ಕನ್ನಡಪ್ರಭ ವಾರ್ತೆ ಮಂಡ್ಯ

ಓದದೆಯೂ ರಾಮಾಯಣ, ಮಹಾ ಭಾರತದಂತಹ ಮಹಾ ಕಾವ್ಯಗಳನ್ನು ನಮ್ಮ ಹಳ್ಳಿಗರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ನಿತ್ಯ ನಡೆಯುತ್ತಿದ್ದ ಪಾರಾಯಣ ಕೇಳಿ ಮನನ ಮಾಡಿಕೊಂಡಿದ್ದಾರೆ. ಆದರೆ, ಓದಿನ ಪ್ರಯೋಜನ ಅಪಾರ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಅನ್ನಪೂರ್ಣೇಶ್ವರಿ ನಗರ ನಿವಾಸಿ ಚಿಕ್ಕಸ್ವಾಮಿ ಅವರ ನಿವಾಸದಲ್ಲಿ ಏರ್ಪಡಿಸಿದ್ದ ‘ಮನೆಗೊಂದು ಗ್ರಂಥಾಲಯ ಅನುಷ್ಠಾನ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಓದುವುದೂ ಒಂದು ಕ್ರಮ. ಕಂಠಪಾಠ ಮಾಡುವುದರಿಂದ ಉಚ್ಚಾರಣೆಯ ದೋಷ ಕಡಿಮೆಯಾಗತ್ತದೆ. ಓದಿದಾಗ ಮನಸ್ಸು ಉಲ್ಲಾಸಗೊಂಡು ವಿಶಾಲಗೊಳ್ಳುತ್ತದೆ. ಸಂಸ್ಕಾರ, ವಿಶಾಲ ಮನೋಭಾವ ಬೆಳೆಯುವುದು ಎಂದರು.

ಮೊಬೈಲನ್ನು ಏಕೆ ಬಳಸಬೇಕು, ಎಷ್ಟು ಬಳಸಬೇಕು. ಊಟ ಹೇಗೆ ಮಾಡಬೇಕು. ನಡೆ ನುಡಿ ಹೇಗಿರಬೇಕು, ಜೀವನ ನಿರ್ವಹಿಸುವುದು ಹೇಗೆ ಮುಂತಾದ ವಿಷಯಗಳನ್ನು ಕಲಿಸುವುದೇ ಪುಸ್ತಕಗಳು. ಓದಿನ ಮೂಲಕ ಪಡೆಯುವ ಹರಿವು ಬಹಳ ಮುಖ್ಯ ಎಂದರು.


ಕನ್ನಡ ಉಪನ್ಯಾಸಕ ಉಮೇಶ್ ದಡಮಹಳ್ಳಿ ‘ನಾ ಮೆಚ್ಚಿದ ಪುಸ್ತಕ- ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪರಿಸರದ ಕಥೆಗಳು’ ಕುರಿತು ಮಾತನಾಡಿ, ಪ್ರಕೃತಿ ನಾಶವಾದರೆ ಪ್ರಾಣಿ ಸಂಕುಲ, ಸಸ್ಯ ಸಂಕುಲ ಬದುಕುವುದಿಲ್ಲ ಎಂದು ಪ್ರತಿಪಾದಿಸಿದವರು ತೇಜಸ್ವಿ. ಪ್ರಕೃತಿಯ ಭಾಗ ಮನುಷ್ಯ ಎಂದು ಹೇಳುತ್ತಾ ಪರಿಸರದ ಕಥೆಗಳನ್ನು ಕಟ್ಟಿಕೊಟ್ಟರು ಎಂದರು.

ನಾಟಿ ಔಷಧ ಪದ್ಧತಿ ನಾಶಕ್ಕೆ ಜ್ಞಾನ ಹಂಚದ ನಾಟಿ ವೈದ್ಯರೇ ಕಾರಣ. ಮೌಢ್ಯಗಳು, ಕಂದಾಚಾರಗಳ ಗುಟ್ಟುಗಳನ್ನು ರಟ್ಟು ಮಾಡುತ್ತಾ ಜನರಿಗೆ ಹತ್ತಿರವಾದ ವಿಷಯಗಳ ಬಗ್ಗೆ ಬರೆಯುತ್ತಾ ಎಲ್ಲಾ ವಯೋಮಾನದವರಿಗೂ ಇಷ್ಟವಾಗುತ್ತಾರೆ ತೇಜಸ್ವಿ ಎಂದರು.

ಅಲಯನ್ಸ್ ಸಂಸ್ಥೆಯ ಕೆ.ಟಿ.ಹನುಮಂತು ಮಾತನಾಡಿ, ಒಂದು ಲಕ್ಷ ಮನೆಯಲ್ಲಿ ಗ್ರಂಥಾಲಯ ಅನುಷ್ಠಾನ ಒಳ್ಳೆಯ ಕಾರ್ಯಕ್ರಮ. ಓದುಗರನ್ನು ಸೆಳೆಯುವ, ಓದುವ ಸಂಸ್ಕೃತಿಯನ್ನು ಹೆಚ್ಚಿಸುವ ಕೆಲಸ ಇದರಿಂದ ಆಗುತ್ತದೆ. ಪ್ರತಿನಿತ್ಯ 1 ಗಂಟೆ ಕಾಲ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಚಿಕ್ಕಸ್ವಾಮಿ ಮಾತನಾಡಿ, ಓದುವ ಸಂಸ್ಕಾರ ಬಾಲ್ಯದಲ್ಲಿಯೇ ಆಗಬೇಕು. ಓದುವ ಸಂಸ್ಕೃತಿ ಕಡಿಮೆಯಾಗಿರುವ ಈ ಸಂದರ್ಭದಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಚಳವಳಿಯೇ ಆಗಬೇಕು ಎಂದು ಆಶಿಸಿದರು.

ಜಿಲ್ಲಾ ಜಾಗೃತ ಸಮಿತಿ ವತಿಯಿಂದ ಚಿಕ್ಕಸ್ವಾಮಿ ದಂಪತಿಯನ್ನು ಅಭಿನಂದಿಸಲಾಯಿತು. ಸಮಿತಿ ಸಂಚಾಲಕ ಕಾರಸವಾಡಿ ಮಹದೇವು, ಸಮಿತಿಯ ಸದಸ್ಯರಾದ ಡಾ.ಎಂ.ಕೆಂಪಮ್ಮ, ಚಂದ್ರಶೇಖರ ದ.ಕೋ.ಹಳ್ಳಿ, ಎಂ.ಮಂಚಶೆಟ್ಟಿ, ಸದ್ಧಾಂ ತಗ್ಗಹಳ್ಳಿ, ಅನಿಲ್ ಬಾಬು ಉಪಸ್ಥಿತರಿದ್ದರು. ಕವಿ ಸಬ್ಬನಹಳ್ಳಿ ಶಶಿಧರ, ಡಾ.ಕೆ.ಎಂ.ಮಹೇಶ್, ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.