ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬೆಂಬಲ ಯೋಜನೆಯಡಿ ರೈತರಿಂದ ಪ್ರತಿ ಕ್ವಿಂಟಲ್ಗೆ 4,886 ರು.ಗಳಂತೆ ಉತ್ತಮ ಬೆಲೆಯಲ್ಲಿ ಇಂದಿನಿಂದ ರಾಗಿ ಖರೀದಿಸಲಾಗುತ್ತಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ರೈತರಲ್ಲಿ ಮನವಿ ಮಾಡಿದರು.ತಾಲೂಕಿನ ವರದಹಳ್ಳಿಯ ರಾಜ್ಯ ಉಗ್ರಾಣ ನಿಗಮದ ರಾಗಿ ಖರೀದಿ ಕೇಂದ್ರದಲ್ಲಿ ಆಯೋಜಿಸಿದ್ದ, ರಾಗಿ ಖರೀದಿ ಕಾರ್ಯಕ್ರಮಕ್ಕೆ ಚೀಲಕ್ಕೆ ರಾಗಿ ತುಂಬುವ ಮೂಲಕ ಚಾಲನೆ ನೀಡಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಲಾಭ ತಂದುಕೊಡುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಬೆಂಬಲ ಬೆಲೆ ಯೋಜನೆಯಡಿ ವಿವಿಧ ಬೆಳೆಗಳಿಗೆ ಸರ್ಕಾರ ನಿಗದಿಪಡಿಸಿರುವ ದರವು ಮಾರುಕಟ್ಟೆ ದರಕ್ಕಿಂತ ಹೆಚ್ಚಾಗಿದೆ. ಆದ್ದರಿಂದ ಜಿಲ್ಲೆಯ ರೈತರು ಸಹ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಮೆಕ್ಕೆಜೋಳ ಮಾರಾಟ ಮಾಡಲು ಆಸಕ್ತಿ ತೋರಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿಯ ರಾಜ್ಯ ಉಗ್ರಾಣ ಕೇಂದ್ರದಲ್ಲಿ ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ತಾಲೂಕುಗಳ ರೈತರ ರಾಗಿ ಖರೀದಿ ಪ್ರಕ್ರಿಯೆ ಚಾಲನೆಗೊಂಡಿದೆ. ಅದರಂತೆ ಜಿಲ್ಲೆಯ ಇತರ ತಾಲೂಕುಗಳಲ್ಲೂ ಇಂದಿನಿಂದ ಮಾರ್ಚ್ 31 ರವರೆಗೆ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಈ ಸೌಲಭ್ಯವನ್ನು ನೋಂದಾಯಿತ ಜಿಲ್ಲೆಯ ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಿದರು.ರಸ್ತೆ ನಿರ್ಮಾಣದ ಭರಸವೆ:ವರದಹಳ್ಳಿಯ ರಾಜ್ಯ ಉಗ್ರಾಣ ನಿಗಮವನ್ನು ಸಂಪರ್ಕಿಸುವ ರಸ್ತೆಯು ಕಚ್ಚಾ ರಸ್ತೆಯಾಗಿದ್ದು, ಈ ಕೇಂದ್ರದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರಕ್ಕೆ ರೈತರು ಬಂದುಹೋಗಲು ಕಷ್ಟಸಾಧ್ಯವಾಗುತ್ತಿದೆ. ಆದ್ದರಿಂದ ಈ ರಸ್ತೆಯನ್ನು ಪಕ್ಕಾ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವುದಲ್ಲದೆ ಬದಲಿಯಾಗಿ ಪರ್ಯಾಯ ರಸ್ತೆ ನಿರ್ಮಾಣಕ್ಕೂ ಸಹ ತ್ವರಿತವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರೈತರಲ್ಲಿ ಭರಸವೆ ನೀಡಿದರು.2025-26ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಜಿಲ್ಲೆಯ 