ಜಿಲ್ಲಾ ಉಸ್ತುವಾರಿ ಸಚಿವರಾದಾಗಿನಿಂದ ಅವರೇನು ಕೆಲಸ ಮಾಡಿದ್ದಾರೆ. ನಾನು ಏನು ಕೆಲಸ ಮಾಡಿದ್ದೇನೆ ಎಂದು ಹೇಳುತ್ತೇನೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮಾಡುತ್ತಿರುವ ಪ್ರಮುಖ ಕೆಲಸವೆಂದರೆ ಫಲವತ್ತಾದ ಜಮೀನಗಳನ್ನು ಕಿತ್ತುಕೊಂಡು ರೈತರ ಹೊಟ್ಟೆ ಮೇಲೆ ಒಡೆಯುವುದು. ಸಚಿವರು ಬೇನಾಮಿ ಹೆಸರಲ್ಲಿ ಏನು ಮಾಡಿದ್ದಾರೆ. ಎಲ್ಲ ದಾಖಲೆಯೂ ನನ್ನ ಬಳಿ ಇದೆ. ನನಗೆ ಸವಾಲು ಹಾಕ ಬೇಡಿ. ನಿಮ್ಮ ಮುಖವಾಡ ಕಳಚುವ ಕೆಲಸ ಸದ್ಯದಲ್ಲೇ ಮಾಡುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ಗೆ ಎಚ್ಚರಿಕೆ ನೀಡಿದರು.

ನಗರದ ಸಂಸದರ ಗೃಹ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದಾಗಿನಿಂದ ಅವರೇನು ಕೆಲಸ ಮಾಡಿದ್ದಾರೆ. ನಾನು ಏನು ಕೆಲಸ ಮಾಡಿದ್ದೇನೆ ಎಂದು ಹೇಳುತ್ತೇನೆ. ಅವರು ಜಿಲ್ಲಾ ಉಸ್ತುವಾರಿ ಸಚಿವರು ಆದಾಗಿನಿಂದ ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಭೂಮಿಯನ್ನು ಕಿತ್ತುಕೊಂಡು ಅವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಬೇನಾಮಿಗಳ ಹೆಸರಲ್ಲಿ ಚಿಂತಾಮಣಿಯಲ್ಲಿ ನೋಂದಣಿ ಮಾಡಿಸುತ್ತಿರುವುದು ಎಲ್ಲವೂ ಗೊತ್ತಿದೆ. ಶೀಘ್ರದಲ್ಲೇ ಅವರ ಮುಖವಾಡ ಕಳಚುವ ಕೆಲಸ ಮಾಡುತ್ತೇನೆ ಎಂದರು.

ಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ಚುನಾವಣೆ ವಿಷಯದಲ್ಲಿ ಚಿಮುಲ್ ನಿರ್ದೇಶಕ ಹುಜುಗೂರು ರಾಮಯ್ಯನವರು ಆರೋಪ ಮಾಡಿದ್ದಾರೆ. ಅದರೆ ನಾನು ಆಗ ವಿದೇಶದಲ್ಲಿದ್ದೆ. ನಾನು ಆಗ ಚಿಕ್ಕಬಳ್ಳಾಪುರದಲ್ಲಿ ಇದ್ದಿದ್ದರೆ ಮರಳುಕುಂಟೆ ಕೃಷ್ಣಮೂರ್ತಿಯವರು ಸೋಲುತ್ತಿರಲಿಲ್ಲ. ನಾನು ಅಂತಹ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಿಲ್ಲ. ಅಂತಹ ಪರಿಸ್ಥಿತಿಯೂ ನನಗೆ ಬಂದಿಲ್ಲ. ಯಾರೋ ಒತ್ತಡ ಹಾಕಿದ್ದಾರೆ. ಹೀಗಾಗಿ ಅವರು ನನ್ನ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಿದರು.

ಆದಿಚುಂಚನಗಿರಿಯಲ್ಲಿ ಏಪ್ರಿಲ್ 15 ರಂದು ಬೆಳಗ್ಗೆ 10 ಗಂಟೆಗೆ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವ ಬೈರವೈಕ್ಯ ದೇಗುಲ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷರಾದ ಎ.ಗಜೇಂದ್ರ, ಬಿಜೆಪಿ ಜಿಲ್ಲಾ ಮುಖಂಡರಾದ ಆವುಲಕೊಂಡರಾಯಪ್ಪ, ಮುನಿಕೃಷ್ಣಪ್ಪ, ತೇಜೆಂದ್ರಬಾಪು, ಪ್ರಭಾಕರರೆಡ್ಡಿ, ಲೀಲಾವತಿ ಶ್ರೀನಿವಾಸ್, ಬಾಲಕುಂಟಹಳ್ಳಿ ಗಂಗಾಧರಪ್ಪ, ನಾರಾಯಣಸ್ವಾಮಿ, ಅನು ಅನಂದ್, ಮೊಬೈಲ್ ಬಾಬು, ರಾಮಣ್ಣ ಮತ್ತಿತರರು ಇದ್ದರು.

ಸಿಕೆಬಿ-4 ಸುದ್ದಿಗೋಷ್ಟಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು.