ಮಳೆ ಹಾನಿ ಪ್ರದೇಶಗಳಿಗೆ ಸಚಿವ ಜಾರಕಿಹೊಳಿ ಭೇಟಿ, ಪರಿಶೀಲನೆ

| Published : May 30 2025, 12:49 AM IST

ಸಾರಾಂಶ

ಶೃಂಗೇರಿ, ತಾಲೂಕಿನಾದ್ಯಂತ ಕಳೆದ ಏಳೆಂಟು ದಿನಗಳಿಂದ ಸುರಿದ ಮುಂಗಾರು ಪೂರ್ವ ಮಳೆ ಗುರುವಾರ ಕೊಂಚ ತಗ್ಗಿತ್ತು. ಮಳೆಯ ಆರ್ಭಟಕ್ಕೆ ವ್ಯಾಪಕ ಹಾನಿಯುಂಟಾಗಿದೆ. ಕೆಲವೆಡೆ ರಸ್ತೆಗಳು ಮಳೆಯಿಂದ ಕೊಚ್ಚಿಕೊಂಡು ಹೋಗಿರುವುದಲ್ಲದೆ, ಸೇತುವೆಗಳು ಹಾನಿಗೊಳಗಾಗಿದೆ. ಗಾಳಿಯಿಂದ ವಿದ್ಯುತ್ ಕಂಬಗಳು, ಲೈನ್ ಗಳು ಮುರಿದು ಹಾಳಾಗಿದೆ.

- ಶೃಂಗೇರಿ ತಗ್ಗಿದ ಗಾಳಿ ಮಳೆಯ ಆರ್ಭಟ । ರಸ್ತೆ,ಸೇತುವೆ,ವಿದ್ಯುತ್ ಕಂಬ,ಲೈನ್ ಗಳು ಹಾನಿ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಕಳೆದ ಏಳೆಂಟು ದಿನಗಳಿಂದ ಸುರಿದ ಮುಂಗಾರು ಪೂರ್ವ ಮಳೆ ಗುರುವಾರ ಕೊಂಚ ತಗ್ಗಿತ್ತು. ಮಳೆಯ ಆರ್ಭಟಕ್ಕೆ ವ್ಯಾಪಕ ಹಾನಿಯುಂಟಾಗಿದೆ. ಕೆಲವೆಡೆ ರಸ್ತೆಗಳು ಮಳೆಯಿಂದ ಕೊಚ್ಚಿಕೊಂಡು ಹೋಗಿರುವುದಲ್ಲದೆ, ಸೇತುವೆಗಳು ಹಾನಿಗೊಳಗಾಗಿದೆ. ಗಾಳಿಯಿಂದ ವಿದ್ಯುತ್ ಕಂಬಗಳು, ಲೈನ್ ಗಳು ಮುರಿದು ಹಾಳಾಗಿದೆ.

ಗಾಳಿಮಳೆ ಆರ್ಭಟಕ್ಕೆ ತಾಲೂಕಿನಲ್ಲಿ ಒಟ್ಟು 113 ವಿದ್ಯುತ್ ಕಂಬಗಳು ತುಂಡಾಗಿದ್ದು, ಸುಮಾರು 2.2 ಕಿ.ಮಿ ವಿದ್ಯುತ್ ಲೈನ್‌ ಗೆ ಹಾನಿಯಾಗಿದೆ. ತಾಲೂಕಿನಲ್ಲಿ ಒಂದು ಅಂಗನವಾಡಿ ಕಟ್ಟಡ ಮಳೆಯಿಂದ ಜಖಂ ಗೊಂಡಿದೆ. ಇನ್ನುಳಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದು, ಮಳೆಯಿಂದ ಹ‍ಳ್ಳ ಉಕ್ಕಿ ಹರಿದು ರಸ್ತೆ ಹಾನಿಯಾಗಿದೆ. ಮೆಣಸೆ ಪಂಚಾಯಿತಿ ಕಿಕ್ರೆ ಕಿರುಹಳ್ಳ ಸೇತುವೆ ಮೇಲೆ ನೀರು ಉಕ್ಕಿ ಹರಿದು ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿತ್ತು. ರಸ್ತೆಯೂ ಸಂಪೂರ್ಣ ಜಖಂಗೊಂಡಿದೆ.