7,392 ರೈತರು ನೋಂದಣಿ ಮಾಡಿಕೊಂಡು ಸು 1,57,428 ಕ್ವಿಂಟಲ್ ರಾಗಿಯನ್ನು ಮಾರಾಟ ಮಾಡಲು ರೈತರು ಇಚ್ಚೆಪಟ್ಟಿರುತ್ತಾರೆ. ಅದರಂತೆ 6 ತಾಲೂಕಗಳಲ್ಲಿ 6 ತಾಲೂಕು ಖರೀದಿ ಕೇಂದ್ರಗಳನ್ನು ತೆರೆದು ರಾಗಿ ಖರೀದಿ ಪ್ರಕ್ರಿಯೆಯನ್ನು ಸಮರ್ಪಕವಾಗಿ ಮಾಡುತ್ತಿದೆ. ರಾಗಿ ಖರೀದಿ ವೇಳೆ ಯಾವುದೇ ತಾಂತ್ರಿಕ ಅಡೆತಡೆಗಳು ಉದ್ಭವವಾಗದಂತೆ ವ್ಯವಸ್ಥೆ ಮಾಡಲಾಗಿದೆ. ರಾಗಿ ಖರೀದಿ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಸದರಿ ಕೇಂದ್ರಗಳಲ್ಲಿಯೇ ರೈತರ ಅನುಕೂಲಕ್ಕಾಗಿ ಈ ಬಾರಿ ಕ್ಯಾಂಟೀನ್ ವ್ಯವಸ್ಥೆ ಮತ್ತು ವಿಶ್ರಾಂತಿಗೃಹ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಮರ್ಪಕವಾಗಿ ಹಾಗೂ ಯೋಜಿತ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಂಡು ರಾಗಿ ಖರೀದಿ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸುತ್ತಿದೆ ಎಂದರು.ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಸಮಕ್ಷಮದಲ್ಲಿಯೇ ರಾಗಿಯನ್ನು ತೂಕ ಮಾಡಿ ಪಡೆಯಲಾಗುತ್ತದೆ. ಯಾವುದೇ ರೈತರಿಗೆ ತಮ್ಮ ರಾಗಿಯನ್ನು ಬೇರೆ ಕಡೆ ತೂಕ ಮಾಡಲು ಇಚ್ಛೆಪಟ್ಟರೆ ಅಂತಹವರ ಅನುಕೂಲಕ್ಕಾಗಿಯೇ ಜಿಲ್ಲೆಯಲ್ಲಿ ನೋಂದಾಯಿತವಾಗಿರುವ ಅಧಿಕೃತ 14 ವೇ ಬ್ರಿಡ್ಜ್ ಗಳನ್ನು ಈ ವರ್ಷ ಗುರುತಿಸಲಾಗಿದ್ದು, ಸದರಿ ವೇ ಬ್ರಿಡ್ಜ್ ಗಳಲ್ಲಿ ರಾಗಿಯನ್ನು ತೂಕ ಮಾಡಿಸಿಕೊಂಡು ಖಾತ್ರಿ ಪಡೆಯಬಹುದು. ಈಗಾಗಲೇ ದಿನಾಂಕವಾರು ವೇಳಾಪಟ್ಟಿಯಂತೆ ರಾಗಿ ಖರೀದಿಸಲು ರೈತರಿಗೆ ಟೋಕನ್ ನೀಡಲಾಗಿದ್ದು, ಅದರಂತೆ ರೈತರು ರಾಗಿಯನ್ನು ಯಾವುದೇ ಹೆಚ್ಚಿನ ಆತಂಕಕ್ಕೆ ಒಳಗಾಗದೆ ಜಿಲ್ಲಾಡಳಿತ ತೆರೆದಿರುವ ರಾಗಿ ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.ಈ ಸಂದರ್ಭದಲ್ಲಿ ಡಿಸಿ ಜಿ. ಪ್ರಭು, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್, ತಹಸೀಲ್ದಾರ್ ರಶ್ಮಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆಳಗಿನಮನಿ, ವಿಜಯಕುಮಾರ್ ಸೇರಿದಂತೆ ರೈತರು ಇದ್ದರು. ಸಿಕೆಬಿ-1 ತಾಲೂಕಿನ ವರದಹಳ್ಳಿಯ ರಾಜ್ಯ ಉಗ್ರಾಣ ನಿಗಮದ ರಾಗಿ ಖರೀದಿ ಕೇಂದ್ರದಲ್ಲಿ ಆಯೋಜಿಸಿದ್ದ, ರಾಗಿ ಖರೀದಿ ಕಾರ್ಯಕ್ರಮಕ್ಕೆ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು