ಹಾಲಿನ ಗುಣಮಟ್ಟದ ಆಧಾರದ ಮೇಲೆ ಸದ್ಯ ಪ್ರತಿ ಲೀಟರ್ ಹಾಲಿಗೆ 36 ರೂ ಲಭಿಸುತ್ತಿದೆ. ಸರ್ಕಾರ 5 ರು. ನಿಂದ 7 ರೂಗೆ ಪ್ರೋತ್ಸಾಹ ಧನ ನೀಡುವ ಭರವಸೆ ನೀಡಿದೆ.
ಕನ್ನಡಪ್ರಭ ವಾರ್ತೆ, ತುರುವೇಕೆರೆ
ಹಾಲಿನ ಗುಣಮಟ್ಟದ ಆಧಾರದ ಮೇಲೆ ಸದ್ಯ ಪ್ರತಿ ಲೀಟರ್ ಹಾಲಿಗೆ 36 ರೂ ಲಭಿಸುತ್ತಿದೆ. ಸರ್ಕಾರ 5 ರು. ನಿಂದ 7 ರೂಗೆ ಪ್ರೋತ್ಸಾಹ ಧನ ನೀಡುವ ಭರವಸೆ ನೀಡಿದೆ. ಅದೂ ಸೇರಿದರೆ ಪ್ರತಿ ಲೀಟರ್ ಹಾಲಿಗೆ 43 ರು. ದೊರೆಯಲಿದೆ. ಸರ್ಕಾರ ನೀಡಿರುವ ಭರವಸೆ ಮುಂಬರುವ ಬಜೆಟ್ ನಲ್ಲಿ ಜಾರಿಯಾಗುವ ಸಾಧ್ಯತೆ ಇದೆ ಎಂದು ತುಮಕೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.ತಾಲೂಕಿನ ದೊಡ್ಡಮಲ್ಲಿಗೆರೆಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಹಾಲು ಮಹಾರಾಷ್ಟ್ರ, ಜಮ್ಮು ಕಾಶ್ಮೀರ, ಆಂದ್ರ ಸೇರಿದಂತೆ ಹಲವು ರಾಜ್ಯಗಳಿಗೂ ಸರಬರಾಜು ಮಾಡಲಾಗುತ್ತಿದೆ. ಇಲ್ಲಿಯ ಹಾಲು ಅತ್ಯುತ್ತಮ ಗುಣಮಟ್ಟದ ಹಾಲಾಗಿರುವುದರಿಂದ ಅಂತರಾಜ್ಯ ಮಟ್ಟದಲ್ಲೂ ಸಹ ನಂದಿನಿ ಹಾಲಿಗೆ ಬೇಡಿಕೆ ಇದೆ ಎಂದರು.
ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ತುಮಕೂರು ರಸ್ತೆಯಿಂದ ದೊಡ್ಡಮಲ್ಲಿಗೆರೆಗೆ ಬರುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ತಾವು ಸಂಸದರೂ, ಕೇಂದ್ರ ಸಚಿವರಾದ ವಿ.ಸೋಮಣ್ಣನವರಿಂದ ಈ ರಸ್ತೆಯನ್ನು ನಿರ್ಮಾಣ ಮಾಡಿಸಿಕೊಡುವ ಭರವಸೆ ನೀಡಿದ ಅವರು,ತಾವೂ ಸಹ ಡೈರಿ ರಾಜಕೀಯದಿಂದ ತಮ್ಮ ರಾಜಕೀಯ ಕ್ಷೇತ್ರಕ್ಕೆ ಬಂದವನು. ಅಲ್ಲಿ ರಾಜಕೀಯ ಬೆರೆತ ಕಾರಣ ಇಂದೂ ಸಹ ತಮ್ಮ ಗ್ರಾಮದಲ್ಲಿ ಸಹಕಾರ ಸಂಘ ಪ್ರಾರಂಭಿಸಲು ಆಗೇ ಇಲ್ಲ. ಆದ್ದರಿಂದ ಸಂಘ ಸಂಸ್ಥೆಗಳಲ್ಲಿ ರಾಜಕೀಯ ಪ್ರವೇಶ ಕೂಡದು ಎಂದು ಎಚ್ಚರಿಸಿದರು.ಈ ವೇಳೆ ಸಂಘದ ಅಧ್ಯಕ್ಷೆ ಪದ್ಮ ಚಂದ್ರಶೇಖರ್ , ಮಂಜುನಾಥ್, ದಿವಾಕರ್, ಕಿರಣ್ ಕುಮಾರ್, ಸುನಿಲ್, ಉಪಾಧ್ಯಕ್ಷೆ ಮಹದೇವಮ್ಮ, ನಿರ್ದೇಶಕರಾದ ಸವಿತಾ, ಶೋಭಾ, ವರಲಕ್ಷ್ಮಿ, ಧರ್ಮವತಿ, ರೂಪ, ಕಲ್ಪನ, ರೂಪಾ ಶ್ರೀನಿವಾಸ್, ಫರಜಾಭಾನು, ಗೀತಾ, ಶೇಖರ್ ಶೆಟ್ಟಿ, ಶ್ರೀಧರ್, ಧರಣೇಶ್, ಮುಭಾಸಿರ್, ಮುದ್ದಸೀರ್, ವನಜಾಕ್ಷಮ್ಮ, ರೇಖಾ ಶಿವಶಂಕರಪ್ಪ, ಮಂಜಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ಕಟ್ಟಡದ ಮುಂಭಾಗ ಶೀಟಿನ ಚಪ್ಪರ ನಿರ್ಮಿಸಲು ಗ್ರಾಮದ ನಿವಾಸಿ ಹಿರಿಯ ನ್ಯಾ.ಎಂ.ಜಿ.ಲೋಕೇಶ್ ರವರು 25 ಸಾವಿರ ರು. ಗಳ ದೇಣಿಗೆಯನ್ನು ನೀಡಿದರು. ಸಿಇಒ ಯಶೋಧಾ ಸ್ವಾಗತಿಸಿದರು. ಬಸವರಾಜು ವಂದಿಸಿದರು.