ಹೊಸಪೇಟೆ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಸಂವಿಧಾನ ರಕ್ಷಣಾ ಸಮಿತಿ ಹಾಗೂ ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ನಗರದ ವಿಜಯನಗರ ಕಾಲೇಜ್ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಧರಣಿಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಸೋಮಶೇಖರ ಬಣ್ಣದಮನೆ, ಅಲೆಮಾರಿ ಸಮುದಾಯ ಪ್ರಮುಖರಾದ ಸಣ್ಣ ಮಾರೆಪ್ಪ ಸೇರಿದಂತೆ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ದಾದ ನಡೆಯಿತು.

ನಗರದಲ್ಲಿ ಮಟಕಾ ಚೀಟಿ ಬರೆಯುವವರು, ಪಡಿತರ ಅಕ್ಕಿ ಮಾರಿಕೊಳ್ಳುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು, ವಿದ್ಯಾರ್ಥಿಗಳ ಪರ ಹೋರಾಟ ಕೈಗೊಂಡಿರುವ ನಮ್ಮನ್ನು ಬಂಧಿಸುವುದು ಯಾವ ನ್ಯಾಯ? ನಾವು ವಿದ್ಯಾರ್ಥಿಗಳ ಪರವಾಗಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ಆದರೂ, ನಮ್ಮನ್ನು ವಶಕ್ಕೆ ಪಡೆಯುತ್ತಿದ್ದೀರಿ ಎಂದು ಸೋಮಶೇಖರ್ ಬಣ್ಣದಮನೆ ಪೊಲೀಸರ ವಿರುದ್ಧ ಹರಿಹಾಯ್ದರು. ಇದ್ಯಾವುದಕ್ಕೂ ಕಿವಿಗೊಡದ ಪೊಲೀಸರು ಪ್ರತಿಭಟನೆ ನಿರತರನ್ನು ಬಂಧಿಸಿ, ಕೆಲ ಸಮಯದ ಬಳಿಕ ಬಿಡುಗಡೆಗೊಳಿಸಿದರು.

ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ

ನಂತರ ಹೊಸಪೇಟೆ ತಹಸೀಲ್ದಾರ್ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ರಾಷ್ಟೖಪತಿಗೆ ಮನವಿ ಸಲ್ಲಿಸಿದರು.


ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಹಲವು ವಿದ್ಯಾರ್ಥಿಗಳ ಸಾವಿಗೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು. ಇಲ್ಲವೇ ರಾಷ್ಟ್ರಪತಿಗಳು ಮಧ್ಯೆಪ್ರವೇಶಿಸಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ರಕ್ಷಣಾ ಸಮಿತಿ ಪ್ರಮುಖರಾದ ಸೋಮಶೇಖರ್ ಬಣ್ಣದಮನೆ, ವೈ. ರಾಮಚಂದ್ರ ಬಾಬು, ಟಿ. ವಾಸುದೇವ್, ಸಣ್ಣ ಮಾರಪ್ಪ, ಓಬಳೇಶ್, ಮರಿಸ್ವಾಮಿ, ವೆಂಕಟೇಶ್ ಸ್ಲಂ, ಕೃಷ್ಣ ಮೊದಲಿಯರ್, ಜಂಬಯ್ಯ ನಾಯಕ, ತಾಯಪ್ಪ ನಾಯಕ, ಸ್ಲಂ ವೆಂಕಟೇಶ್ ರಾಮಚಂದ್ರ ಬಾಬು, ಪೀರ್ ಬಾಷಾ, ವಿಶಾಲ್ ಮಾಸ್ಟರ್, ವಾಸುದೇವ್, ಎಸ್‌ಡಿಪಿಐ ಮುಖಂಡರಾದ ನೂರ್ ಅಹ್ಮದ್, ಹುಸೇನ್, ಜಾವೇದ್, ಮರಿಸ್ವಾಮಿ, ಸಣ್ಣ ಮಾರೆಪ್ಪ, ಸಣ್ಣ ಈರಣ್ಣ, ಜೆಸಿ ಈರಣ್ಣ, ಪವನ್, ನಾಗರತ್ನಮ್ಮ, ಆರ್.ಎಸ್. ಬಸವರಾಜ್, ಸಜ್ಜತ್ ಖಾನ್, ರಾಮ್ ಮೋಹನ್, ವೀರಭದ್ರ ನಾಯಕ, ಪ್ರಮೋದ್ ಪುಣ್ಯಮೂರ್ತಿ, ಪ್ರಕಾಶ್, ಇಂತಿಯಾಜ್, ವಿದ್ಯಾರ್ಥಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.