* ನದಿಗೆ ರಾಸಾಯನಿಕ ತ್ಯಾಜ್ಯ - 24 ಗಂಟೆಯೊಳಗಾಗಿ ಕಾರ್ಖಾನೆ ಮುಚ್ಚಿಸಿದ ಕುರಿತು ವರದಿ ಸಲ್ಲಿಸಲು ಆದೇಶಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲೆಯ ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು ಗುರುಗಂಗಾ, ಮಾಂಜ್ರಾ ನದಿಗೆ ರಾಸಾಯನಿಕ ತ್ಯಾಜ್ಯ ಹರಿಬಿಡುತ್ತಿರುವ ಬಗ್ಗೆ ಜನರು ಪ್ರತಿಭಟನೆ ನಡೆಸುತ್ತಿದ್ದು, ಈ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿದೆ. ಹೀಗಾಗಿ ಈ ಕೂಡಲೇ ತ್ಯಾಜ್ಯ ಹರಿಬಿಡುತ್ತಿರುವ 3 ಕೈಗಾರಿಕಾ ಘಟಕಗಳನ್ನು ಮುಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲೆಯ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿರುವ ಅವರು, ಮೆ.6H ಇಂಡಸ್ಟ್ರೀಸ್, ಮೆ. ಸತ್ಯದೀಪ್ತ ಕೆ. ಇಂಡಸ್ಟ್ರೀ ಮತ್ತು ಮೆ. ಹಿಮಾಲಯ ಕೈಗಾರಿಕಾ ಘಟಕಗಳನ್ನು ಕೂಡಲೇ ಜಾರಿಗೆ ಬರುವಂತೆ ಮುಚ್ಚುವ ಆದೇಶ ಹೊರಡಿಸಿ, ಅನುಸರಣಾ ವರದಿಯನ್ನು 24 ಗಂಟೆಯೊಳಗಾಗಿ ಈ ಕಚೇರಿಗೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
‘ಗುರುಗಂಗಾ ಉಳಿಸಿ’ ಜಾಥಾ, ಅಭಿಯಾನಕ್ಕೆ ಸರ್ಕಾರದ ಸ್ಪಂದನೆ :ಮಾಣಿಕನಗರದ ಹಳ್ಳಕ್ಕೆ, ಗುರುಗಂಗಾ ಮತ್ತು ಮಾಂಜ್ರಾ ನದಿಗಳಿಗೆ ಹುಮನಾಬಾದ್ ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಗಳಿಂದ ವಿಷಯುಕ್ತ ರಾಸಾ ಯನಿಕ ತ್ಯಾಜ್ಯ ಹರಿಸುತ್ತಿರುವ ಕಾರಣ ನದಿ ಕಲುಷಿತವಾಗಿ ಕೊಳಕುವಾಸನೆ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಜನ, ಜಾನುವಾರುಗಳಿಗೆ ಮಾರಕವಾದ ಕಾಯಿಲೆಗಳು ಬರುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದು ‘ಗುರುಗಂಗಾ ಉಳಿಸಿ’ ಎಂದು ಸಾರ್ವಜನಿಕರು ಜಾಥಾ, ಸಭೆ, ಪ್ರತಿಭಟನೆ ಹಾಗೂ ಅಭಿಯಾನ ಆರಂಭಿಸಿದ್ದಾರೆ ಎಂದೂ ಲಿಖಿತ ಸೂಚನೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳಲ್ಲಿ ಬಂದ ವರದಿಗಳ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವನಾಗಿ ಆಗಸ್ಟ್ 5ರಂದು ಜಿಲ್ಲಾಡಳಿತಕ್ಕೆ ಸ್ಪಷ್ಟ ಸೂಚನೆ ನೀಡಿ ಈ ಭಾಗದ ನೀರಿನ ಪರೀಕ್ಷೆ ಮಾಡಿಸಿ, ತ್ಯಾಜ್ಯ ಹರಿಸುತ್ತಿರುವ ಕೈಗಾರಿಕೆಗಳ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಜರುಗಿಸಿ, ಜಲ ಮೂಲ ಸಂರಕ್ಷಿಸಲು ಮತ್ತು 48 ಗಂಟೆಗಳ ಒಳಗಾಗಿ ಕೈಗೊಂಡ ಕ್ರಮದ ವರದಿ ಸಲ್ಲಿಸಲು ಸೂಚನೆ ನೀಡಲಾಗಿರುತ್ತದೆ ಇದಲ್ಲದೆ ಈ ಹಿಂದೆ ತಾವೇ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿದ್ದಾಗ, 20204ರ ಜುಲೈ 29ರಂದು ಮಾಲಿನ್ಯ ಹರಡುತ್ತಿದ್ದ 9 ಕೈಗಾರಿಕೆಗಳನ್ನು ಬಂದ್ ಮಾಡಲು ಹುಮನಾಬಾದ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಲಾಗಿತ್ತು ಎಂದೂ ಪತ್ರದಲ್ಲಿ ಸಚಿವರು ಉಲ್ಲೇಖಿಸಿದ್ದಾರೆ.
