ಕನ್ನಡಪ್ರಭ ವಾರ್ತೆ ಕೋಲಾರ
ಕೋಲಾರ ಹಾಲುಒಕ್ಕೂಟದಿಂದ ರೈತರಿಗೆ ನೀಡಲಾಗುತ್ತಿದ್ದ ಬೇಸಿಗೆಯ ಪ್ರೋತ್ಸಾಹದಲ್ಲಿ ಲೀಟರ್ಗೆ ೨ ರು. ಕಡಿತಗೊಳಿಸಿರುವ ನಿರ್ಧಾರವನ್ನು ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡರು ಸಮರ್ಥಿಕೊಂಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಹಾಲಿನ ಉತ್ಪಾದನೆ, ಸಂಗ್ರಹಣೆ ಹಾಗೂ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಹಾಲಿನ ದರದಲ್ಲಿ ಏರಿಳಿತವಾಗುವುದು ಸಾಮಾನ್ಯವಾಗಿದ್ದು, ಈ ವಾಸ್ತವಾಂಶವು ರೈತರಿಗೆ ತಿಳಿದಿದೆ ಎಂದು ಪ್ರತಿಪಾದಿಸಿದರು.
ಈ ಸಂಬಂಧವಾಗಿ ಗುರುವಾರ ಪ್ರತಿಭಟನೆ ನಡೆಸುವುದಾಗಿ ಘೋಷಿಸಿರುವ ರೈತ ಸಂಘವು ಪ್ರಸ್ತುತ ಪರಿಸ್ಥಿತಿ ಆರ್ಥ ಮಾಡಿ ಕೊಳ್ಳಬೇಕು. ಒಕ್ಕೂಟದಲ್ಲಿ ಈಗಾಗಲೇ ಪ್ರತಿದಿನ ಸುಮಾರು ೮ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಹೆಚ್ಚುವರಿ ಹಾಲನ್ನು ಹಾಲಿನ ಪುಡಿಗೆ ಪರಿವರ್ತಿಸಲು ಕಳುಹಿಸಲಾಗುತ್ತಿದೆ. ಇದರಿಂದ ಒಕ್ಕೂಟಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ವಿವರಿಸಿದರು.ಇದೇ ವೇಳೆ ಕರ್ನಾಟಕದಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ ಇತರೆ ರಾಜ್ಯಗಳಿಗೆ ಹೋಲಿಸಿದರೆ ಲೀಟರ್ಗೆ ೮ ರಿಂದ ೧೦ ರು. ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಹಾಲಿನ ದರ ಕನಿಷ್ಟ ೫ ರು. ಹೆಚ್ಚಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗಿದೆ ಎಂದು ಹೇಳಿದರು.
ಸರ್ಕಾರ ಹಾಲಿನ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದಲ್ಲಿ ರೈತರಿಗೆ ಶಾಶ್ವತವಾಗಿ ಲೀಟರ್ಗೆ ೨ ರಿಂದ ೪ ರು.ವರೆಗೆ ಹೆಚ್ಚುವರಿ ಮೊತ್ತ ನೀಡಲು ಸಾಧ್ಯವಾಗುತ್ತದೆ. ರೈತರ ಹಿತ ದೃಷ್ಟಿಯಿಂದಲೇ ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿದೆ ಎಂದು ತಿಳಿಸಿದರು.
ಹಾಲು ಉತ್ಪಾದಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಒಕ್ಕೂಟ ಬದ್ಧವಾಗಿದ್ದು, ಪರಿಸ್ಥಿತಿ ಮನಗಂಡು ರೈತರು ಸಹಕರಿಸಬೇಕೆಂದು ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡ ವಿವರಿಸಿದರು.