ತಾಲೂಕಿನ ಸುಮಾರು 45ಕ್ಕೂ ಹೆಚ್ಚು ಸಾಹಿತಿಗಳನ್ನು ಗುರುತಿಸಿದ್ದು, ಬರುವ ದಿನಗಳಲ್ಲಿ ಅವರ ಕೃತಿ ಮತ್ತು ಬದುಕು ಬರಹ ಕುರಿತು ನಿರಂತರ ಗೋಷ್ಠಿ, ಉಪನ್ಯಾಸ ನಡೆಸಲಾಗುವುದು ಎಂದರು.ಕಸಾಪ ಕಾರ್ಯಕಾರಿಣಿ ಸದಸ್ಯ ಅಕ್ಕಮ್ಮ ಕೊಟ್ಟೂರಶೆಟ್ಟರ, ಎನ್.ಎನ್. ಕಲಕೇರಿ, ಶಂಕರ ಕುಕನೂರ, ಕೃಷ್ಣ ಸಾಹುಕಾರ, ಸಿ.ಕೆ. ಗಣಪ್ಪನವರ, ಮಹೇಶ ಮೇಟಿ, ಗುಡ್ಲಾನೂರ, ಎಂ.ಎಸ್. ಶೀರನಹಳ್ಳಿ, ಮಧುಮತಿ ಇಳಕಲ್, ಕಾವೇರಿ ಬೋಲಾ ಉಪಸ್ಥಿತರಿದ್ದರು. ಎಂ.ಐ. ಮುಲ್ಲಾ ಪ್ರಾರ್ಥಿಸಿದರು. ಕಸಾಪ ಗೌ ಕಾರ್ಯದರ್ಶಿ ವೀಣಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಧೋಳ ಸ್ವಾಗತಿಸಿದರು. ಕೊಟ್ರೇಶ ಜವಳಿ ನಿರೂಪಿಸಿದರು.