ಸಾರಾಂಶ
ಗದಗ: ಹೆಸರುಕಾಳು ಬೆಂಬಲ ಬೆಲೆಯಲ್ಲಿ ಖರೀದಿಸುವ ಸಂಬಂಧ ಯಾವುದೇ ಕಾರಣಕ್ಕೂ ರೈತರಿಗೆ ಹಾನಿಯಾಗಲು ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಸೋಮವಾರ ಸಂಜೆ ತಾಲೂಕಿನ ಬಿಂಕದಕಟ್ಟಿಯ ಗ್ರಾಪಂ ಭವನದಲ್ಲಿ ಹೆಸರು ಕಾಳು ಬೆಂಬಲ ಬೆಲೆ ಖರೀದಿ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು. ಹೆಸರುಕಾಳು ಖರೀದಿ ಪ್ರಕ್ರಿಯೆಯಲ್ಲಿ ಉದ್ಭವಿಸಿರುವ ತಾಂತ್ರಿಕ ಮತ್ತು ಗುಣಮಟ್ಟದ ಅಂಶಗಳ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ಏರ್ಪಡಿಸಲಾಗಿತ್ತು.ರೈತರ ಆಕ್ಷೇಪಣೆ ಹಾಗೂ ಬೇಡಿಕೆಗಳನ್ನು ಗಮನದಿಂದ ಆಲಿಸಿದ ಸಚಿವ ಎಚ್.ಕೆ. ಪಾಟೀಲ, ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೃಷಿಕರಿಗೆ ನ್ಯಾಯವಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ರೈತರ ಪರಿಶ್ರಮ ವ್ಯರ್ಥವಾಗಬಾರದು. ಬೆಂಬಲ ಬೆಲೆ ಸೌಲಭ್ಯ ತಲುಪುವಂತೆ ಅಗತ್ಯ ಬದಲಾವಣೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಯಡಿ ಈವರೆಗೆ ಜಿಲ್ಲೆಯಲ್ಲಿ ಕೇವಲ 440 ಕ್ವಿಂಟಲ್ ಹೆಸರು ಮಾತ್ರ ಖರೀದಿಸಲಾಗಿದೆ ಎಂದು ಮಾರ್ಕೆಟಿಂಗ್ ಫೆಡರೇಶನ್ ಅಧಿಕಾರಿಗಳು ಮಾಹಿತಿ ನೀಡಿದರು. ಸರ್ಕಾರದ ಮಾರ್ಗಸೂಚಿ ಪ್ರಕಾರ ಹೆಚ್ಚಿನ ಹೆಸರುಕಾಳು ಗುಣಮಟ್ಟದ ಆಧಾರದ ಮೇಲೆ ತಿರಸ್ಕೃತ ಆಗುತ್ತಿರುವುದನ್ನು ತಿಳಿಸಿದರು.ಹೆಸರುಕಾಳು ಬೆಳೆ ಹಾನಿಗೊಳಗಾಗಿಲ್ಲ. ಸ್ವಲ್ಪ ಕಪ್ಪುಚುಕ್ಕೆ ಕಂಡುಬರುವ ಮಟ್ಟಿಗೆ ಮಾತ್ರ ವ್ಯತ್ಯಾಸವಿದ್ದು, ಇದಕ್ಕೂ ವಾತಾವರಣದ ವೈಪರೀತ್ಯಗಳು ಕಾರಣವೆಂದು ರೈತ ಮುಖಂಡರು ವಿವರಿಸಿದರು. ಇಂತಹ ಪರಿಸ್ಥಿತಿ ಪರಿಗಣಿಸಿ, ಸರ್ಕಾರವು ಮಾರ್ಗಸೂಚಿಗಳನ್ನು ಸಡಿಲಗೊಳಿಸಿ ರೈತರಿಂದ ಹೆಸರುಕಾಳು ಖರೀದಿ ಮಾಡಿ ರೈತರ ಆರ್ಥಿಕ ಹಾನಿಯನ್ನು ತಪ್ಪಿಸಬೇಕೆಂದು ಸಚಿವರ ಗಮನಕ್ಕೆ ತಂದರು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾತನಾಡಿ, ರೈತರ ಸಮಸ್ಯೆಗೆ ಜಿಲ್ಲಾಡಳಿತ ಖಂಡಿತ ಸ್ಪದನೆ ಮಾಡಲಾಗಿದೆ. ರೈತರು ಬೆಳೆದ ಹೆಸರು ಖರೀದಿಗೆ ಇರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರ ಸೂಚನೆಯಂತೆ ಕ್ರಮ ವಹಿಸಿ ಪ್ರಯತ್ನಿಸಲಾಗುವುದು. ರೈತರ ಶ್ರಮಕ್ಕೆ ಹಾನಿಯಾಗದಂತೆ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತದೆ ಎಂದರು.ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿದರು. ಸಭೆಯಲ್ಲಿ ಆನಂದಸ್ವಾಮಿ ಗಡ್ಡದ್ದೇವರಮಠ, ರವಿ ಮೂಲಿಮನಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಾಪಂ ಇಒ ಮಲ್ಲಯ್ಯ ಕೆ., ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ, ಕೃಷಿ ಮಾರುಕಟ್ಟೆ ಸಮಿತಿ ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ರೈತ ಮುಖಂಡರಾದ ಅಪ್ಪಣ್ಣ ಇನಾಮತಿ, ಸಿ.ಬಿ. ದೊಡ್ಡಗೌಡ್ರ, ಬಿ.ಆರ್. ದೇವರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಪರಪ್ಪನವರ, ಉಪಾಧ್ಯಕ್ಷೆ ದ್ಯಾಮವ್ವ ಆರಟ್ಟಿ, ಸದಸ್ಯರಾದ ತರದರೆಡ್ಡಿ ರಂಗಪ್ಪನವರ, ಪತ್ತೆಸಾಬ್ ನದಾಫ್, ವೆಂಕಟೇಶ್ ಕುನಿ, ಮಂಜುನಾಥ ಮಕಳಿ, ಭೀಮವ್ವ ಬೇವಿನಕಟ್ಟಿ, ಲಕ್ಷ್ಮಿ ಮೂಲಿಮನಿ, ತುಳಸ ತಿಮ್ಮನ ಗೌಡ್ರ, ಜೈಬುನಬಿ ಸೋನೆಖಾನವರ, ಅಶೋಕ ಕರೂರ, ದೇವೇಂದ್ರ ಗೌಡ್ರು, ಕರಿಗೌಡ್ರ, ಗಾಯತ್ರಿ ಖಾನಾಪುರ, ಗಂಗವ್ವ ತಡಿಸಿ ಸೇರಿದಂತೆ ಹಲವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))