ಶೃಂಗೇರಿ ಆಗುಂಬೆ ಸಂಪರ್ಕ ನೇರಳಕೊಡಿಗೆ ರಾಜ್ಯಹೆದ್ದಾರಿ ಬಳಿಯ ರಸ್ತೆ ಅಪಾಯದ ಸ್ಥಿತಿಯಲ್ಲಿದೆ. ತಾಲೂಕಿನ ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆ, ಪಂಚಾಯತ್ ರಸ್ತೆಗಳು ಮಳೆಯಿಂದ ವಿವಿಧೆಡೆ ಹಾನಿಯಾಗೊಳಗಾಗಿವೆ. ಹನುಮಂತನಗರದಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದಿದೆ. ಕೆಲಮನೆಗಳು ಕುಸಿದು ಬೀಳುವ ಅಪಾಯಕಾರಿ ಸ್ಥಿತಿಯಲ್ಲಿದೆ. ನೆಮ್ಮಾರು ಪಂಚಾಯಿತಿ ನೆಮ್ಮಾರು ಎಸ್ಟೇಟ್ ಸುರೇಶ್ ಎಂಬುವವರ ಮನೆ ಛಾವಣಿ ಶೀಟ್ ಹಾರಿ ಹೋಗಿ ಹಾನಿಯುಂಟಾಗಿದೆ. ಮಾಣಿಬೈಲು ಸಮೀಪ ಸಿರಿಮನೆ ಕಿಗ್ಗಾ ಸಂಪರ್ಕ ರಸ್ತೆಯ ಬಳಿ ತುಂಗಾ ನದಿ ದಡದಲ್ಲಿ ಭೂಮಿ ಕುಸಿದಿದ್ದು ರಸ್ತೆ ಅಪಾಯದ ಸ್ಥಿತಿಯಲ್ಲಿದೆ. ತುಂಗಾ ನದಿ ಪ್ರವಾಹ ಪೀಡಿತ ಪ್ರದೇಶವಾದ ಗಾಂಧಿ ಮೈದಾನ, ಕುರುಬಗೇರಿ ಸೇರಿದಂತೆ ತಗ್ಗು ಪ್ರದೇಶಗಳು ಪ್ರವಾಹದ ಭೀತಿ ಎದುರಿಸುತ್ತಿವೆ.

ಕೆಲವೆಡೆ ರಸ್ತೆ ಸಮೀಪವೇ ಅಪಾಯಕಾರಿ ಮರಗಳಿದ್ದು ರಸ್ತೆ, ವಿದ್ಯುತ್ ಕಂಬ, ಲೈನ್ ಗಳ ಮೇಲೆ ಉರುಳಿ ಬೀಳುವ ಸ್ಥಿತಿಯಲ್ಲಿದೆ. ಈಗಾಗಲೇ ಬಹುತೇಕ ಮರಗಳು ಉರುಳಿಬಿದ್ದು ವಿದ್ಯುತ್ ಕಂಬಗಳು ತುಂಡಾಗಿದ್ದು, ಲೈನ್ ಗಳು ತಂಡಾಗಿವೆ. ಗುಡ್ಡಗಳು ಕುಸಿಯುತ್ತಿದೆ. ಮಳೆ ಮುಂದುವರಿದಲ್ಲಿ ಇನ್ನಷ್ಟು ಅಪಾಯಗಳು ಎದುರಾಗುವ ಸಾದ್ಯತೆಗಳಿವೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ,ಪರಿಶೀಲನೆ

ತಾಲೂಕಿಗೆ ಶುಕ್ರವಾರ ಮಧ್ಯಾಹ್ನ ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೊಳಿ ಭೇಟಿ ನೀಡಲಿದ್ದಾರೆ. ಗಾಳಿ ಮಳೆ ಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಮೂಡಿಗೆರೆಯಲ್ಲಿ ಪರಿಶೀಲನೆ ನಂತರ ಮಧ್ಯಾಹ್ನ ಶೃಂಗೇರಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸಚಿವರೊಂದಿಗೆ ಶಾಸಕರು, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ನಂತರ ಶೃಂಗೇರಿಯಿಂದ ತೆರಳಲಿದ್ದಾರೆ.

29 ಶ್ರೀ ಚಿತ್ರ 3-

ಶೃಂಗೇರಿ ತಾಲೂಕಿನ ಹನುಮಂತನಗರದಲ್ಲಿ ಮಳೆಯಿಂದ ಗುಡ್ಡ ಕುಸಿದು, ಮನೆಗಳು ಅಪಾಯದ ಸ್ಥಿತಿಯಲ್ಲಿರುವುದು,

29 ಶ್ರೀ ಚಿತ್ರ 4-

ಶೃಂಗೇರಿ ಸಮೀಪ ಗಾಳಿ ಮಳೆಯಿಂದ ವಿದ್ಯುತ್ ಕಂಬ, ಲೈನ್ ಮೇಲೆ ಮರಬಿದ್ದು ಹಾನಿಗೊಳಗಾಗಿರುವುದು.