ಮಧ್ಯರಾತ್ರಿ ಕಾರ್ಯಾಚರಣೆ: ವಿದ್ಯಾಸಂಸ್ಥೆ ಮುಖ್ಯಸ್ಥರ ಫೋಟೋ ತೆಗೆದ ಪೊಲೀಸರು

| Published : Jun 04 2025, 01:23 AM IST

ಮಧ್ಯರಾತ್ರಿ ಕಾರ್ಯಾಚರಣೆ: ವಿದ್ಯಾಸಂಸ್ಥೆ ಮುಖ್ಯಸ್ಥರ ಫೋಟೋ ತೆಗೆದ ಪೊಲೀಸರು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಪೊಲೀಸ್ ಇಲಾಖೆ ಜಾರಿಗೊಳಿಸಿದ ಮಧ್ಯ ರಾತ್ರಿ ಅಪರಾಧ ಹಿನ್ನೆಲೆಯುಳ್ಳವರ ಮನೆ ಭೇಟಿ ಹಾಗೂ ಪೋಟೋ ಕ್ಲಿಕ್ಕಿಸುವ ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಗಳ ನೇತೃತ್ವ ವಹಿಸಿಕೊಂಡವರನ್ನು ಸೇರಿಸಿರುವುದು ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಪೊಲೀಸ್ ಇಲಾಖೆ ಜಾರಿಗೊಳಿಸಿದ ಮಧ್ಯ ರಾತ್ರಿ ಅಪರಾಧ ಹಿನ್ನೆಲೆಯುಳ್ಳವರ ಮನೆ ಭೇಟಿ ಹಾಗೂ ಪೋಟೋ ಕ್ಲಿಕ್ಕಿಸುವ ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಗಳ ನೇತೃತ್ವ ವಹಿಸಿಕೊಂಡವರನ್ನು ಸೇರಿಸಿರುವುದು ಬೆಳಕಿಗೆ ಬಂದಿದೆ. ಉಪ್ಪಿನಂಗಡಿಯ ಶ್ರೀ ರಾಮ ಶಾಲಾ ಸಂಚಾಲಕ, ಆರ್‌ಎಸ್‌ಎಸ್‌ ಪ್ರಮುಖ, ವೃತ್ತಿಯಲ್ಲಿ ಔಷಧಾಲಯ ಮಾಲೀಕ ಯು.ಜಿ.ರಾಧಾ ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ವ್ಯಕ್ತಿ. ಅವರ ವಿರುದ್ಧ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ. ಸೋಮವಾರ ಮಧ್ಯರಾತ್ರಿ ರಾಧಾ ಅವರ ಔಷಧಾಲಯಕ್ಕೆ ಭೇಟಿ ನೀಡಿ ಪೊಲೀಸರು ಫೋಟೋ ತೆಗೆದಿದ್ದಾರೆ. ರಾತ್ರಿ ೧೧.೫೮ ಕ್ಕೆ ಬಂದು ೧೨.೦೭ ನಿಮಿಷಕ್ಕೆ ನಿರ್ಗಮಿಸಿದ್ದಾರೆ. ೫೪ ವಯೋಮಾನದ ಯು ಜಿ ರಾಧಾ ಅವರನ್ನು ಸೋಮವಾರ ಮಧ್ಯ ರಾತ್ರಿ ನಿದ್ರೆಯಿಂದ ಎಬ್ಬಿಸಿ ಅವರ ಜೊತೆ ಪೊಟೋ ತೆಗೆದಿರುವುದರಿಂದ ಅವರ ಮನೆ ಮಂದಿ ಅನಗತ್ಯ ಕಳವಳಕ್ಕೆ ತುತ್ತಾಗುವಂತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಯು ಜಿ ರಾಧಾ, ಇದು ಶಾಂತಿ ಕಾಪಾಡುವ ವ್ಯವಸ್ಥೆ ಅಲ್ಲ. ನನಗೆ ಯಾವುದೇ ಲಿಖಿತ ಆದೇಶ ಪತ್ರವಿಲ್ಲ. ಯಾಕಾಗಿ ಪೋಟೋ ತೆಗೆಯಲಾಗುತ್ತದೆ ಎನ್ನುವ ಲಿಖಿತ ಸೂಚನಾ ಪತ್ರವಿಲ್ಲ. ಕೇಳಿದಕ್ಕೆಲ್ಲಾ ಮೇಲಾಧಿಕಾರಿಗಳ ಆದೇಶ ಎನ್ನುವ ಪೊಲೀಸರು, ಕಾನೂನು ಬದ್ದ ಕ್ರಮ ಕೈಗೊಳ್ಳದೆ ಏಕಾಏಕಿ ಅಂಗಡಿ, ಮನೆಗೆ ಭೇಟಿ ನೀಡಿ ಪೋಟೋ ತೆಗೆಯಲು ಅವಕಾಶವಿದೆಯಾ? ಆರ್‌ಎಸ್‌ಎಸ್‌ ಕಾರ್ಯಕರ್ತ ಎಂಬ ಕಾರಣಕ್ಕೆ ರಾತ್ರಿ ಹೆಂಗಸರು ಇರೋ ಮನೆಗೆ ಬರುವುದು ನ್ಯಾಯವಾ? ಎಂದು ಪ್ರಶ್ನಿಸಿದ್ದಾರೆ.

ಅಪರಾಧ ಹಿನ್ನೆಲೆಗಿಂತ ಸಂಘ ಪರಿವಾರದ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವುದನ್ನೇ ಅಪರಾಧವೆಂದು ಭ್ರಮಿಸಿ ಕಾರ್ಯಾಚರಣೆ ನಡೆಸಿದಂತಿದ್ದು, ಇದು ಯಾರನ್ನೋ ತೃಪ್ತಿ ಪಡಿಸುವ ಪ್ರಯೋಜನ ಶೂನ್ಯ ಕಾರ್ಯಾಚರಣೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.