ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ಕರ್ನಾಟಕದಲ್ಲಿ ಮೈನಿಂಗ್ ಲಾಭಿ ಎಗ್ಗಿಲ್ಲದೆ ನಡೆಯುತ್ತಿದ್ದು, ಆಂಧ್ರ ಸರ್ಕಾರ ಓಬಳಾಪುರಂ ಗಣಿಗಾರಿಕೆ ನಡೆದಿರುವ ಕರ್ನಾಟಕದಲ್ಲಿ ಎಂದು ಸ್ಪಷ್ಟಪಡಿಸಿದರೂ, ಇದುವರೆಗೂ ಕರ್ನಾಟಕ ಸರ್ಕಾರ ಮೌನಕ್ಕೆ ಶರಣಾಗಿರುವುದನ್ನು ನೋಡಿದರೆ, ಸರ್ಕಾರ, ವಿರೋಧ ಪಕ್ಷಗಳೆಲ್ಲವೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಗಣಿಗಾರಿಕೆ ವಿರೋಧಿಸಿ ಬಳ್ಳಾರಿಯವರೆಗೂ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ, ಈಗ ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಗಣಿಗಾರಿಕೆಗೆ ಚೌಕಟ್ಟು ವಿಧಿಸಬೇಕಿದ್ದ ಸರ್ಕಾರ, ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಲು ಮುಂದಾದಂತೆ ಕಾಣುತ್ತಿದೆ. ಅಕ್ರಮ ಗಣಿಗಾರಿಕೆಯಲ್ಲಿ ಪೊಲೀಸ್,ಅರಣ್ಯ,ಕಂದಾಯ ಪರಿಸರ ಇಲಾಖೆಗಳು ಶಾಮೀಲಾಗಿವೆ ಎಂದು ಆರೋಪಿಸಿದರು.ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಚಳವಳಿಗೆ ಅವಕಾಶವಿದೆ. ಆದರೆ ತುಮಕೂರು ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ಪ್ರತಿಭಟನೆ, ಚಳುವಳಿಗಳಿಗೆ ನಿಷೇಧ ವಿಧಿಸಿರುವುದನ್ನು ನೋಡಿದರೆ, ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆಯೇ ಅಥವಾ ಸರ್ವಾಧಿಕಾರಿ ಆಡಳಿತದಲ್ಲಿ ಇದ್ದೇವೆಯೇ ಎಂಬ ಅನುಮಾನ ಮೂಡುತ್ತಿದೆ. ಸಾರ್ವಜನಿಕರ ಸೇವಕರಾದ ಅಧಿಕಾರಿಗಳು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುವ ವೇಳೆ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಬೇಕಾದ್ದು ಅವರ ಕರ್ತವ್ಯ. ಆದರೆ ಪ್ರತಿಭಟನೆ ನಡೆಸದಂತೆ ನಿರ್ಬಂಧ ವಿಧಿಸುವುದು ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದರು.ಕೂಡಲೇ ಜಿಲ್ಲಾಧಿಕಾರಿಗಳು ತಾವು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.ಗಣಿಗಾರಿಕೆ ನಡೆಸಲು ಅದರದ್ದೇ ಆದ ನಿಯಮಗಳಿವೆ. ಅವುಗಳ ಪ್ರಕಾರವೇ ಗಣಿಗಾರಿಕೆಗೆ ಅವಕಾಶ ನೀಡಬೇಕು.ರೈತರಿಗೊಂದು ನ್ಯಾಯ,ಗಣಿ ಮಾಲೀಕರಿಗೆ ಒಂದು ನ್ಯಾಯವಲ್ಲ, ಈ ವಿಚಾರದಲ್ಲಿ ಡಿಸಿಯವರಿಗೆ ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ.ಅಲ್ಲದೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುವುದು ಎಂದರು.ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ ಮಾತನಾಡಿ, ತುರುವೇಕೆರೆ ತಾಲೂಕು ಕೋಳಗಟ್ಟ ಗ್ರಾಮದಲ್ಲಿ 2 ಎಕೆರೆ ಜಾಗವನ್ನು ಕ್ರಷರ್ಗೆ ಲೀಸ್ ಪಡೆದು, ಅಕ್ಕಪಕ್ಕದಲ್ಲಿದ್ದ ಸುಮಾರು 8 ಎಕೆರೆ ಸರ್ಕಾರಿ ಗೋಮಾಳ, ಅರಣ್ಯಇಲಾಖೆಯ ಜಾಗವನ್ನು ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿಗಾರಿಕೆಯಿಂದ ಧೂಳಿನ ಕಣಗಳು ತೆಂಗು ಮತ್ತು ಅಡಿಕೆ ಇನ್ನಿತರ ಆಹಾರ ಬೆಳೆಗಳ ಮೇಲೆ ಕುಳಿತು, ಇಡೀ ಬೆಳೆ ನಾಶವಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ನೀಡಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮಕೈಗೊಂಡಿಲ್ಲ ಎಂದು ದೂರಿದರು.
