1.50 ಲಕ್ಷ ಮೌಲ್ಯದ ಹಾಲಿನ ಪೌಡರ್ ವಶ

| Published : May 22 2024, 12:49 AM IST

ಸಾರಾಂಶ

ಬೆಳಗಾವಿ ಮೂಲದ ಸಂಜಯ ಯಶವಂತ ಪಾಟೀಲ್ ಬಂಧಿತ ಆರೋಪಿ. ಈತನಿಂದ ಸಾಗಾಟಕ್ಕೆ ಬಳಸಿದ ವಾಹನ, ₹1.50 ಲಕ್ಷ ಮೌಲ್ಯದ 791.40 ಕೆಜಿ ಹಾಲಿನ‌ ಪೌಡರ್ ವಶಪಡಿಸಿಕೊಳ್ಳಲಾಗಿದೆ.

ಹಳಿಯಾಳ:

ಶಾಲಾ ಮಕ್ಕಳಿಗೆ ನೀಡುವ ಹಾಲಿನ ಪೌಡರ್ ಅನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವಾಗ ಆರೋಪಿ ಸಹಿತ ₹1.50 ಲಕ್ಷ ಮೌಲ್ಯದ ಹಾಲಿನ ಪೌಡರ್ ಅನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿ ಮೂಲದ ಸಂಜಯ ಯಶವಂತ ಪಾಟೀಲ್ ಬಂಧಿತ ಆರೋಪಿ. ಈತನಿಂದ ಸಾಗಾಟಕ್ಕೆ ಬಳಸಿದ ವಾಹನ, ₹1.50 ಲಕ್ಷ ಮೌಲ್ಯದ 791.40 ಕೆಜಿ ಹಾಲಿನ‌ ಪೌಡರ್ ವಶಪಡಿಸಿಕೊಳ್ಳಲಾಗಿದೆ.

ಯಲ್ಲಾಪುರ ಹಳಿಯಾಳ ಮಾರ್ಗವಾಗಿ ಈ ಹಾಲಿನ ಪೌಡರ್ ಅನ್ನು ಬೆಳಗಾವಿ- ಮಹಾರಾಷ್ಟ್ರದ ಕಡೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಹಳಿಯಾಳ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಕುಮಟಾ: ತಾಲೂಕಿನ ಹಂದಿಗೋಣ ಬಳಿ ರಾ.ಹೆ. ೬೬ರ ಚತುಷ್ಪಥದಲ್ಲಿ ತಿಂಗಳ ಹಿಂದೆ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡೇಕೋಡಿಯ ಅಭಿಷೇಕ ಶಂಭು ಪಟಗಾರ(೨೮) ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.ಏ. ೭ರಂದು ರಾತ್ರಿ ಮೋಟಾರ್ ಸೈಕಲ್‌ನಲ್ಲಿ ಅಭಿಷೇಕ ಪಟಗಾರ ಸಾಗುತ್ತಿರುವಾಗ ಮಾರ್ಗಮಧ್ಯೆ ದನ ಅಡ್ಡ ಬಂದಿದ್ದರಿಂದ ನಿಯಂತ್ರಣ ತಪ್ಪಿ, ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಬಳಿಕ ಕುಮಟಾ ಸರ್ಕಾರಿ ಆಸ್ಪತ್ರೆ, ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಾಯಗೊಂಡಿದ್ದ ಜಿಂಕೆ ರಕ್ಷಣೆ

ಯಲ್ಲಾಪುರ: ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದು ಊರಿನಲ್ಲಿ ಸಾಕಿದ ನಾಯಿಗಳ ದಾಳಿಗೆ ತುತ್ತಾಗಿ ಗ್ರಾಮಸ್ಥರಿಂದ ಬಚಾವಾದ ಘಟನೆ ಮೇ ೨೧ರಂದು ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಭರತನಹಳ್ಳಿಯಲ್ಲಿ ನಡೆದಿದೆ.ಮೈಮೇಲೆ ಚುಕ್ಕೆ ಹಾಗೂ ಕೋಡು ಹೊಂದಿರುವ ಈ ದಷ್ಟಪುಷ್ಟ ಜಿಂಕೆ ಬೆಳಗಿನ ವೇಳೆಯಲ್ಲಿ ಭರತನಹಳ್ಳಿಗೆ ಅನಿರೀಕ್ಷಿತವಾಗಿ ಆಗಮಿಸಿದಾಗ ಇಲ್ಲಿನ ಸಾಕುನಾಯಿಗಳು ಅದನ್ನು ಕಂಡು ಬೆನ್ನತ್ತಿ ತೀವ್ರವಾಗಿ ಗಾಯಪಡಿಸಿದ್ದವು. ನಂತರ ಈ ಮಾಹಿತಿಯನ್ನು ಕುಂದರಗಿಯ ಉಪವಲಯಾರಣ್ಯಾಧಿಕಾರಿ ಕಲ್ಲಪ್ಪ ಬರದೂರು ಮತ್ತು ಇಲಾಖೆಯ ಸಿಬ್ಬಂದಿಗೆ ತಿಳಿಸಲಾಯಿತು. ಅವರು ಸ್ಥಳಕ್ಕೆ ಆಗಮಿಸಿ, ಗ್ರಾಮಸ್ಥರ ಸಂಪೂರ್ಣ ಸಹಕಾರದೊಂದಿಗೆ ಜೀವಾಪಾಯಕ್ಕೊಳಗಾಗಿದ್ದ ಜಿಂಕೆಯನ್ನು ಪಾರುಮಾಡುವ ದಿಸೆಯಲ್ಲಿ ಮಂಚೀಕೇರಿಯ ಪಶು ಆಸ್ಪತ್ರೆಗೆ ಜಿಂಕೆಯನ್ನು ಕರೆದೊಯ್ದು, ಅಗತ್ಯ ಚಿಕಿತ್ಸೆ ಕೊಡಿಸಿದರು. ನಂತರ ಜಿಂಕೆಯನ್ನು ಕಾಡಿಗೆ ಬಿಡಲಾಯಿತು.