ಹಗರಿಬೊಮ್ಮನಹಳ್ಳಿ: ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸಿ ಆ ಮೂಲಕ ರೈತರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸದಾ ರೈತ ಪರ ನಿಲುವುಗಳನ್ನು ಹೊಂದಿದ್ದರು ಎಂದು ಬಿಜೆಪಿಯ ನಗರ ಘಟಕದ ಅಧ್ಯಕ್ಷ ಮಂಜುನಾಥ್ ಹಿರೇಮಠ್ ಸಂತಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮ ದಿನಾಚರಣೆ ನಿಮಿತ್ತ ಪಕ್ಷದ ನಗರ ಘಟಕದ ವತಿಯಿಂದ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು ಬ್ರೆಡ್ ಹಣ್ಣು ವಿತರಿಸುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಸೈಕಲ್ನಲ್ಲಿ ಸಂಚರಿಸಿ, ತಳಮಟ್ಟದಿಂದ ಬಿಜೆಪಿ ಪಕ್ಷ ಸಂಘಟಿಸಿ ರಾಜ್ಯ ಮಟ್ಟದಲ್ಲಿ ಅಧಿಕಾರಕ್ಕೆ ತಂದ ಯಡಿಯೂರಪ್ಪನವರು ಹುಟ್ಟು ರೈತ ಪರ ಹೋರಾಟಗಾರರು ಎಂದು ಬಣ್ಣಿಸಿದರು.
ಮಂಡಲ ಘಟಕದ ಅಧ್ಯಕ್ಷ ಬೆಣಕಲ್ ಪ್ರಕಾಶ್ ಮಾತನಾಡಿ, ಬಿಜೆಪಿ ಗೆಲುವಿನಲ್ಲಿ ಯಡಿಯೂರಪ್ಪನವರ ಅವರ ಅಪಾರ ಶ್ರಮ ಇದೆ. ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಚುನಾವಣೆ ನಡೆದು ೧೫೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.ಇದೇ ವೇಳೆ ಪಕ್ಷದ ನಗರ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಒಳರೋಗಿಗಳ ನಾಲ್ಕೂ ವಾರ್ಡುಗಳ ರೋಗಿಗಳಿಗೆ ಹಾಲು, ಬಿಸ್ಕಿಟ್, ಹಣ್ಣ ಮತ್ತು ಬ್ರೆಡ್ ವಿತರಿಸಿದರು.
ನಗರ ಘಟಕದ ಉಪಾಧ್ಯಕ್ಷ ಮಲ್ಲಯ್ಯ, ಕಾರ್ಯದರ್ಶಿ ಮತ್ತಿಹಳ್ಳಿ ಮಂಜುನಾಥ್, ಮಂಡಲ ಜಿಲ್ಲಾ ಕಾರ್ಯದರ್ಶಿಗಳಾದ ಕನಕಪ್ಪ, ಕೋಗಳಿ ಹನಮಂತಪ್ಪ, ಪುರಸಭೆ ಸದಸ್ಯ ಜೋಗಿ ಹನಮಂತಪ್ಪ, ಪದಾಧಿಕಾರಿಗಳಾದ ಉಪ್ಪಾರಗಟ್ಟಿ ಬುಳ್ಳಪ್ಪ, ರಾಜಪ್ಪ, ರೈತ ಮೋರ್ಛಾದ ಜಿ.ಕಾಳೇಶ್, ಶಾಮಿಯಾನ ರಾಘು, ಚಿನ್ನಪ್ಪ ಮಲ್ಕಿ ಒಡೆಯರ್, ಶಿವಯೋಗಿ, ಬಿ.ಸುರೇಶ್, ಎಚ್.ಮರಿಯಪ್ಪ, ಯುವ ಮೋರ್ಚಾದ ಭರತ್ ಶೆಟ್ಟಿ, ಗೋಣೆಪ್ಪ ಮತ್ತಿತರರಿದ್ದರು.