ಸಾರಾಂಶ
ತುಮಕೂರು: ಕಲ್ಪತರುನಾಡು ತುಮಕೂರಿನ ದೈನಂದಿನ ಪ್ರಯಾಣಿಕರ ಅನುಕೂಲಕ್ಕಾಗಿ ಮೆಮು ರೈಲನ್ನು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಸೆ.27 ರಂದು ಬೆಳಿಗ್ಗೆ 8.30ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶಾಸಕ ಜ್ಯೋತಿಗಣೇಶ್ ತಿಳಿಸಿದರು. ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ತುಮಕೂರಿನಿಂದ ಬೆಂಗಳೂರಿಗೆ ನಾನಾ ಕೆಲಸ ಕಾರ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದನ್ನು ಮನಗಂಡ ಸಚಿವ ವಿ.ಸೋಮಣ್ಣ ಅವರು ಸಂಸದರಾಗಿ, ಮಂತ್ರಿಗಳಾದ ಕೇವಲ 3 ತಿಂಗಳಲ್ಲೇ ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತುಮಕೂರು-ಯಶವಂತಪುರಕ್ಕೆ ಪ್ರತಿನಿತ್ಯ ಎರಡು ಬಾರಿ ಸಂಚರಿಸುವ ಹೊಸ ಮೆಮು ರೈಲುಗಳ ಸಂಚಾರಕ್ಕೆ ನಗರದ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಲಿದ್ದಾರೆ ಎಂದರು.
ಕೇಂದ್ರ ಸಚಿವ ಸೋಮಣ್ಣ ಅವರು ಸಂಸದರಾಗಿ, ಮಂತ್ರಿಯಾದ ಕೇವಲ 3-4 ತಿಂಗಳಲ್ಲಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ 300 ರಿಂದ 400 ಕೋಟಿ ರು.ಗಳನ್ನು ರೈಲ್ವೆ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರು ಮಾಡಿಸಿದ್ದಾರೆ. ತುಂಬಾ ಬೇಡಿಕೆ ಇದ್ದ ರೈಲುಗಳ ಚಾಲನೆಗೆ ಕ್ರಮ ಕೈಗೊಂಡಿದ್ದಾರೆ. ಮೊದಲ ಹಂತವಾಗಿ ಹೊಸ ಮೆಮೋ ರೈಲು ಸಂಚಾರಕ್ಕೆ ಸೆ.27 ರಂದು ಚಾಲನೆ ನೀಡುತ್ತಿದ್ದಾರೆ ಎಂದರು.ಇದುವರೆಗೂ ತುಮಕೂರು ರೈಲು ನಿಲ್ದಾಣದ ಅಭಿವೃದ್ಧಿಗೆ ಕೇವಲ 18-20 ಕೋಟಿ ರೂ. ಮಂಜೂರಾಗುತ್ತಿತ್ತು. ಆದರೆ ಸೋಮಣ್ಣ ಅವರು ರೈಲ್ವೆ ಸಚಿವರಾದ ಬಳಿಕ 100ಕೋಟಿಗೂ ಹೆಚ್ಚು ಅನುದಾನದಲ್ಲಿ ರೈಲ್ವೆ ನಿಲ್ದಾಣ ಮೇಲ್ದರ್ಜೇಗೇರಿಸಲು ಕ್ರಮ ಕೈಗೊಂಡಿದ್ದಾರೆ. ಇದು ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಧ್ಯೋತಕವಾಗಿದೆ ಎಂದರು.ತುಮಕೂರು ರೈಲ್ವೆ ನಿಲ್ದಾಣದಲ್ಲಿ ಸೆ.27 ರಂದು ಬೆಳಿಗ್ಗೆ 8.30ಕ್ಕೆ ನಡೆಯಲಿರುವ ಹೊಸ ಮೆಮು ರೈಲು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.ತುಮಕೂರು ರೈಲ್ವೆ ನಿಲ್ದಾಣದಲ್ಲಿ ವಂದೇಭಾರತ್ ರೈಲು ನಿಲುಗಡೆಯಾಗುತ್ತಿರಲಿಲ್ಲ. ಸೋಮಣ್ಣ ಅವರು ಮಂತ್ರಿಯಾದ ಬಳಿಕ ಪ್ರಧಾನಮಂತ್ರಿಗಳ ಬಳಿ ಚರ್ಚಿಸಿ ಒಪ್ಪಿಗೆ ಪಡೆದು ವಂದೇ ಭಾರತ್ ರೈಲು ನಿಲುಗಡೆಗೂ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ತ್ವರಿತಗತಿಯಲ್ಲಿ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ನಡೆಯಲು ಸಹ ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹಾಗೂ ರೈಲ್ವೆ ಇಲಾಖೆಯ ಅಭಿವೃದ್ಧಿಗೆ ಮುಂದಾಗಿರುವ ಸಚಿವರಿಗೆ ಕ್ಷೇತ್ರದ ಜನರ ಪರವಾಗಿ ಅವರು ಅಭಿನಂದನೆ ಸಲ್ಲಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಜೆಡಿಎಸ್ ಮುಖಂಡ ಟಿ.ಆರ್.ನಾಗರಾಜು, ಜಿ.ಪಂ ಮಾಜಿ ಸದಸ್ಯ ವೈ.ಎಚ್.ಹುಚ್ಚಯ್ಯ ಮತ್ತಿತರರು ಉಪಸ್ಥಿತರಿದ್ದರು.ಆರು ದಿನ ಸಂಚಾರ
ಈ ಹೊಸ ಮೆಮು ರೈಲು ಭಾನುವಾರ ಹೊರತುಪಡಿಸಿ ವಾರದ 6 ದಿನ ಸಂಚರಿಸಲಿದ್ದು, ತುಮಕೂರಿನಿಂದ ಬೆಳಿಗ್ಗೆ 8.45ಕ್ಕೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ಮತ್ತೆ ಈ ರೈಲು ಸಂಜೆ 5.40ಕ್ಕೆ ಬೆಂಗಳೂರಿನ ಯಶವಂತಪುರದಿಂದ ಹೊರಟು 7.50ಕ್ಕೆ ತುಮಕೂರು ತಲುಪಲಿದೆ ಎಂದು ಮಾಹಿತಿ ನೀಡಿದರು.