ಜಿಲ್ಲಾಡಳಿತ ಮತ್ತು ಅಕ್ರಮ ಗಣಿಗಾರಿಕೆ ವಿರುದ್ದ ಅಹೋರಾತ್ರಿ ಧರಣಿ ನಡೆದಿದೆ. ಆದರೆ ಗಣಿಮಾಲೀಕರು ಪ್ರತಿಭಟನಾ ನಿರತರ ಮೇಲೆ ಹಲ್ಲೆ ನಡೆಸಿ, ಅವರ ವಿರುದ್ದವೇ ಕೇಸು ದಾಖಲು ಮಾಡಿ, ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ನನಗೂ ದೂರವಾಣಿ ಕೆರೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ದಂಡಿನಶಿವ ಪೊಲೀಸರು ರೈತರು ನೀಡಿದ ದೂರುಗಳಿಗೆ ಎನ್.ಸಿ ನೀಡಿ, ಗಣಿ ಮಾಲೀಕರು ನೀಡಿದ ದೂರುಗಳಿಗೆ ಎಫ್.ಐ.ಆರ್. ದಾಖಲಿಸಿ ಪರೋಕ್ಷವಾಗಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಅಕ್ರಮ ಗಣಿಗಾರಿಕೆಗೆ ತಡೆಯೊಡ್ಡಬೇಕು. ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಗೆ ಪೂರ್ವಾನುಮತಿ ಅಗತ್ಯ ಎಂಬ ಜಿಲ್ಲಾಧಿಕಾರಿಗಳ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. ಈ ಸಂಬಂಧ ಮನವಿಯನ್ನುಅಪರ ಜಿಲ್ಲಾಧಿಕಾರಿ ಡಾ.ಎಸ್.ತಿಪ್ಪೇಸ್ವಾಮಿ ಅವರಿಗೆ ಸಲ್ಲಿಸಿದರು. ಈ ವೇಳೆ ಕರ್ನಾಟಕ ರಾಜ್ಯರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ತುರುವೇಕೆರೆ ತಾಲೂಕು ಅಧ್ಯಕ್ಷ ಗಂಗಾಧರಪ್ಪ, ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ತುಮಕೂರು ಜಿಲ್ಲಾ ಮಹಿಳಾ ಘಟಕದ ಶಶಿಕಲ, ಗುಬ್ಬಿ ಮಹಿಳಾ ಘಟಕದ ಎಸ್.ಕಲ್ಪನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಕೋಟ್...
2014 ರಲ್ಲಿ ತುಮಕೂರು ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿಂದ ಪುಡ್ಪಾರ್ಕ್ ಆರಂಭ ಮಾಡಲಾಯಿತು. ಆರಂಭವಾದ ಒಂದೇ ವರ್ಷಕ್ಕೆ ಮುಚ್ಚಿ, 100 ಎಕರೆ ಜಾಗವನ್ನು ಸಣ್ಣ ಸಣ್ಣತುಂಡು ಮಾಡಿ, ಮಾರಾಟ ಮಾಡಲಾಗಿದೆ. ಸ್ವತಃ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿಯೇ ಹಗಲು ದರೋಡೆ ನಡೆದರೂ ಇದುವರೆಗೂ ಯಾರ ವಿರುದ್ಧವೂ ಕ್ರಮವಿಲ್ಲ. ವಿರೋಧ ಪಕ್ಷ ಸಹ ಸಂಪೂರ್ಣ ನಿಷ್ಕ್ರೀಯವಾಗಿದೆ- ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡರು.