ಸಾರಾಂಶ
ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಇತಿಹಾಸ ಗೊತ್ತಿಲ್ಲ. ಮುಸ್ಲಿಂ ತುಷ್ಟೀಕರಣಕ್ಕಾಗಿ ಇತಿಹಾಸ ತಿರುಚುವ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ವಾಗ್ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಇತಿಹಾಸ ಗೊತ್ತಿಲ್ಲ. ಮುಸ್ಲಿಂ ತುಷ್ಟೀಕರಣಕ್ಕಾಗಿ ಇತಿಹಾಸ ತಿರುಚುವ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ವಾಗ್ದಾಳಿ ನಡೆಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಮುಸ್ಲಿಮರ ವಿರೋಧಿಯಲ್ಲ. ಮುಸಲ್ಮಾನರೇ ಶಿವಾಜಿ ಮಹಾರಾಜರ ವಿರೋಧಿಯಾಗಿದ್ದರು. ಇತಿಹಾಸದ ಪುಟಗಳನ್ನು ತೆರೆದು ನೋಡಲಿ. ಶಿವಾಜಿ ಮಹಾರಾಜರ ಮಗ ಸಂಭಾಜಿ ಮಹಾರಾಜನನ್ನು ಕೊಂದಿದ್ದು ಔರಂಗಜೇಬ್, ತಾನೊಬ್ಬ ಮರಾಠಾ ಎಂದು ಹೇಳಿಕೊಳ್ಳುವ ಸಚಿವ ಲಾಡ್ ಶಿವಾಜಿ ಮಹಾರಾಜರ ಇತಿಹಾಸವನ್ನೇ ಸರಿಯಾಗಿ ತಿಳಿದಿಲ್ಲ. ಇತಿಹಾಸ ತಿಳಿದು ಮಾತನಾಡಲಿ ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದರು.ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಸ್ಥಾಪಿಸಲು ಕಾಂಗ್ರೆಸ್ ಆಡಳಿತ ಪರವಾನಗಿ ನೀಡಿಲ್ಲ. ಆಗ ತೆಪ್ಪಗಿದ್ದ ಲಾಡ್ ಈಗ ನಾನೊಬ್ಬ ಮರಾಠಾ ಎಂದರೆ ಜಿಲ್ಲೆಯ ಜನರು ನಂಬುತ್ತಾರೆಯೇ ಎಂದು ಪ್ರಶ್ನಿಸಿದರು.
ಇಲ್ಲಿಯ ಮುಸ್ಲಿಮ ಪೂರ್ವಜರು ಹಿಂದುಗಳೇ ಆಗಿದ್ದರು. ಭಯದಿಂದ ಮತಾಂತರಗೊಂಡಿದ್ದಾರೆ. ಆದರೆ ಇತಿಹಾಸ ತಿಳಿದುಕೊಳ್ಳದೆ ಸಚಿವರು ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ. ಇದೊಂದು ರಾಷ್ಟ್ರೀಯತೆ ವಿಷಯವಾಗಿದ್ದು, ಎಲ್ಲ ಹಿಂದುಗಳು ಖಂಡಿಸಬೇಕು ಎಂದು ಕರೆ ನೀಡಿದರು.ಬಾಗಲಕೋಟೆಯ ಕೆರೂರು ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿತ್ತು. ಕೆಐಎಡಿಬಿಯಿಂದ ಭೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ರೈತರ ವಿರೋಧದಿಂದಾಗಿ ಯೋಜನೆ ಪ್ರಾರಂಭವಾಗಿಲ್ಲ. ಸಂಸದ ಗದ್ದಿಗೌಡರು ಪ್ರಚಾರಪ್ರಿಯರಲ್ಲ. ಆದ್ದರಿಂದ ಈ ವಿಷಯ ಕಾಂಗ್ರೆಸ್ಗೆ ತಿಳಿದಿಲ್ಲ ಎಂದರು.