ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಗವಿಶ್ರೀ ಜತೆ ಸಚಿವ ಎಚ್‌.ಕೆ. ಪಾಟೀಲ ಚರ್ಚೆ

| Published : Jun 17 2025, 12:57 AM IST

ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಗವಿಶ್ರೀ ಜತೆ ಸಚಿವ ಎಚ್‌.ಕೆ. ಪಾಟೀಲ ಚರ್ಚೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಕೋಟೆ, ಬಹದ್ದೂರುಬಂಡಿ ಕೋಟೆಯ ಅಭಿವೃದ್ಧಿ ಮಾಡುತ್ತಿದ್ದು ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಜತೆಗೆ ಎಕ್ಸಲೇಟರ್ ವ್ಯವಸ್ಥೆಯನ್ನು ಕೋಟೆ ಏರಲು ಮಾಡಲಾಗುವುದು ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದ್ದಾರೆ.

ಕೊಪ್ಪಳ:

ಗವಿಮಠಕ್ಕೆ ಸೋಮವಾರ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಅವಕಾಶಗಳ ಕುರಿತು ಗವಿಸಿದ್ಧೇಶ್ವರ ಶ್ರೀಗಳೊಂದಿಗೆ 1 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.

ಕೊಪ್ಪಳ ಕೋಟೆ, ಬಹದ್ದೂರುಬಂಡಿ ಕೋಟೆಯ ಅಭಿವೃದ್ಧಿ ಮಾಡುತ್ತಿದ್ದು ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಜತೆಗೆ ಎಕ್ಸಲೇಟರ್ ವ್ಯವಸ್ಥೆಯನ್ನು ಕೋಟೆ ಏರಲು ಮಾಡಲಾಗುವುದು ಎಂದ ಸಚಿವರು, ಅಂಜನಾದ್ರಿ ಅಭಿವೃದ್ಧಿ ಸೇರಿದಂತೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆ ರೂಪಿಸಿದೆ ಎಂದು ಸಚಿವರು ಶ್ರೀಗಳ ಗಮನಕ್ಕೆ ತಂದರು.

ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕೈಗೊಂಡ ಸಮಾಜಮುಖಿ ಕಾರ್ಯಗಳ ಬಗ್ಗೆ ಶ್ರೀಗಳು ಸಚಿವರ ಗಮನಕ್ಕೆ ತಂದರು. ಗಿಣಿಗೇರಿಯ 300 ಎಕರೆ ಕೆರೆಯನ್ನು ಸರ್ಕಾರದ ನೆರವಿಲ್ಲದೆ ಸ್ಥಳೀಯರ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಅಭಿವೃದ್ಫಿಪಡಿಸಿದ ಫೋಟೋಗಳನ್ನು ಶ್ರೀಗಳು ತೋರಿಸಿದರು. ಈ ಕಾರ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.