ಜಲ, ಪರಿಸರ ಸಂರಕ್ಷಣೆ, ಸಾರ್ವಜನಿಕರ ಹಿತದೃಷ್ಟಿ ಮತ್ತು ಸಮುದಾಯ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ಹಳ್ಳಕ್ಕೆ ಹರಿಸುತ್ತಿರುವ ಕೈಗಾರಿಕೆಗಳನ್ನು ಬಂದ್ ಮಾಡಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಈಶ್ವರ ಖಂಡ್ರೆ ನಿರ್ದೇಶನ ನೀಡಿದ್ದಾರೆ.
-----ಬಾಕ್ಸ್---
ಹೋರಾಟದ ಚುಕ್ಕಾಣಿ ಹಿಡಿದಿದ್ದಮಾಣಿಕನಗರ ಸಂಸ್ಥಾನ
ಕಲುಷಿತಗೊಳ್ಳುತ್ತಿರುವ ಜಲಮೂಲಗಳ ಸಂಕಷ್ಟವನ್ನರಿತು, ಭವಿಷ್ಯದಲ್ಲಿ ಆಗುವ ಅನಾಹುತಗಳನ್ನು ಅರಿತು ಮಾಣಿಕನಗರದ ಸಂಸ್ಥಾನ ಜನಪರವಾದಿ ಹೋರಾಟಕ್ಕೆ ಬೆಂಬಲಿಸಿ ಚುಕ್ಕಾಣಿ ಹಿಡಿದಿತ್ತು. ಆನಂದರಾಜ್ ಮಹಾರಾಜ್ ನೇತೃತ್ವ ವಹಿಸಿದ್ದರಿಂದ ಪಕ್ಷ ಬೇಧವಿಲ್ಲದೆ ಎಲ್ಲರ ಬೆಂಬಲ ಪಡೆದ ಹೋರಾಟದ ಎಚ್ಚರಿಕೆ ಸರ್ಕಾರಕ್ಕೆ ನಾಟಿತ್ತು. ಇದೀಗ ಸರ್ಕಾರ ಉಗ್ರ ಹೋರಾಟದ ಸ್ವರೂಪ ಅರಿತು ತಕ್ಷಣವೇ ಕ್ರಮಕ್ಕೆ ಮುಂದಾಗಿ, ಜಿಲ್ಲಾಡಳಿತಕ್ಕೆ ಕಾರ್ಖಾನೆಗಳನ್ನು ಮುಚ್ಚಲು ಆದೇಶ ನೀಡಿದೆಯಾದರೂ ಅದು ಕಾರ್ಯರೂಪಕ್ಕೆ ಬರಬೇಕಿದೆ, ಕೆಲವೇ ದಿನಗಳಿಗೆ ಸೀಮಿತ ಈ ಕಣ್ಣಾ''''''''ಮುಚ್ಚಾಲೆ'''''''' ಆಟ ಎಂಬಂತಾಗದಿರಲಿ ಎಂಬುವುದು ಕಲುಷಿತ ನೀರಿನಿಂದ ಸಂಕಷ್ಟ ಎದುರಿಸುತ್ತಿರುವ ಗ್ರಾಮಸ್ಥರ ಅಳಲು.